ಐಟಿ ಅಧಿಕಾರಿಗಳು ದಾಳಿಗೆ ಹೋದರೆ ನಾಯಿ ಛೂ ಬಿಟ್ಟ ಅಜ್ಜಿ!
ಬೆಂಗಳೂರಿನ ಯಶವಂತಪುರದ ಅಪಾರ್ಟ್ ಮೆಂಟ್ ನಲ್ಲಿ ಆ ಅಜ್ಜಿ ಹಾಗೂ ಎರಡು ನಾಯಿ ಇದ್ದದ್ದು. ಆದರೆ ಆದಾಯ ತೆರಿಗೆ ಅಧಿಕಾರಿಗಳು ಒಳಗೆ ಪ್ರವೇಶಿಸಿದಂತೆ ತಡೆಹಾಕಿ, ಸತಾಯಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 15: ಆದಾಯ ತೆರಿಗೆ ಅಧಿಕಾರಿಗಳಿಗೆ ಭಯ ಹುಟ್ಟಿಸಿದ ಅಜ್ಜಿಯ ಸ್ಟೋರಿ ಕೇಳಿದಿರಾ? ಕಪ್ಪು ಹಣ ಇದೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಬೆಂಗಳೂರಿನ ಯಶವಂತಪುರದ ಅಪಾರ್ಟ್ ಮೆಂಟ್ ಗೆ ತೆರಳಿದ್ದಾರೆ. ಅಲ್ಲಿದ್ದದ್ದು ಒಬ್ಬ ಅಜ್ಜಿ ಜತೆಗೆ ಎರಡು ನಾಯಿ. ಇನ್ನು ಆ ಅಜ್ಜಿ ತನಿಖೆಗೆ ಸಹಕರಿಸದೆ, ನಾಯಿಯನ್ನು ಕಟ್ಟಿ ಹಾಕದೆ ಅಧಿಕಾರಿಗಳನ್ನೇ ಸತಾಯಿಸಿದ್ದಾರೆ.
ಖಚಿತ ಮಾಹಿತಿ ಸಿಕ್ಕಿದೆಯಲ್ಲಾ ಎಂದು ದಾಳಿ ನಡೆಸಲು ತೆರಳಿದವರು, ಆ ನಂತರ ಸ್ಥಳೀಯ ಪೊಲೀಸರು ಹಾಗೂ ನಿವಾಸಿಗಳ ನೆರವು ಪಡೆದು ಫ್ಲ್ಯಾಟ್ ಪ್ರವೇಶಿಸಿದ್ದಾರೆ. ಒಳಗೆ ಹಣವಿಟ್ಟಿದ್ದ ಕೋಣೆಗೆ ಬೀಗ ಹಾಕಿದ್ದು ಕಂಡುಬಂದಿದೆ. ಅದೇ ವೇಳೆ ಲೆಕ್ಕ ನೀಡದೆ ಬಚ್ಚಿಟ್ಟಿದ್ದ 2.89 ಕೋಟಿ ರುಪಾಯಿ ಪತ್ತೆಯಾಗಿದೆ. ಅದರಲ್ಲಿ 2.25 ಕೋಟಿ ಹೊಸ ಎರಡು ಸಾವಿರ ನೋಟುಗಳೇ ಸಿಕ್ಕಿವೆ.[ಕರ್ನಾಟಕ-ಗೋವಾದಲ್ಲಿ ಐಟಿ ದಾಳಿಯಲ್ಲಿ ಸಿಕ್ಕಿದ್ದು ಸಾವಿರ ಕೋಟಿ ಪ್ಲಸ್]
ವಿಚಾರಣೆ ನಂತರ ಗೊತ್ತಾಗಿರೋದು ಏನು ಅಂದರೆ, ಅದು ಬೇರೆ ವ್ಯಕ್ತಿಗೆ ಸೇರಿದ ಹಣ. ಅದು ಲೆಕ್ಕಕ್ಕೆ ತೋರಿಸದೆ ಇಟ್ಟಿದ್ದ ಕಪ್ಪು ಹಣ ಎಂಬುದನ್ನು ಆತ ಮೊದಲಿಗೆ ಒಪ್ಪದಿದ್ದರೂ ಆ ನಂತರ ತಪ್ಪೊಪ್ಪಿಕೊಂಡಿದ್ದಾನೆ.