'ರಾಹುಲ್ ಕೇಜ್ರಿಗಿಂತ ಮೋದಿ ಬೆಟರ್ ಎಂದಿಲ್ಲ'
(ಸಂತೋಷ್ ಹೆಗ್ಡೆ ಸಂದರ್ಶನದ ಮುಂದುವರಿದ ಭಾಗ)
ಒನ್ಇಂಡಿಯಾ : ರಾಹುಲ್ ಮತ್ತು ಕೇಜ್ರಿವಾಲ್ ಗಿಂತ ಮೋದಿ ಬೆಟರ್ ಎಂದು ಹೇಳಿಕೆ ನೀಡಿದ್ದಿರಿ. ಇದಕ್ಕೇನಂತೀರಿ?
ಸಂತೋಷ್ ಹೆಗ್ಡೆ : ಮೋದಿ ಪ್ರಧಾನಿ ಆಗಬೇಕೋ ಆಗಬಾರದೋ ಎಂಬುದು ನನ್ನ ವೈಯಕ್ತಿಕ ವಿಚಾರ. ನಾನು ಯಾವುದೇ ರಾಜಕೀಯ ಪಕ್ಷವನ್ನಾಗಲಿ ಅಭ್ಯರ್ಥಿಯನ್ನಾಗಲಿ ಬೆಂಬಲಿಸುವುದಿಲ್ಲ. ಮಾಧ್ಯಮಗಳ ಮುಂದೆ ಹೇಳುವಾಗ ಬೇರೆಯವರಿಗೆ ಸಲಹೆ ಅಥವಾ ಶಿಫಾರಸು ಮಾಡುವಂಥ ಕೆಲಸ ನಾನು ಮಾಡುವುದಿಲ್ಲ. ಮಾಧ್ಯಮದವರು ಕೇಳಿದ್ದೇನೆಂದರೆ, ರಾಹುಲ್, ಕೇಜ್ರಿವಾಲ್ ಮತ್ತು ನರೇಂದ್ರ ಮೋದಿ ಮೂವರಲ್ಲಿ ಯಾರು ಪ್ರಧಾನಿ ಆಗಬೇಕು. ನಾನು ಮೂರೇ ಯಾಕೆ ಎಂದು ಕೇಳಿದೆ. ಇಲ್ಲ ಸರ್, ಎಲ್ಲರಿಗೂ ಮೂವರ ಹೆಸರನ್ನು ಮಾತ್ರ ಕೇಳುತ್ತಿದ್ದೇವೆ ಎಂಬ ಉತ್ತರ ಬಂದಿತು.
ಅದ್ಹೇಗೆ ಸಾಧ್ಯ, ಪ್ರಧಾನಿ ಹುದ್ದೆಗೆ ನನ್ನ ಹೆಸರನ್ನೂ ಸೇರಿಸಿಕೊಳ್ಳಿ. ಅವರು ಕೇಳದಿದ್ದಾಗ ನಾನು ಹೇಳಿದೆ, ರಾಹುಲ್ ಗಾಂಧಿ ಡೈನ್ಯಾಸ್ಟಿ ಆಡಳಿತವನ್ನು ನಾನು ಒಪ್ಪುವುದಿಲ್ಲ, ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳಿಂದ ಕೇಜ್ರಿವಾಲ್ ಅವರ ಮೇಲೆ ನಂಬಿಕೆಯಿಲ್ಲ. ಇನ್ನು ಉಳಿದದ್ದು ಯಾರು? ಅದಕ್ಕೆ ಮಾಧ್ಯಮದವರು ಬರೆದಿದ್ದೇನೆಂದರೆ, ರಾಹುಲ್ ಮತ್ತು ಕೇಜ್ರಿವಾಲ್ ಗಿಂತ ಮೋದಿಯೇ ಲೇಸು ಎಂದು. ಇದರರ್ಥ ಮೋದಿಯವರನ್ನು ನಾನು ಬೆಂಬಲಿಸುತ್ತೇನೆ, ಶಿಫಾರಸು ಮಾಡುತ್ತೇನೆ ಎಂದರ್ಥವಲ್ಲ. ಇನ್ ದಿ ಕಿಂಗಡಂ ಆಫ್ ಬ್ಲೈಡ್ಸ್ ಒನ್ ಐಯ್ಡ್ ಈಸ್ ದಿ ಕಿಂಗ್ ಅಂತಾರೆ (ಗಹಗಹಿಸಿ ನಕ್ಕ ಹೆಗ್ಡೆ).
