ಜಯಾ ಅಕ್ರಮ ಆಸ್ತಿ ಗಳಿಕೆ ತೀರ್ಪು : 4 ಸಾಧ್ಯತೆಗಳು
ಬೆಂಗಳೂರು, ಜೂನ್ 09 : ಜಯಲಲಿತಾ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹೂಡಲಾಗಿದ್ದ ಮೇಲ್ಮನವಿಯ ವಾದವಿವಾದ ಸುಪ್ರೀಂಕೋರ್ಟಿನಲ್ಲಿ ಅಂತೂ ಕೊನೆಗೊಂಡಿದೆ. ತಮಿಳುನಾಡು ಮುಖ್ಯಮಂತ್ರಿಯ ಹಣಬರಹ ಏನಾಗಲಿದೆ ಎಂಬುದು ಈ ತೀರ್ಪು ಪ್ರಕಟವಾದ ನಂತರ ತಿಳಿದುಬರಲಿದೆ.
ಇದೀಗ ತಾನೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಕುಮಾರಿ ಜಯಲಲಿತಾ ಅವರ ಪರವಾಗಿ ಬರಲಿದೆಯಾ ಅಥವಾ ವ್ಯತಿರಿಕ್ತವಾಗಿ ತೀರ್ಪು ಪ್ರಕಟವಾಗಲಿದೆಯಾ ಎಂಬುದು ಎಲ್ಲರ ಕುತೂಹಲದ ಪ್ರಶ್ನೆ. 1991ರಿಂದ 1996ರವರೆಗೆ ಮುಖ್ಯಮಂತ್ರಿಯಾಗಿದ್ದಾಗ 66.65 ಕೋಟಿ ರು. ಅಕ್ರಮ ಆಸ್ತಿ ಗಳಿಕೆ ಮಾಡಿದ ಆರೋಪ ಹೊತ್ತಿರುವ ಜಯಲಲಿತಾ ಅವರ ವಿರುದ್ಧ ಹೂಡಲಾಗಿದ್ದ ಈ ಹೈಪ್ರೊಫೈಲ್ ಪ್ರಕರಣದಲ್ಲಿ ಸದ್ಯಕ್ಕೆ ನಾಲ್ಕು ಸಾಧ್ಯತೆಗಳಿವೆ. [ಪ್ರಭಾವ ಬಳಸಿ ಗಿರಗಿಟ್ಲೆಯಾಡಿಸುವ ಶಶಿಕಲಾ : ಆಚಾರ್ಯ]
ಹೈಕೋರ್ಟ್ ತೀರ್ಪು ತಿರುವುಮುರುವಾದರೆ
ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯ ಜಯಲಲಿತಾ, ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಅಪರಾಧಿಗಳೆಂದು ನ್ಯಾ. ಕುನ್ಹಾ ಅವರು ಐತಿಹಾಸಿಕ ತೀರ್ಪನ್ನು 2014ರ ಸೆಪ್ಟೆಂಬರ್ 27ರಂದು ನೀಡಿದ್ದರು. ಅದನ್ನು ಪ್ರಶ್ನಿಸಿ ಜಯಲಲಿತಾ ಕರ್ನಾಟಕ ಹೈಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ. ಕುಮಾರಸ್ವಾಮಿ ಪುರಸ್ಕರರಿಸಿ, ನಿರಪರಾಧಿಗಳೆಂದು ತೀರ್ಪು ನೀಡಿದ್ದರು.
ಇದನ್ನು ಪ್ರಶ್ನಿಸಿ ಕರ್ನಾಟಕ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ತೀರ್ಪು ಪ್ರಕಟವಾಗಬೇಕಾಗಿದೆ. ಈಗ ಕರ್ನಾಟಕದ ವಾದ ಸರಿ ಎಂದು ಸುಪ್ರೀಂಕೋರ್ಟ್ ಒಪ್ಪಿಕೊಂಡರೆ ಜಯಲಲಿತಾ ಮತ್ತಿತರರ ವಿರುದ್ಧದ ಶಿಕ್ಷೆಯನ್ನು ಮಾನ್ಯತೆ ಮಾಡಿದಂತಾಗುತ್ತದೆ. ಮತ್ತು ಶಿಕ್ಷೆಯ ಪ್ರಮಾಣವನ್ನೂ ಪ್ರಕಟಿಸುತ್ತದೆ.
