ವಿಡಿಯೋ: ಕಡಲೆಕಾಯಿ ಪರಿಷೆಯಲ್ಲಿ ಸರವಣ ಏರುದನಿ
ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಜೆಡಿಎಸ್ ಪ್ರತಿನಿಧಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸರವಣ ಅವರು ಬಿಜೆಪಿಯ ಮುಖಂಡರ ಜತೆ ತೀವ್ರ ವಾಗ್ವಾದ ನಡೆಸಿದರು.
ಬೆಂಗಳೂರು, ನವೆಂಬರ್, 28: ಐತಿಹಾಸಿಕ ದೊಡ್ಡ ಬಸವನಗುಡಿ ದೇವಸ್ಥಾನದ ಕಡಲೆಕಾಯಿ ಪರಿಷೆಯಲ್ಲಿ ಜೆಡಿಎಸ್ ಪಕ್ಷದ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಬಿಜೆಪಿ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಬಿಜೆಪಿಯ ಬಿಬಿಎಂಪಿ ಮಹಾನಗರ ಪಾಲಿಕೆ ಸದಸ್ಯರಾದ ಕಟ್ಟೆ ಸತ್ಯನಾರಾಯಣ, ಸಂಗಾತಿ ವೆಂಕಟೇಶ್ ಮತ್ತು ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಹ್ಮಣ್ಯ ಅವರೊಂದಿಗೆ ಜಾತ್ರೆಯಲ್ಲೇ ತೀವ್ರ ವಾಗ್ವಾದ ನಡೆಸಿದರು.
"ಕೇವಲ ಬಿಜೆಪಿ ಮುಖಂಡರ ಹೆಸರುಗಳು ಮಾತ್ರ ಕಾಣುವಂತೆ ಕಟೌಟ್ ಗಳನ್ನು ಹಾಕಿಸಿದ್ದೀರಾ? ನಾನು ಈ ಭಾಗದಲ್ಲಿರುವ ಶಾಸಕನಲ್ಲವೆ? ನಮ್ಮನೇಕೆ ಕಡೆಗಣಿಸಿದ್ದೀರಿ ಎಂದು ಮಾಜಿ ಮೇಯರ್ ಬಿ.ಎನ್.ಸತ್ಯನಾರಾಯಣ ಅವರನ್ನು ಪ್ರಶ್ನಿಸಿದರು.
'ಸರಿ ಆಯ್ತು' ಎಂದು ಸಮಾಧಾನ ಪಡಿಸಲು ಮುಂದಾದ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರನ್ನೂ ತರಾಟೆಗೆ ತೆಗೆದುಕೊಂಡ ಸರವಣ "ನಿಮ್ದು ಜಾಸ್ತಿ ಆಯ್ತು, ದೇವೇಗೌಡರು ಕಟೌಟ್ ಗಳನ್ನು ನೋಡಿ ಬೇಜಾರು ಮಾಡಿಕೊಂಡು ಹೋದರು ಅವರ ನೋವು ನನಗೆ ಗೊತ್ತಿದೆ ಎಂದು" ರೇಗಿದರು.
"ಬಿಜೆಪಿ ಮುಖಂಡರೂ ಸಹ ವಾಗ್ವಾದಕ್ಕೆ ಇಳಿದಾಗ "ನೀವು ತಪ್ಪು ಮಾಡುತ್ತಿದ್ದೀರಿ ಎಂದು ನಾವು ಕೇಳಬಾರದೆ? ನಮಗೆ ಹಕ್ಕಿಲ್ಲವೆ" ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು.
ಈ ಬಗ್ಗೆ ಒನ್ಇಂಡಿಯಾ ಕನ್ನಡ ಜತೆ ಮಾತನಾಡಿದ ಸರವಣ ಅವರು "ಬೆಂಗಳೂರು ಕಡಲೆಕಾಯಿ ಪರಿಷೆ ಮುಜರಾಯಿ ಇಲಾಖೆಯಿಂದ ಮಾಡುವಂತಹುದು, ಯಾವುದೇ ಪಕ್ಷದ ವತಿಯಿಂದ ಮಾಡುವಂಥದ್ದಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ನಗರವನ್ನು ಪ್ರತಿನಿಧಿಸುವ ಜೆಡಿಎಸ್ ನ ಉಪಮೇಯರ್ ಆನಂದ್ ಅವರ ಭಾವಚಿತ್ರವನ್ನು ಮತ್ತು ಈ ಭಾಗದಲ್ಲೇ ಇರುವ ನಾನು ಸಹ ಒಬ್ಬ ಶಾಸಕ ನನ್ನ ಭಾವಚಿತ್ರವನ್ನೂ ಸಹ ಹಾಕಿಲ್ಲ. ನಮ್ಮ ಹೆಸರೂ ಇಲ್ಲ. ಇದರಿಂದ ನಮಗೆ ನೋವು ನೋವಾಗಿದೆ"
"ಈ ಕುರಿತು ಸದನದಲ್ಲಿ ಪ್ರಸ್ತಾಪಿಸಲು ಎಲ್ಲಾ ಸಿದ್ಧತೆ ನಡೆಸಿದ್ದೇನೆ. ಕಾರ್ಯಕ್ರಮದ ಹೊಣೆ ಹೊರುವವರು ಇದಕ್ಕೆ ಉತ್ತರ ನೀಡಬೇಕು ಎಂದು ಸಭಾಪತಿಗಳಿಗೆ ದೂರು ನೀಡುತ್ತೇನೆ" ಎಂದು ಅವರು ತಿಳಿಸಿದರು.