ಒನ್ಇಂಡಿಯಾ : ಕೇಜ್ರಿವಾಲ್ ಅವರು ಭ್ರಷ್ಟ ರಾಜಕಾರಣಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅವರಲ್ಲಿ ನಮ್ಮ ರಾಜ್ಯದ ನಾಲ್ವರು ಕೂಡ ಇದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಸಂತೋಷ್ ಹೆಗ್ಡೆ : ಭ್ರಷ್ಟರು ಎಂಬ ಪುರಾವೆ ಇದ್ದರೆ ಹೆಸರು ಹೇಳಲು ಅಡ್ಡಿಯಿಲ್ಲ. ಆದರೆ ಪುರಾವೆ ಇಲ್ಲದಿದ್ದರೆ ಹೇಳುವಹಾಗಿಲ್ಲ. ರಾಜಕೀಯ, ಅಧಿಕಾರದಲ್ಲಿದ್ದವರೆಲ್ಲ ಭ್ರಷ್ಟರಲ್ಲ. ಪಟ್ಟಿಯಲ್ಲಿದ್ದವರೆಲ್ಲ ಈಗಾಗಲೆ ಲೀಗಲ್ ನೋಟೀಸ್ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಪಟ್ಟಿ ಮಾಡಿದವರೆಲ್ಲ ಭ್ರಷ್ಟರು ಹೌದೋ ಅಲ್ಲವೋ ಎಂದು ನಾನು ಹೇಳುವುದಿಲ್ಲ. ಅದನ್ನು ಅವರೇ ಹೇಳಬೇಕು ಮತ್ತು ಪ್ರೂವ್ ಮಾಡಬೇಕು.
ಒನ್ಇಂಡಿಯಾ : ಈಗಿನ ಸಿದ್ದರಾಮಯ್ಯ ಸರಕಾರದ ಬಗ್ಗೆ ನಿಮ್ಮ ಅನಿಸಿಕೆ ಏನು? ಈ ಸರಕಾರಕ್ಕೆ ಎಷ್ಟು ಅಂಕ ಕೊಡುತ್ತೀರಿ?
ಸಂತೋಷ್ ಹೆಗ್ಡೆ : ಸರಕಾರ ಬದಲಾವಣೆ ಆಗಿದೆಯೇ ಹೊರತು ಈ ಏಳೆಂಟು ತಿಂಗಳಲ್ಲಿ ಅಂತಹ ಯಾವ ಬದಲಾವಣೆಯನ್ನೂ ತಂದಹಾಗೆ ಕಾಣುವುದಿಲ್ಲ. ಅಕ್ರಮ ಗಣಿ ಹಗರಣದ ವಿರುದ್ಧ ನಾವೇ ಹೋರಾಟ ಮಾಡಿದವರು, ಬೆಂಗಳೂರಿಂದ ಬಳ್ಳಾರಿವರೆಗೆ ಪಾದ್ರೆ ಮಾಡಿದವರು ನಾವು, ನಮ್ಮ ಸರಕಾರ ಬಂದ ತಕ್ಷಣ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದರು. ಆದರೆ ಏನೂ ಮಾಡಿಲ್ಲ. ಕಾಂಗ್ರೆಸ್ ಒಂದೇ ಅಲ್ಲ ಈ ಹಗರಣದಲ್ಲಿ ಜೆಡಿಎಸ್, ಬಿಜೆಪಿ ಪಕ್ಷದವರೂ ಇದ್ದಾರೆ.