ಹಾಗಾದರೆ, ಜಯಲಲಿತಾ ಮುಖ್ಯಮಂತ್ರಿ ಪಟ್ಟದಿಂದ ಕೂಡಲೆ ಕೆಳಗಿಳಿಯಬೇಕು. ಮತ್ತು ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸುತ್ತಿದ್ದಂತೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ಒಂದು ರೀತಿಯ ಸ್ಮಶಾನಮೌನ ಆವರಿಸಿಕೊಂಡಿದೆ. [ಸುಪ್ರೀಂಕೋರ್ಟಲ್ಲಿ ತೀರ್ಪು ಉಲ್ಟಾ ಆದ್ರೆ ಅಮ್ಮನ ಭವಿಷ್ಯವೂ ಪುಲ್ಟಾ!]
ಹೈಕೋರ್ಟ್ ತೀರ್ಪು ಎತ್ತಿಹಿಡಿದರೆ
ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದರೆ ಜಯಲಲಿತಾ ನಿರಾಳ. ಕೆಳ ನ್ಯಾಯಾಲಯ ತಪ್ಪು ತೀರ್ಪು ನೀಡಿದ್ದು, ಜಯಲಲಿತಾ ಗಳಿಸಿರುವ ಎಲ್ಲ ಆಸ್ತಿ ಸನ್ಮಾರ್ಗದಿಂದಲೇ ಗಳಿಸಲಾಗಿದೆ. ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಬೇಕು ಎಂದು ಜಯಲಲಿತಾ ವಕೀಲರು ಮನವಿ ಮಾಡಿದ್ದಾರೆ.
ಆ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರಕಾರ ಮರುಪರಿಶೀಲನೆ ಅಥವಾ ಕ್ಯೂರೇಟಿವ್ ಅರ್ಜಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಆದರೆ, ಹಿಂದಿನ ತೀರ್ಪುಗಳನ್ನು ಗಮನಿಸಿದರೆ, ಹತ್ತು ಅರ್ಜಿಗಳಲ್ಲಿ ಒಂಬತ್ತು ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ತನ್ನದೇ ತೀರ್ಪಿನ ವಿರುದ್ಧ ವ್ಯತಿರಿಕ್ತ ತೀರ್ಪು ನೀಡುವುದು ಅನುಮಾನ. [ಜಯಾ ಭವಿಷ್ಯ ಕಾಯ್ದಿರಿಸಿದ ಸುಪ್ರೀಂ ಕೋರ್ಟ್]
ಹೈಕೋರ್ಟಿಗೆ ಮರಳಿ ರೆಫರ್ ಮಾಡಬಹುದು
ಕರ್ನಾಟಕ ಹೈಕೋರ್ಟಿನ ತೀರ್ಪಿನಲ್ಲಿ ಹಲವಾರು ಲೆಕ್ಕಾಚಾರದ ತಪ್ಪುಗಳು ನುಸುಳಿವೆ ಎಂದು ರಾಜ್ಯದ ವಕೀಲರು ಬಲವಾಗಿ ವಾದ ಮಂಡಿಸಿದ್ದಾರೆ. ಗಣಿತದ ತಪ್ಪುಗಳು ಆಗಿವೆ ಎಂದು ಸುಪ್ರೀಂಕೋರ್ಟಿಗೆ ಮನವರಿಕೆಯಾದರೆ ಪ್ರಕರಣವನ್ನು ಮರಳಿ ಹೈಕೋರ್ಟಿಗೆ ರೆಫರ್ ಮಾಡುವ ಸಾಧ್ಯತೆಗಳಿವೆ.
