ಇಂಟರ್ ನೆಟ್ ಬ್ಯಾಂಕಿಂಗ್, ಕ್ರೆಡಿಟ್ -ಡೆಬಿಟ್ ಕಾರ್ಡ್ ಬಳಕೆಗೆ ಸಿದ್ಧರಾಗಿ....
ಗ್ರಾಹಕರು ಇಂಟರ್ ನೆಟ್ ಬ್ಯಾಂಕಿಂಗ್, ಕ್ರೆಡಿಟ್, ಡೆಬಿಟ್ ಕಾರ್ಡ್ ಗೆ ರೂಢಿಯಾಗಬೇಕು. ಪಿಒಎಸ್ ಮಶೀನ್ ಬಳಕೆಗೆ ಸಣ್ಣ-ಪುಟ್ಟ ವ್ಯಾಪಾರಿಗಳು ಮುಂದಾಗಬೇಕು
ಬೆಂಗಳೂರು, ನವೆಂಬರ್ 30: ನಮ್ಮದೇ ಬ್ಯಾಂಕ್ ಖಾತೆಯಲ್ಲಿರುವ ಹಣ ತೆಗೆದುಕೊಳ್ಳುವುದಕ್ಕೆ ಇಷ್ಟು ಸಮಸ್ಯೆಯಾ? ಎಂಬುದು ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆ. ಬುಧವಾರ (ನವೆಂಬರ್ 30) ಈ ಬಗ್ಗೆ ಕೆಲವು ಬ್ಯಾಂಕ್ ಮ್ಯಾನೇಜರ್ ಗಳನ್ನೇ ಮಾತನಾಡಿಸಿದಾಗ ವಿವಿಧ ವಿಚಾರಗಳಲ್ಲಿ ಒಂದು ಸ್ಪಷ್ಟತೆ ಸಿಕ್ಕಂತಾಯಿತು. ಅದನ್ನೇ ನಿಮ್ಮ ಮುಂದಿಡುತ್ತಿದ್ದೇವೆ.
ಯಾವಾಗ ಬ್ಯಾಂಕ್ ನಲ್ಲಿ ಹಣ ವಿನಿಮಯ ನಿಂತುಹೋಯಿತೋ ಆಗಿನಿಂದ ಬ್ಯಾಂಕ್ ನಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಆದರೆ ವಿಥ್ ಡ್ರಾ ಮಾಡುವವರಿಗೆ ಇಪ್ಪತ್ನಾಲ್ಕು ಸಾವಿರವೇ ಬೇಕಾಗಿದೆ. ಆಗ ಆ ವ್ಯಕ್ತಿಯ ಖಾತೆ ಯಾವ ಬ್ಯಾಂಕ್ ನಲ್ಲಿ ಇದೆ, ಅಲ್ಲಿನ ಗ್ರಾಹಕರು ಎಷ್ಟು ಮಂದಿ ಎಂಬುದರ ಆಧಾರದಲ್ಲಿ ಹಣ ಸಿಗುವುದು ಅವಲಂಬಿಸಿದೆ.[ಅಮರ್ತ್ಯ ಸೇನ್ ನಿಂದ ಅರುಣ್ ಜೇಟ್ಲಿವರೆಗೆ ನೋಟು ರದ್ದು ಬಗ್ಗೆ ಏನಂತಾರೆ?]
ಉದಾಹರಣೆಗೆ ಹೇಳುವುದಾದರೆ ಬನಶಂಕರಿ ಮೂರನೇ ಹಂತದ ಕೆನರಾ ಬ್ಯಾಂಕ್ ಡಿಎಸ್ ಇಆರ್ ಟಿ ಶಾಖೆಯಲ್ಲಿ ಈಗಲೂ ನಾಲ್ಕು ಸಾವಿರ ಮಾತ್ರ ಚೆಕ್ ಮೂಲಕ ಡ್ರಾ ಮಾಡಲು ಸಾಧ್ಯ. ಅಲ್ಲಿ ದಿನಕ್ಕೆ ಬರುತ್ತಿರುವ ಹಣವೇ ಕಡಿಮೆಯಂತೆ. ಆದರೆ ಜಯನಗರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಶಾಖೆಯಲ್ಲಿ ದಿನಕ್ಕೆ ನಲವತ್ತು ಲಕ್ಷ ರುಪಾಯಿವರೆಗೆ ಹಣವನ್ನು ಗ್ರಾಹಕರಿಗಾಗಿ ಒದಗಿಸುತ್ತಿದ್ದಾರೆ. ಹಣ ಖಾಲಿಯಾಗುತ್ತಿದ್ದಂತೆ ಮುಖ್ಯ ಕಚೇರಿಯಿಂದ ತರಿಸಿಕೊಡುತ್ತಿದ್ದಾರೆ.
