ಜೈಲಿನಲ್ಲಿ ಶಶಿಕಲಾಗೆ ವಿಐಪಿ ಆತಿಥ್ಯ, ಉನ್ನತ ತನಿಖೆಗೆ ಸಿಎಂ ಆದೇಶ
ಬೆಂಗಳೂರು, ಜುಲೈ 13: ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ. ಜೈಲಿನಲ್ಲಿ ಲಂಚ ಪಡೆದುಕೊಂಡು ಶಶಿಕಲಾ, ಅಬ್ದುಲ್ ಕರೀಂ ಲಾಲಾ ತೆಲಗಿ ಸೇರಿದಂತೆ ಖೈದಿಗಳಿವೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಬೆಂಗಳೂರು ಜೈಲಿನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಆರೋಪವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಮತ್ತು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದೇನೆ. ಎಲ್ಲರೂ ಈ ತನಿಖಾ ವರದಿಗಾಗಿ ಕಾಯಬೇಕೆಂದು ಕೋರುತ್ತೇನೆ. ತಪ್ಪು ಯಾರೇ ಅಧಿಕಾರಿ ಮಾಡಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ಅವರು ಹೇಳಿದ್ದಾರೆ.
We have taken serious cognizance of the allegation of irregularities in Bengaluru Central Prison & ordered a high level inquiry. 1/2
— CM of Karnataka (@CMofKarnataka) July 13, 2017
ಇದರ ಜತೆಗೆ ಬಹಿರಂಗವಾಗಿ ಕಚ್ಚಾಡುತ್ತಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನಿರೀಕ್ಷಕ ಸತ್ಯನಾರಾಯಣರಾವ್ ಹಾಗೂ ಕಾರಾಗೃಹಗಳ ಮಹಾನಿರೀಕ್ಷಕಿ ಡಿ. ರೂಪಾ ಮೇಲೆ ಸಿದ್ದರಾಮಯ್ಯ ಅಸಮಧಾನಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.