ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀನ ದಲಿತರ ಉದ್ಧಾರವೇ ಸಾಮಾಜಿಕ ನ್ಯಾಯ : ಅನ್ಸಾರಿ

ಸಾಮಾಜಿಕ ನ್ಯಾಯವೆಂದರೆ ದೀನ, ದಲಿತ, ಬುಡಕಟ್ಟು ಹಾಗೂ ನಿರ್ಲಕ್ಷಿತ ಸಮಾಜದ ಹಕ್ಕುಗಳನ್ನು ಎತ್ತಿಹಿಡಿಯುವುದು. ಅವರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದೇ ಆಗಿದೆ - ಹಮೀದ್ ಅನ್ಸಾರಿ.

By Prasad
|
Google Oneindia Kannada News

ಬೆಂಗಳೂರು ಡಿಸೆಂಬರ್ 27 : ಸಾಮಾಜಿಕ ಅಸಮಾನತೆಯನ್ನು ತೊಡೆದು ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುವಲ್ಲಿ ನ್ಯಾಯಾಂಗ ಶ್ರಮಿಸಬೇಕೆಂದು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಮಹಮ್ಮದ್ ಹಮೀದ್ ಅನ್ಸಾರಿ ಅವರು ತಿಳಿಸಿದ್ದಾರೆ.

ಭಾರತೀಯ ವಕೀಲರ ಸಂಘ ಮಂಗಳವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 9ನೇ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ನ್ಯಾಯಾಂಗವು ಸಂವಿಧಾನದ ಮುಖ್ಯ ಅಂಗವಾಗಿದ್ದು, ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವುದರ ನಿಟ್ಟಿನಲ್ಲಿ ಸಹಕರಿಸಬೇಕು. ಸಾಮಾಜಿಕ ನ್ಯಾಯವೆಂದರೆ ದೀನ, ದಲಿತ, ಬುಡಕಟ್ಟು ಹಾಗೂ ನಿರ್ಲಕ್ಷಿತ ಸಮಾಜದ ಹಕ್ಕುಗಳನ್ನು ಎತ್ತಿಹಿಡಿಯುವುದು. ಅವರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದೇ ಆಗಿದೆ ಎಂದರು. [ರಾಷ್ಟ್ರಗೀತೆಗೆ ಅಗೌರವ: ಹಮೀದ್ ಅನ್ಸಾರಿ ಕಚೇರಿ ಸ್ಪಷ್ಟನೆ]

Judiciary should strive to eradicate social inequality : Ansari

ಜನರು ಸುಶಿಕ್ಷಿತರಾಗದೆ ಸಮಾಜ ಮುಂದುವರಿಯುವುದಿಲ್ಲ. ಲೈಂಗಿಕ ದೌರ್ಜನ್ಯ, ಜೀತ ಪದ್ಧತಿಯನ್ನು ತಡೆಯುವಲ್ಲಿ ನ್ಯಾಯಾಂಗ ಪಣ ತೊಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡದಿರುವುದು ಸಹ ಅಪರಾಧವೇ ಎಂದು ಅವರು ಪ್ರತಿಪಾದಿಸಿದರು.

ಮಾನವ ಅಭಿವೃದ್ಧಿ ಪರಿವಿಡಿ ಅನ್ವಯ 188 ದೇಶಗಳಲ್ಲಿ ಭಾರತ 130 ನೇ ಸ್ಥಾನ ಪಡೆದಿದೆ. 2014ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನೀಡಿರುವ ವರದಿ ಪ್ರಕಾರ 6.06 ಮಿಲಿಯನ್ ಮಕ್ಕಳು ಶಾಲೆಯಲ್ಲಿ ಹೊರ ಉಳಿದಿದ್ದು, ಅವರಲ್ಲಿ 4.6 ಮಿಲಿಯನ್ ಮಕ್ಕಳು ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತದವರಾಗಿದ್ದಾರೆ ಎಂದವರು ನುಡಿದರು.

ಭಾರತದಲ್ಲಿ ಸಂಪತ್ತು ಸಹ ಕೆಲವರ ಪಾಲಾಗಿದ್ದು, ಸಾವಿರಾರು ಬಡವರ ಜೀವನಮಟ್ಟ ಸುಧಾರಣೆಗೊಳ್ಳಬೇಕಿದೆ. ದೇಶದಲ್ಲಿ ಜನರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳನ್ನು ನ್ಯಾಯಯುತವಾಗಿ ಚಲಾಯಿಸಲು ನ್ಯಾಯಾಲಯಗಳಿದ್ದರೂ ಆದರಿಂದ ಜನರಿಗೆ ಸಿಗುವ ನ್ಯಾಯ ಪರಿಪೂರ್ಣವೆನಿಸಿಲ್ಲ ಎಂದು ಅವರು ವಿಷಾದಿಸಿದರು.