ಗ್ರಾಹಕರು ಇಂಟರ್ ನೆಟ್ ಬ್ಯಾಂಕಿಂಗ್, ಕ್ರೆಡಿಟ್, ಡೆಬಿಟ್ ಕಾರ್ಡ್ ಗೆ ರೂಢಿಯಾಗಬೇಕು. ಪಿಒಎಸ್ ಮಶೀನ್ ಬಳಕೆಗೆ ಸಣ್ಣ-ಪುಟ್ಟ ವ್ಯಾಪಾರಿಗಳು ಮುಂದಾಗಬೇಕು. ಗಾಂಧಿಬಜಾರ್ ನಲ್ಲಿ ತರಕಾರಿ ಮಾರುವವರೊಬ್ಬರು ಅಂಥ ಪುಟ್ಟ ಮಶೀನ್ ಬಳಸುತ್ತಿದ್ದಾರೆ. ಅದಕ್ಕೆ ತಗಲುವ ವೆಚ್ಚ ಕೂಡ ಕಡಿಮೆ. ಅದರೆ ಈ ಬಗ್ಗೆ ಮಾಹಿತಿ ಇಲ್ಲದೆ ಬಳಕೆ ಅಷ್ಟೊಂದು ಆಗುತ್ತಿಲ್ಲ. ಇಂದಲ್ಲ ನಾಳೆ ಅದನ್ನು ಬಳಸಲೇ ಬೇಕು ಎಂದು ಬ್ಯಾಂಕ್ ನಿರ್ವಾಹಕಿಯೊಬ್ಬರು ತಿಳಿಸಿದರು.[ಆರ್ ಬಿಐ ಹೇಳಿದ್ದು ಒಂದು, ಮ್ಯಾನೇಜರ್ ಮಾಡಿದ್ದು ಇನ್ನೊಂದು!]
ಮನೆ ಕಟ್ಟುವವರಿಗೆ ತೊಂದರೆ ಆಗಿದೆ ಅಂತಿದ್ದಾರೆ. ವಾರದ ಕೂಲಿ ಬಟವಾಡೆ ಬಿಟ್ಟು ಇನ್ನೇನು ಸಮಸ್ಯೆ ಆಗುತ್ತದೆ? ಉಳಿದ ಎಲ್ಲ ಕಡೆಯೂ ಚೆಕ್ ಮೂಲಕ ಹಣ ಪಾವತಿಸಬಹುದು. ಮನೆ ಖರೀದಿ ಮಾಡಿದ್ದರೆ ಮಾರಾಟಗಾರರಿಗೆ ನೇರ ಚೆಕ್ ಕೊಡ್ತೀವಿ. ಕಾಂಟ್ರ್ಯಾಕ್ಟ್ ಕೊಟ್ಟಿದ್ದರೆ ಗುತ್ತಿಗೆದಾರರಿಗೇ ನೇರ ಚೆಕ್ ಕೊಡ್ತೀವಿ ಎಂದು ಅವರು ಹೇಳಿದರು.
ಇನ್ನು ಒಂದನೇ ತಾರೀಕು ಸಂಬಳ ಬರುತ್ತದೆ. ಇಪ್ಪತ್ನಾಲ್ಕು ಸಾವಿರ ರುಪಾಯಿ ಒಂದು ಬ್ಯಾಂಕ್ ನ, ಒಂದು ಶಾಖೆಯಲ್ಲಿ ಡ್ರಾ ಮಾಡಬಹುದು. ಆದ್ದರಿಂದ ಹೊಸದಾಗಿ ಬೇರೆ ಬೇರೆ ಬ್ಯಾಂಕ್ ನಲ್ಲಿ ಖಾತೆ ತೆರೆಯಬಹುದಾ ಅಲ್ವಾ? ಅಗ ಒಂದೊಂದು ಖಾತೆಯಿಂದ ಇಪ್ಪತ್ನಾಲ್ಕು ಸಾವಿರ ಪಡೆಯಬಹುದು ಎಂದರು.[10 ಪ್ರಶ್ನೆಗಳನ್ನು ಹುಟ್ಟುಹಾಕಿದ ದಿಢೀರ್ ತೀರ್ಮಾನಗಳು]
ಆರ್ ಟಿಜಿಎಸ್, ಎನ್ ಇಎಫ್ ಟಿ ಇವೆಲ್ಲ ನಮ್ಮ ಜನಕ್ಕೆ ಈಗಲ್ಲದೇ ಇನ್ನ್ಯಾವಾಗ ಅರ್ಥವಾಗಬೇಕು? ಎಂಬುದು ಹಲವು ಬ್ಯಾಂಕ್ ಮ್ಯಾನೇಜರ್ ಗಳ ಪ್ರಶ್ನೆ. ಇನ್ನು ಜಯನಗರ ಮೂರನೇ ಬ್ಲಾಕ್ ನ ಯೆಸ್ ಬ್ಯಾಂಕ್ ನಲ್ಲೂ ಹಣ ಒದಗಿಸುವುದು ಸಮಸ್ಯೆ ಆಗಿಲ್ಲ. ಎರಡು ಸಾವಿರದ ನೋಟು ಹೆಚ್ಚು ಸಿಗುತ್ತಿವೆ. ಕಡಿಮೆ ಮುಖಬೆಲೆ ನೋಟು ಬಂದರೆ ಯಾವ ಸಮಸ್ಯೆಯೂ ಇಲ್ಲ ಎಂದರು ಅಲ್ಲಿನ ಮ್ಯಾನೇಜರ್ ವೆಂಕಟ್.