ಆದರೆ, ವಿಭಾಗೀಯ ಪೀಠದಲ್ಲಿದ್ದ ಕಿರಿಯ ನ್ಯಾಯಮೂರ್ತಿ ಅಮಿತವಾ, ಹೈಕೋರ್ಟಿಗೆ ಮರಳಿ ಪ್ರಕರಣವನ್ನು ನೀಡಿದರೆ, ಕೆಳ ನ್ಯಾಯಾಲಯದ ತೀರ್ಪು ಜಾರಿಗೆ ಬಂದಂತಾಗುತ್ತದೆ. ಇದರಿಂದ ಜಯಲಲಿತಾ ಮತ್ತು ಮೂವರ ವಿರುದ್ಧದ ಆರೋಪ ಎತ್ತಹಿಡಿದಂತಾಗುತ್ತದೆ. ಇದು ಆರೋಪಿಗಳಿಗೆ ಮಾಡುವ ಅನ್ಯಾಯ ಎಂದು ಅಭಿಪ್ರಾಯ ಮಂಡಿಸಿದ್ದಾರೆ.
ಇದೇ ಸಮಯದಲ್ಲಿ, ಕೆಳ ನ್ಯಾಯಾಲಯದ ತೀರ್ಪನ್ನು ತಡೆಹಿಡಿದು, ಕರ್ನಾಟಕ ಹೈಕೋರ್ಟಿಗೆ ರೆಫರ್ ಮಾಡುವ ಸಾಧ್ಯತೆಯೂ ಬಲವಾಗಿದೆ. ಹೀಗಾದ ಸಮಯದಲ್ಲಿ, ಹೈಕೋರ್ಟ್ ಮತ್ತೆ ವಾದಪ್ರತಿವಾದ ಆಲಿಸಿ ತೀರ್ಪು ನೀಡುವವರೆಗೆ ಜಯಲಲಿತಾ ಮತ್ತಿತರರು ನೆಮ್ಮದಿಯಿಂದ ನಿದ್ದೆ ಮಾಡಬಹುದು. [ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]
ಕೆಳ ನ್ಯಾಯಾಲಯದಲ್ಲಿ ಮರುವಿಚಾರಣೆ
ಕಟ್ಟಕಡೆಯ ಅವಕಾಶವೆಂದರೆ, ಮರುವಿಚಾರಣೆಗಾಗಿ ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಕಳಿಸುವುದು. ಸುಪ್ರೀಂ ಕೋರ್ಟ್ ಈ ಅವಕಾಶವನ್ನು ಬಳಸಿಕೊಳ್ಳುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ. ಆದರೆ, ಇದು ಮತ್ತೆ ಸಮಯ ಹಾಳು ಮಾಡುವುದರಿಂದ ನಿಖರವಾದ ಅಂಶಗಳ ಮೇಲೆ ತೀರ್ಪು ನೀಡಲು ಕೆಳ ನ್ಯಾಯಾಲಯಕ್ಕೆ ಸೂಚಿಸಬಹುದು.
ಈಗಿನ ಎಲ್ಲ ಬೆಳವಣಿಗೆ, ಹೈಕೋರ್ಟ್ ತೀರ್ಪು, ಸುಪ್ರೀಂಕೋರ್ಟಿನಲ್ಲಿ ವಾದಪ್ರತಿವಾದ ಮತ್ತು ಸಾಧ್ಯಾಸಾಧ್ಯತೆಗಳನ್ನು ಗಮನಿಸಿದರೆ, ಕೆಳ ನ್ಯಾಯಾಲಯಕ್ಕೆ ಪ್ರಕರಣವನ್ನು ಮರುವಿಚಾರಣೆಗೆ ಹಸ್ತಾಂತರಿಸುವ ಸಾಧ್ಯತೆಗಳು ದಟ್ಟವಾಗಿವೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. [ಅಮ್ಮನ ಜೈಲಿಗೆ ಕಳುಹಿಸಿದ ಕುಡ್ಲದ ನ್ಯಾ.ಕುನ್ಹಾ]