ವಿಧಾನಸಭೆ ಚುನಾವಣೆಗೆ ಜೆಡಿಎಸ್ ನಲ್ಲಿ ಈಗಲೇ ಕಾರ್ಯೋತ್ಸಾಹ
ವಿಧಾನಸಭಾ ಚುನಾವಣೆಗೆ ವರ್ಷಕ್ಕೆ ಮೊದಲೇ ಜಿಡಿಎಸ್ ಕಾರ್ಯೋನ್ಮುಖವಾಗಿದ್ದು, ಎಲ್ಲ ಸದಸ್ಯರು, ಕಾರ್ಯಕರ್ತರನ್ನು ಪ್ರೇರೇಪಿಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸುಮ್ಮನೆ ಕೂರುವುದಿಲ್ಲ ಎಂದಿದ್ದಾರೆ.
ಬೆಂಗಳೂರು, ಫೆಬ್ರವರಿ 11: ಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಕಾರ್ಯೋತ್ಸಾಹ ಮೆರೆಯಲು ಜೆಡಿಎಸ್ ಮುಂದಾಗಿದ್ದು, ಕಾರ್ಯಕರ್ತರು ಮುಖಂಡರು ಪಕ್ಷವನ್ನು ಅಧಿಕಾರಕ್ಕೆ ತರಲು ಸಜ್ಜಾಗುವಂತೆ ಸೂಚನೆ ನೀಡಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಚುನಾವಣಾ ಪೂರ್ವ ಸಮಾವೇಶದಲ್ಲಿ ಹಾಜರಿದ್ದ ನಾಯಕರು ಸ್ವಶಕ್ತಿಯಿಂದ ಪಕ್ಷವನ್ನು ಬಲಪಡಿಸಿ 2018ರಲ್ಲಿ ವಿಧಾನ ಸಭಾ ಚುನಾವಣೆ ಹೊತ್ತಿಗೆ ಯುದ್ದ ಮಾದರಿಯಲ್ಲಿ ಹೋರಾಡ ಬೇಕಿದೆ ಎಂದು ಕಾರ್ಯಕರ್ತರಿಗೆ ಹುರುಪು ತುಂಬಿದರು. ಅಲ್ಲದೆ ಸಮಾವೇಶದಲ್ಲಿ ಮಾತನಾಡಿದ ಎಲ್ಲ ನಾಯಕರು ಆಗ್ನೇಯ ಶಿಕ್ಷಕರ ಕ್ಷೇತ್ರದ ಗೆಲುವು ಜೆಡಿಎಸ್ ಮುಂದಿನ ಎಲ್ಲ ರಾಜಕೀಯ ಹೋರಾಟದ ಮುನ್ಸೂಚನೆ ಎಂದು ಬಣ್ಣಿಸಿದರು.[ಜೆಡಿಎಸ್ ರಮೇಶ್ ಬಾಬುಗೆ ಗೆಲುವು, ಕಾಂಗ್ರೆಸ್ಸಿಗೆ ಠೇವಣಿ ನಷ್ಟ]
ಸಮಾವೇಶದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ, ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಮುಂತಾದ ಅನೇಕ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ನನಗೆ ಅಗ್ನಿ ಪರೀಕ್ಷೆ : ಎಚ್.ಡಿ. ದೇವೇಗೌಡ
ಮುಂದಿನ ವಿಧಾನಸಭೆ ಚುನಾವಣೆ ನಮಗೆ ಅಗ್ನಿಪರೀಕ್ಷೆ. ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. 224 ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಧಿಳಿಸಲಿದ್ದೇವೆ. ಮಾರ್ಚ್ ತಿಂಗಳೊಳಗೆ ಮಹಿಳಾ, ಹಿಂದುಳಿದ, ನಾಯಕ ಸಮುದಾಯದ ಸಮಾವೇಶಗಳು ನಡೆಯಲಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಜೆಡಿಎಸ್ ಪಕ್ಷದ ಕಟ್ಟಡ ಉದ್ಘಾಟನೆ
ಸದ್ಯದಲ್ಲೇ ಜೆಡಿಎಸ್ ಪಕ್ಷದ ಕಟ್ಟಡ ಉದ್ಘಾಟನೆಯಾಗಲಿದ್ದು, ಆ ಕಾರ್ಯಕ್ರಮದಲ್ಲಿ ಎರಡು ಲಕ್ಷ ಜನರನ್ನು ಸೇರಿಸಬೇಕು. ಒಂದೊಂದು ಕ್ಷೇತ್ರದ ಟಿಕೆಟ್ ಆಕಾಂಕ್ಷಿ 1 ಸಾವಿರ ಜನರನ್ನು ಕರೆತಂದರೂ ಎರಡು ಲಕ್ಷ ಸೇರಿಸುವುದು ಕಷ್ಟವಲ್ಲ, ವಿಧಾನಪರಿಷತ್ ಉಪ ಚುನಾವಣೆ ನನಗೆ ಶಕ್ತಿ ತಂದುಕೊಟ್ಟಿದ್ದು ನನ್ನ ಕೆಲಸವನ್ನು ನಾನು ಮಾಡಿಯೇ ತೀರುತ್ತೇನೆ ಎಂದರು.
