ಭಾಗವತ್ ಬೆಂಬಲಿಸಿ ಮೋದಿಗೆ ಜಾಫರ್ ಷರೀಫ್ ಪತ್ರ
ಮೋಹನ್ ಭಾಗವತ್ ಅವರಲ್ಲಿರುವ ದೇಶಭಕ್ತಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಈ ದೇಶದ ಪ್ರಜೆಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ. ಅಷ್ಟೇ ಅಲ್ಲ, ದೇಶಕ್ಕೆ ನಿಷ್ಠರು'' ಎಂದು ಷರೀಫ್ ಅವರು ಪತ್ರದಲ್ಲಿ ಹೇಳಿದ್ದಾರೆ.
ಬೆಂಗಳೂರು, ಏಪ್ರಿಲ್ 1: ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್, ರಾಷ್ಟ್ರಪತಿ ಹುದ್ದೆಗೆ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಸೂಕ್ತ ಎಂದು ತಿಳಿಸಿದ್ದಾರೆ.
''ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಬೆಂಬಲಿಸುವ ಬಗ್ಗೆ ಈ ಸಂದರ್ಭದಲ್ಲಿ ನಾನಾ ಅಭಿಪ್ರಾಯಗಳು ವ್ಯಕ್ತವಾಗಿದೆ. ದೊಡ್ಡ ದೇಶವೊಂದರಲ್ಲಿ ಇಂಥ ಭಿನ್ನ ಅಭಿಪ್ರಾಯಗಳು ಸರ್ವೇ ಸಾಮಾನ್ಯ. ಆದರೆ, ಮೋಹನ್ ಭಾಗವತ್ ಅವರಲ್ಲಿರುವ ದೇಶಭಕ್ತಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಈ ದೇಶದ ಪ್ರಜೆಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ. ಅಷ್ಟೇ ಅಲ್ಲ, ದೇಶಕ್ಕೆ ನಿಷ್ಠರು'' ಎಂದು ಷರೀಫ್ ಅವರು ಪತ್ರದಲ್ಲಿ ಹೇಳಿದ್ದಾರೆ.
ಶಿವಸೇನೆಯು ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದೆ.
ಆದರೆ, ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಚುನಾವಣೆಗೆ ನಿಲ್ಲಿಸಿದರೆ, ತಾನು ಬೆಂಬಲಿಸುವುದಿಲ್ಲವೆಂದು ಈಗಾಗಲೇ ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ.
ಅದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಜಾಫರ್ ಷರೀಫ್ ಅವರೀಗ ಭಾಗವತ್ ಅವರನ್ನು ಬೆಂಬಲಿಸಿ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಪಕ್ಷದ ನಾಯಕರಿಗೆ ಬಹಿರಂಗವಾಗಿಯೇ ಸಡ್ಡು ಹೊಡೆದಿದ್ದಾರೆ.
ಅತ್ತ, ಮೋಹನ್ ಭಾಗವತ್ ಅವರು ''ತಾವು ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿಯಲ್ಲ'' ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.