ವೈಟ್ ಫೀಲ್ಡ್ ನ ವೈದೇಹಿ ಆಸ್ಪತ್ರೆ ಮೇಲೆ ಐಟಿ ದಾಳಿ
ಬೆಂಗಳೂರು, ಸೆಪ್ಟೆಂಬರ್ 28: ವೈದ್ಯರಾಗುವುದಕ್ಕೆ ಸೇವಾ ಗುಣ ಇರಬೇಕು, ಬುದ್ಧಿವಂತಿಕೆ, ತುಂಬ ಒಳ್ಳೆ ಅಂಕ, ಸಿಇಟಿ ಇತ್ಯಾದಿ ಇತ್ಯಾದಿ ಅಂತ ನೀವು ಲೆಕ್ಕ ಹಾಕುತ್ತಾ ಕೂತರೆ, ಕ್ಷಮಿಸಿ ನಿಮಗೆ ಹೆಚ್ಚಿಗೆ ಏನೂ ಗೊತ್ತಿಲ್ಲ. ಸಿಕ್ಕಾಪಟ್ಟೆ ದುಡ್ಡಿತ್ತು ಅಂದರೆ ಮಾತ್ರ ಕೆಲಸ ಬಹಳ ಸಲೀಸು ಕಣ್ರೀ.
ಅದಕ್ಕೆ ಸಾಕ್ಷಿಯಾಗಿ ಆದಾಯ ತೆರಿಗೆ ಇಲಾಖೆ ಮಾಡಿದ ದಾಳಿಯ ವಿವರಗಳು ಇಲ್ಲಿವೆ. ಎದೆ ಬಿಗಿ ಹಿಡಿದುಕೊಳ್ಳಿ. ಅಂಥ ದಾಳಿಯಲ್ಲಿ ಸಿಕ್ಕಿದ್ದು ಬರೋಬ್ಬರಿ ನಲವತ್ಮೂರು ಕೋಟಿ ರುಪಾಯಿ. ವೈದೇಹಿ ಮೆಡಿಕಲ್ ಕಾಲೇಜಿನ ಟ್ರಸ್ಟಿಯೊಬ್ಬರ ಮನೆಯಿಂದ ವಶಪಡಿಸಿಕೊಂಡ ಮೊತ್ತ ಇದು. ಎಲ್ಲವೂ ಐನೂರು ಹಾಗೂ ಸಾವಿರ ರುಪಾಯಿಯ ನೋಟುಗಳೇ ಇದ್ದವು.[ಕೇಜ್ರಿವಾಲ್ ಇದಕ್ಕೂ ಪ್ರಧಾನಿ ಮೋದಿಯನ್ನು ದೂಷಿಸಬಹುದಾ?]
ಮೆಡಿಕಲ್ ಸೀಟಿಗಾಗಿ ವಸೂಲು ಮಾಡಿದ ಡೊನೇಶನ್ ಹಣವಂತೆ ಇದು. ಆದಾಯ ತೆರಿಗೆ ಇಲಾಖೆ ಕರ್ನಾಟಕದಲ್ಲಿ ವಶಪಡಿಸಿಕೊಂಡ ಅತಿ ಹೆಚ್ಚಿನ ಮೊತ್ತವಿದು. ಇನ್ನು ದೇಶದಲ್ಲೇ ಎರಡನೇ ಅತಿ ದೊಡ್ಡ ಆದಾಯ ತೆರಿಗೆ ದಾಳಿಯಿದು. ಮೊದಲ ಪ್ರೈಜ್ ಪುದುಚೆರಿ ಮೆಡಿಕಲ್ ಕಾಲೇಜಿಗೆ. ಅಲ್ಲಿ 82 ಕೋಟಿ ವಶಪಡಿಸಿಕೊಳ್ಳಲಾಗಿತ್ತು.
ಇನ್ನು ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಯಚೂರಿನ ನವೋದಯ ಟ್ರಸ್ಟ್ ನದೆಸುವ ಮೆಡಿಕಲ್ ಕಾಲೇಜಿನಿಂದ 19.5 ಕೋಟಿ ವಶಪಡಿಸಿಕೊಳ್ಳಲಾಗಿತ್ತು. ಇದೆಲ್ಲ ಪಕ್ಕಕಿರಲಿ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಶ್ರೀನಿವಾಸ ಟ್ರಸ್ಟ್ ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ಲೆಕ್ಕದಲ್ಲಿ ತೋರಿಸಿದ 265 ಕೋಟಿಗೂ ಹೆಚ್ಚು ಆದಾಯ ಪತ್ತೆಯಾಗಿದೆ.[ಮುತ್ತೂಟ್ ಗ್ರೂಪ್ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ]
ನಿಖರ ಮಾಹಿತಿ ಆಧರಿಸಿ, ತಿಂಗಳಿಂದ ಇದರ ಬಗ್ಗೆಯೇ ತನಿಖೆ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಶಿಕ್ಷಣ ಸಂಸ್ಥೆಗೆ ಸಂಬಂಧಪಟ್ತ ಆಂಧ್ರ, ತಮಿಳುನಾಡು ಹಾಗೂ ದೆಹಲಿಯ ಸಂಸ್ಥೆಗಳು, ಆಡಳಿತ ಮಂಡಳಿ ಸದಸ್ಯರ ಮನೆಗಳನ್ನು ಪರಿಶೀಲಿಸಲಾಗಿದೆ.
ವೈದೇಹಿ ಶಿಕ್ಷಣ ಸಂಸ್ಥೆ ಸ್ಥಾಪಕರು ದಿವಂಗತ ಆದಿಕೇಶವಲು. ಅವರು ಆಸ್ಪತ್ರೆಗಳನ್ನು ಸಹ ಸ್ಥಾಪಿಸಿದ್ದಾರೆ. ಮೆಡಿಕಲ್, ದಂತ ವೈದ್ಯಕೀಯ, ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕೋರ್ಸ್ ಗಳು ಇವೆ. ಜತೆಗೆ ಚಾರಿಟೆಬಲ್ ಆಸ್ಪತ್ರೆ ಸಹ ಇದೆ. ದೇಶದ ಇತರ ಭಾಗದಲ್ಲಿ ಈ ಸಂಸ್ಥೆಯ ಆಸ್ಪತ್ರೆಗಳಿವೆ. ಸದ್ಯಕ್ಕೆ ಆದಿಕೇಶವಲು ಅವರ ಪತ್ನಿ ಈ ಸಮೂಹದ ಮುಖ್ಯಸ್ಥರಾಗಿದ್ದಾರೆ.