ಕರ್ನಾಟಕ ಬಂದ್ : ತರಹೇವಾರಿ ಟ್ವಿಟ್ಟರ್ ಟಿಪ್ಪಣಿಗಳು
ಬೆಂಗಳೂರು, ಏ. 18 : 'ಬಂದ್' ಅಂದ್ರೆ ಒಬ್ಬೊಬ್ಬರಿಗೆ ಒಂದೊಂದು ಭಾವ. ಇದರಿಂದ ಏನು ಲಾಭ? ನಷ್ಟವೇ ಹೆಚ್ಚು ಅನ್ನುವವರು ಒಬ್ಬರಾದರೆ, ಅಬ್ಬ ಸದ್ಯ ರಜಾ ಸಿಕ್ತಲ್ಲ ಅಂತ ಖುಷಿ ಪಡುವವರು ಮತ್ತೊಬ್ಬರು. ಕೆಲವರು ಎದೆಯಲ್ಲಿ ಕಿಚ್ಚು ತುಂಬಿಕೊಂಡಿದ್ದರೆ, ಹಲವರಿಗೆ 'ಅಯ್ಯೋ ಏನಾದ್ರೂ ಮಾಡಿಕೊಳ್ಳಲಿ' ಎಂಬ ನಿರ್ಲಿಪ್ತತೆಯ ಪರಮಾವಧಿ.
ಮೇಕೆದಾಟು ಯೋಜನೆಗಾಗಿ ಕರೆದಿರುವ ಕರ್ನಾಟಕ ಬಂದ್ ಈ ಬಾರಿ ವೀಕೆಂಡಲ್ಲಿ ಬಂದಿದೆ. ಕರ್ನಾಟಕದ ಬಗ್ಗೆ ಕಾಳಜಿ, ಕುಡಿಯುವ ಕಾವೇರಿ ನೀರಿನ ಮಹತ್ವ ಅರಿತವರಿಗೆ ಮಾತ್ರ ಕರ್ನಾಟಕ ಬಂದ್ ಅರ್ಥಪೂರ್ಣವಾಗಿ ಕಾಣಿಸುತ್ತದೆ. ಇಲ್ಲದಿದ್ದರೆ, ವೇಸ್ಟ್ ಆಫ್ ಟೈಮ್, ವೇಸ್ಟ್ ಆಫ್ ಎನರ್ಜಿ, ವೇಸ್ಟ್ ಆಫ್ ಮ್ಯಾನ್ ಪವರ್ ಅಂತ ಜರಿಯುವ 'ಕನ್ನಡಿಗರೇ' ಇಲ್ಲಿ ಜಾಸ್ತಿ. [ಕನ್ನಡಿಗರನ್ನು ಕೆಣಕುತ್ತಿರುವ ಮದ್ರಾಸಿ]
ಏನೇ ಇರಲಿ, ಟ್ವಿಟ್ಟರಲ್ಲಂತೂ ತರಹೇವಾರಿ ಹೇಳಿಕೆಗಳು, ಅನಿಸಿಕೆಗಳು, ಹೊಗಳಿಕೆಗಳು, ತೆಗಳಿಕೆಗಳು, ಆಶಾವಾದಗಳು, ನಿರಾಶಾವಾದಗಳು, ವ್ಯಂಗ್ಯಭರಿತ ಟೀಕೆಗಳು, ಸತ್ವಯುತ ಟಿಪ್ಪಣಿಗಳು ಹರಿದುಬರುತ್ತಿವೆ. ಅವರವರ ಮನದಲ್ಲಿ ಏನೇನಿದೆ ಎಂದು ಅವರ ಟ್ವೀಟುಗಳು ಸಾರಿಸಾರಿ ಹೇಳುತ್ತವೆ. [ಕರ್ನಾಟಕ ಬಂದ್ ಲೈವ್ ಅಪ್ಡೇಟ್ಸ್]
|
ವೀಕೆಂಡ್ ಮಜಾ ಹಾಳಾಯ್ತಲ್ಲಪ್ಪೋ!
ಬಸ್ಸಿಲ್ಲ, ಪೆಟ್ರೋಲ್ ಸಿಗಲ್ಲ, ಕಾರು ಹೊರಗೆ ತೆಗೆಯಂಗಿಲ್ಲ, ಪಿಚ್ಚರಿಗೆ ಹೋಗಂಗಿಲ್ಲ, ಹೋಟೆಲು ರುಚಿ ನೋಡಂಗಿಲ್ಲ. ವೀಕೆಂಡ್ ಮಜಾ ಹಾಳಾಯ್ತಲ್ಲಪ್ಪೋ ಹಾಳಾಯ್ತು!
|
ಜನರಲ್ಲಿ ಪೊಲೀಸ್ ಆಯುಕ್ತ ರೆಡ್ಡಿ ಮನವಿ
ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಹಾಗೂ ನಮ್ಮೊಂದಿಗೆ ಪರಿಶೀಲಿಸದೇ ಯಾವುದೇ ರೀತಿಯ ಸಂದೇಶಗಳನ್ನು ರವಾನಿಸಬೇಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಟ್ವಿಟ್ಟರಿನಲ್ಲಿ ಸಂದೇಶ ರವಾನಿಸಿದ್ದಾರೆ.
|
ನಿಜವಾಗ್ಲೂ ವಿವೇಕದ ಮಾತಾ?