ಗೆಲುವಿನ ಆರಂಭ: ಎಚ್ ಡಿಕೆ
ಮುಖ್ಯ ಮಂತ್ರಿ ಸಿದ್ಧರಾಮಯ್ಯ ನವರು ಜೆಡಿಎಸ್ ಎಲ್ಲಿದೆ ಎಂದು ಕೇಳಿದ್ದರು ಅವರಿಗೆ ವಿಧಾನ ಪರಿಷತ್ ಉಪಚುನಾವಣೆ ಫಲಿತಾಂಶ ಉತ್ತರ ಕೊಟ್ಟಿದೆ. ಇದು ಗೆಲುವಿನ ಆರಂಭ ಪಕ್ಷದಲ್ಲಿ ಇರುವ ಗೊಂದಲಗಳನ್ನು ನಿವಾರಿಸಿಕೊಂಡರೆ ಮೈಸೂರಿನಲ್ಲಿ 10, ತುಮಕೂರಿನಲ್ಲಿ 11, ಕೋಲಾರ-ಚಿಕ್ಕಬಳ್ಳಾಪುರದಲ್ಲಿ 10 ಸ್ಥಾನ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ ಎಂದರು.
ರೈತರ ಸಾಲ ಮನ್ನಾ ಏಕೆ ಆಗುತ್ತಿಲ್ಲ
ಉತ್ತರ ಪ್ರದೇಶ ಚುನಾವಣೆ ಪ್ರಚಾರದಲ್ಲಿ ಬಿಜೆಪಿಯ ರಾಜನಾಥ್ ಸಿಂಗ್ ಅವರು, ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಅದರೆ ಅವರದೇ ಪಕ್ಷ ಕೇಂದ್ರದಲ್ಲಿದ್ದರೂ ಅದನ್ನು ಮಾಡಲು ಇನ್ನು ಏಕೆ ಆಗಿಲ್ಲ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾಮಾಡುವುದಾಗಿ ಹೇಳಿದ ಮಾತನ್ನು ಲೇವಡಿ ಮಾಡುತ್ತಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ರೈತರು, ಜನರು ಉತ್ತರ ನೀಡಲಿದ್ದಾರೆ.
ಗೋಪಾಲಯ್ಯ ಹಾಜರ್
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷದಿಂದ ಅಮಾನತುಗೊಂಡಿದ್ದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಸಮಾವೇಶದಲ್ಲಿ ಹಾಜರಿದ್ದರು. ಗುರುವಾರವಷ್ಟೇ ಅವರ ಆಮಾನತು ಆದೇಶ ವಾಪಸ್ ಪಡೆಯಲಾಗಿತ್ತು.
ರಮೇಶ್ ಬಾಬುಗೆ ಸನ್ಮಾನ
ಸಮಾವೇಶದಲ್ಲಿ ವಿಧಾನಪರಿಷತ್ ಗೆ ಆಯ್ಕೆಯಾದ ರಮೇಶ್ಬಾಬು ಅವರನ್ನು ಸನ್ಮಾನಿಸಲಾಯಿತು. ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಮಾತನಾಡಿದರು. ಕಲಬುರಗಿ ಜಿಲ್ಲೆ ಚಿಂಚೋಳಿಯ ಶಾಲಾ ಶಿಕ್ಷಕಿ ಸುಶೀಲಾ ಬಾಯಿ, ನಟ ಯೋಗಿ ಅವರ ತಂದೆ ಸಿದ್ದರಾಜು ಅವರು ಜೆಡಿಎಸ್ ಗೆ ಸೇರ್ಪಡೆಗೊಂಡರು.