ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಅಪ್ಪಾಜಿ ಕ್ಯಾಂಟೀನ್
ಬೆಂಗಳೂರು, ಜುಲೈ 18: ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿರುವ 'ಇಂದಿರಾ ಕ್ಯಾಂಟೀನ್' ಕಾಮಗಾರಿ ಭರದಿಂದ ಸಾಗಿದೆ. ಆಗಸ್ಟ್ 15ರಂದು ಎಲ್ಲೆಲ್ಲಿ ಕ್ಯಾಂಟೀನ್ ಆರಂಭವಾಗುವುದೋ ಕಾದುನೋಡಬೇಕಿದೆ. ಈ ನಡುವೆ ಜೆಡಿಎಸ್ ಕೂಡಾ ಕ್ಯಾಂಟೀನ್ ಆರಂಭಕ್ಕೆ ಸಿದ್ಧತೆ ನಡೆಸಿದೆ.
ಜೆಡಿಎಸ್ ವಿಧಾನ ಪರಿಷತ್ ಸದಸ್ಯ, ಉದ್ಯಮಿ ಟಿ.ಎ.ಶರವಣ ಅವರ ನೇತೃತ್ವದಲ್ಲಿ 'ನಮ್ಮ ಅಪ್ಪಾಜಿ' ಕ್ಯಾಂಟೀನ್ ಪ್ರಾರಂಭವಾಗಲಿದೆ. ಬಸವನಗುಡಿಯಲ್ಲಿ ಮೊದಲ ಬ್ರ್ಯಾಂಚ್ ಉದ್ಘಾಟನೆಯಾಗಲಿದೆ. ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಸಾಧನೆಯನ್ನು ಸ್ಮರಿಸುತ್ತಾ ಕ್ಯಾಂಟೀನ್ ಗೆ ಅಪ್ಪಾಜಿ ಕ್ಯಾಂಟೀನ್ ಎಂದು ಹೆಸರಿಸಲಾಗಿದೆ.
ಅಪ್ಪಾಜಿ ಕ್ಯಾಂಟೀನ್ ಉದ್ಘಾಟನೆ ದಿನಾಂಕ ಆಗಸ್ಟ್ 26 ಅಥವಾ 28ರಂದು ಎಂದು ನಿಗದಿಯಾಗಿದೆ. ಶಿರಡಿ ಸಾಯಿಬಾಬಾ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಚಿತ್ರವುಳ್ಳ ಕ್ಯಾಂಟೀನ್ ಬಗ್ಗೆ ಮಾಹಿತಿಯೂ ಸೇರಿರುವ ಚಿತ್ರವೊಂದು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.
ಏನು ವಿಶೇಷ: ಅಪ್ಪಾಜಿ ಕ್ಯಾಂಟೀನ್ನಲ್ಲಿ 5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್, ಕೇಸರಿಬಾತ್, 10 ರೂ.ಗೆ ಪೊಂಗಲ್, ಮುದ್ದೆ ಬಸ್ಸಾರು, ಅನ್ನ ಸಾಂಬಾರ್, ರೈಸ್ ಬಾತ್, 3 ರೂ.ಗೆ ಕಾಫಿ-ಟೀ ನೀಡಲಾಗುವುದು. ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರ ತನಕ ಕ್ಯಾಂಟೀನ್ ಓಪನ್ ಇರಲಿದೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶವರಣ ಹೇಳಿದ್ದಾರೆ.
ನರೇಂದ್ರ ಮೋದಿ ಅವರ ಚಾಯ್ ಪೇ ಚರ್ಚಾ ಮಾದರಿಯಲ್ಲಿ ಮುದ್ದೆ ಜತೆಗೆ ಚರ್ಚೆ ಕಾರ್ಯಕ್ರಮ ಕೂಡಾ ಜೆಡಿಎಸ್ ರೂಪಿಸಿದೆ. ಕರ್ನಾಟಕ ಅಸ್ಮಿತೆ: ರೊಟ್ಟಿ ಮತ್ತು ಮುದ್ದೆ ಮೇಲೆ ಪ್ರಾದೇಶಿಕ ಪಕ್ಷಗಳ ಮೇಲೆ ಚರ್ಚೆ ಎಂಬ ಕಾರ್ಯಕ್ರಮದ ಬಗ್ಗೆ ಘೋಷಿಸಿ ಹಲವು ತಿಂಗಳುಗಳು ಕಳೆದಿವೆ. ವಿವಿಧ ಮಟ್ಟಗಳಲ್ಲಿ ಚರ್ಚೆ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು, ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಹಿರಿಯ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮೂಲಗಳು ಹೇಳಿವೆ.