ಕರ್ನಾಟಕದ ಹಲವಾರು ಪ್ರದೇಶಗಳು ಬಂದ್ಗೆ ಬೆಂಬಲ ನೀಡದಿರುವುದು ಒಳ್ಳೆಯದೆ. ಬಂದ್ನಿಂದ ಏನೂ ಸಾಧಿಸುವುದು ಆಗುವುದಿಲ್ಲ. ಅದು ನಿರುಪಯೋಗಿ, ಜನವಿರೋಧಿ ಅಂತಾರೆ ವಿವೇಕ್. ನಿಜವಾಗ್ಲೂ ವಿವೇಕದ ಮಾತಾ?
|
ನೀರಿಗಾಗಿಯಾದರೂ ಡ್ಯಾಂ ಬೇಕೇಬೇಕು
ತಮಿಳಿಗರೆ, ಬೆಂಗಳೂರಿನಲ್ಲಿ ಶೇ.25ರಷ್ಟು ತಮಿಳುನಾಡಿನವರೇ ಇದ್ದಾರೆ. ಕರ್ನಾಟಕ ಬಂದ್ ಮಾಡಿರುವುದು ನೀರಿಗಾಗಿ. ಬೆಂಗಳೂರಿಗೆ ನೀರು ಪೂರೈಸಲಿಕ್ಕಾದರೂ ಡ್ಯಾಂ ಬೇಕೇಬೇಕು.
|
ನನ್ನವಳ ಮನದ ಬಾಗಿಲು ಮುಚ್ಚಿತು
'ನನ್ನವಳ ಜೊತೆ ಪ್ರೇಮ ಸಲ್ಲಾಪ ಮಾಡಲು ಹೊರಟೆ, ಅವಳ ಮನದ ಬಾಗಿಲು ಮುಚ್ಚಿತು' ಅಂತ ಕರ್ನಾಟಕ ಬಂದ್ ಕುರಿತು ಮಾರ್ಮಿಕವಾಗಿ ಕವಿತೆಯೊಂದನ್ನು ರಚಿಸಿದ್ದಾರೆ ರಸಿಕ ಕವಿಯೊಬ್ಬರು
|
ನೀರಿನ ಬಗ್ಗೆ ಸಾಕ್ಷಿಪ್ರಜ್ಞೆ ಸತ್ತುಹೋಗಿದೆ!
ಎಂತಹ ವ್ಯವಸ್ಥೆಯಲ್ಲಿ ನಾವಿದ್ದೀವಿ? ನೈಸರ್ಗಿಕವಾಗಿ ಸಿಗುವ ನೀರನ್ನು ನಿರ್ಲಕ್ಷಿಸುತ್ತೇವೆ, ಪೂರೈಕೆಯಾದ ನೀರು ಚರಂಡಿ ಪಾಲಾಗುತ್ತಿರುತ್ತದೆ. ನೀರಿನ ಬಗ್ಗೆ ಸಾಕ್ಷಿಪ್ರಜ್ಞೆ ಸತ್ತುಹೋಗಿದೆ ಅಂತಾರೆ ಶಕುಂತಲಾ ಅಯ್ಯರ್.
|
ಬಂದ್ ಶನಿವಾರ ತಾನೆ, ಪರವಾಗಿಲ್ಲ
ಬಂದ್ ಶನಿವಾರ ತಾನೆ ಬಂದಿದೆ, ಪರವಾಗಿಲ್ಲ ಅಂತ ಸ್ವಲ್ಪ ಜನ ತಲೆ ಕೆಡಿಸಿಕೊಂಡಿಲ್ಲ. ಆದರೆ, ತಮಿಳುನಾಡಿಗೆ ಬುದ್ಧಿ ಕಲಿಸಲೇಬೇಕು ಎಂದು ಗರಿಷ್ಠ ಕನ್ನಡಿಗರು ಮತಗಟ್ಟೆಯಲ್ಲಿ ಓಟ್ ಹಾಕಿದ್ದಾರೆ.
|
ಕನ್ನಡಿಗರನ್ನು ಕೆಣಕುತ್ತಿರುವ ತಮಿಳರು
ಕನ್ನಡ ಹೋರಾಟಗಾರರು ತಮ್ಮ ಶೌರ್ಯವನ್ನು ಸ್ಥಳೀಯರಿಗೆ ಮಾತ್ರ ತೋರಿಸುತ್ತಾರೆ, ಬಹುರಾಷ್ಟ್ರೀಯ ಕಂಪನಿಗಳಿಗಲ್ಲ ಅಂತ ಮದ್ರಾಸಿಯೊಬ್ಬ ಕನ್ನಡಿಗರನ್ನು ಕೆಣಕಿದ್ದಾನೆ.