ಏಪ್ರಿಲ್ 2ರ ಸಂಜೆ 6ಕ್ಕೆ ಐಸಿರಿ ಟಿವಿ ದೇವೇಗೌಡರಿಂದ ಲೋಕಾರ್ಪಣೆ
ಕನ್ನಡದ ಸಮಾಜೋ-ಅಧ್ಯಾತ್ಮಿಕ ವಾಹಿನಿ ಐಸಿರಿ ಟಿವಿಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಏಪ್ರಿಲ್ 2ರಂದು ಸಂಜೆ 6ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ
ಬೆಂಗಳೂರು, ಮಾರ್ಚ್ 27: ಕನ್ನಡದ ಮೊದಲ ಸಮಾಜೋ-ಆಧ್ಯಾತ್ಮಿಕ ವಾಹಿನಿ ಐಸಿರಿ ಟಿವಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಏಪ್ರಿಲ್ 2ರ ಭಾನುವಾರ ಸಂಜೆ 6ಕ್ಕೆ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಾಹಿನಿಯ ಲೋಕಾರ್ಪಣೆ ಮಾಡಲಿದ್ದಾರೆ.
ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಅಧ್ಯಾತ್ಮ ಚಿಂತಕರಾದ ಪಾವಗಡ ಪ್ರಕಾಶ ರಾವ್, 'ಬ್ರಹ್ಮಾಂಡ' ಖ್ಯಾತಿಯ ಅಧ್ಯಾತ್ಮ ಗುರು ನರೇಂದ್ರಬಾಬು ಶರ್ಮ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್, ವಿಜಯಾ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ನಾಗೇಶ್ವರರಾವ್ ಉಪಸ್ಥಿತರಿರುತ್ತಾರೆ.[ಚೆನ್ನೈನ ದುರ್ಗಾ ಪೀಠಂನಲ್ಲಿ ಬರ್ಗರ್, ಕೇಕ್ ಪ್ರಸಾದ]
ವಿಶೇಷ ಆಹ್ವಾನಿತರಾಗಿ ಚಿತ್ರನಟರಾದ ಶ್ರೀನಾಥ್, ರವಿಶಂಕರ್ ಪಾಲ್ಗೊಳ್ಳಲಿದ್ದಾರೆ. ರಾತ್ರಿ 7 ಗಂಟೆಗೆ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ವಾಹಿನಿ ಲೋಕಾರ್ಪಣೆ ಕಾರ್ಯಕ್ರಮ ಆರಂಭವಾಗುವುದಾದರೂ ಆಹ್ವಾನಿತರು ಅರ್ಧ ಗಂಟೆ ಮುಮ್ಚಿತವಾಗಿ ಸ್ಥಳದಲ್ಲಿ ಹಾಜರಿರಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.