Judiciary should strive to eradicate social inequality : Ansari

ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಸಮ್ಮೇಳನವನ್ನು ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರಿಗೆ ಸಮರ್ಪಿಸುತ್ತಿರುವುದು ಶ್ಲಾಘನೀಯ. ಈ ಸಮ್ಮೇಳನದ ಮುಖ್ಯ ವಿಷಯ ಸಾಮಾಜಿಕ ನ್ಯಾಯವಾಗಿದ್ದು, ಇದು ಶೋಷಿತ, ಕೆಳವರ್ಗದ ಜನರಿಗೆ ಒಂದು ದಿಟ್ಟ ಧ್ವನಿಯಾಗಲಿದೆ. ಸಾಮಾಜಿಕ ನ್ಯಾಯವು ಜನರಿಗೆ ಸಾಮಾಜಿಕ ಘನತೆ ಹೆಚ್ಚಿಸುವುದರ ಜೊತೆಗೆ, ಸಂಪನ್ಮೂಲ, ಉದ್ಯೋಗಾವಕಾಶ ಹಾಗೂ ಅಧಿಕಾರಗಳನ್ನು ಸಹ ಸಮಾನವಾಗಿ ಹಂಚುವ ನಿಟ್ಟಿನಲ್ಲಿ ಸಹಾಯವಾಗಲಿದೆ ಎಂದರು.

ಕಳೆದ ವರ್ಷ ಸರ್ಕಾರ ನಡೆಸಿದ ಜಾತಿಗಣತಿ ರಾಷ್ಟ್ರದಲ್ಲೇ ನಡೆಸಿದ ಪ್ರಥಮ ಜಾತಿವಾರು ಗಣತಿಯಾಗಿದ್ದು, ಇದರಿಂದ ಜನರ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ತಿಳಿದುಕೊಳ್ಳುವಲ್ಲಿ ಬಹಳ ಸಹಕಾರಿಯಾಗಲಿದೆ. ಪ್ರತಿಯೊಬ್ಬ ಪ್ರಜೆಗೂ ಸಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಒದಗಿಸುವುದು ಕ್ಲಿಷ್ಟವೆನಿಸಿದರೂ ಅದನ್ನು ಒದಗಿಸುವುಲ್ಲಿ ನ್ಯಾಯಾಂಗ ಅಧಿಕಾರಿಗಳ ಸಹಕಾರ ಅತ್ಯಗತ್ಯ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲಾ, ನ್ಯಾಯಾಲಯ ಜನರಿಗೆ ನ್ಯಾಯ ಒದಗಿಸುವುದು ಎಷ್ಟು ಮುಖ್ಯವೋ ಸಕಾಲದಲ್ಲಿ ನ್ಯಾಯ ಒದಗಿಸುವುದು ಅಷ್ಟೇ ಮುಖ್ಯ. ವಿಳಂಬವಾದರೆ ನ್ಯಾಯವು ಸತ್ತಂತೆ. ಸರ್ಕಾರಗಳ ಶೇ 70ರಷ್ಟು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿದ್ದು, ಲೋಕ್ ಅದಾಲತ್ ಅನ್ನು ಸರ್ಕಾರಿ ಪ್ರಕರಣಗಳಿಗೂ ವಿಸ್ತರಿಸಬೇಕು. ಕೋರ್ಟು ಮೆಟ್ಟಿಲೇರಿದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದರು.

ಕಾರ್ಯಕ್ರಮದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ. ಜಯಚಂದ್ರ, ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರುಗಳಾದ ಆರ್.ಎಸ್. ಚೀಮಾ, ಪಿ.ಪಿ. ರಾವ್, ಭಾರತೀಯ ವಕೀಲರ ಸಂಘದ ಅಧ್ಯಕ್ಷರಾದ ಜಿತೇಂದ್ರ ಶರ್ಮಾ ಅವರು ಉಪಸ್ಥಿತರಿದ್ದರು.

English summary
Judiciary should strive to eradicate social inequality by getting justice to downtrodden people in a speedy manner, vice-president of India Hamid Ansari told a gathering of people at Sri Jagadguru Renukacharya Educational Institutions in Bengaluru on 27th December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X