ಇಂದಿರಾನಗರ: ಓಪನ್ ಸ್ಟ್ರೀಟ್ ಉತ್ಸವ ಪ್ರಶ್ನಿಸಿ ಪಿಐಎಲ್
ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ಓಪನ್ ಸ್ಟ್ರೀಟ್ ಉತ್ಸವ ವಿರುದ್ಧ ಇಂದಿರಾನಗರ ನಿವಾಸಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ದಿನಕರ್ ಈ ಉತ್ಸವದ ವಿರುದ್ಧ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ
ಬೆಂಗಳೂರು, ಜನವರಿ 06: ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ಓಪನ್ ಸ್ಟ್ರೀಟ್ ಉತ್ಸವ ವಿರುದ್ಧ ಇಂದಿರಾನಗರ ನಿವಾಸಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಅವರು ಈ ಉತ್ಸವದ ವಿರುದ್ಧ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಇಂದಿರಾನಗರದಲ್ಲಿ ಜ.15ರಂದು ನಡೆಸಲು ಉದ್ದೇಶಿಸಿರುವ 'ಓಪನ್ ಸ್ಟ್ರೀಟ್ ಉತ್ಸವ' ಪ್ರಶ್ನಿಸಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. [ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹಬ್ಬದ ವಾತಾವರಣ]
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಾಗೂ ನ್ಯಾ.ಆರ್.ಬಿ. ಬೂದಿಹಾಳ್ ಅವರಿದ್ದ ಪೀಠ, ಈ ಸಂಬಂಧ ಬಿಬಿಎಂಪಿ ಆಯುಕ್ತರು ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಜ.10ಕ್ಕೆ ವಿಚಾರಣೆ ಮುಂದೂಡಿದೆ.
ಜನವರಿ 15ರಂದು ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಉತ್ಸವ ನಿಗದಿಯಾಗಿದೆ. ಪ್ರವಾಸೋದ್ಯಮ ಇಲಾಖೆ, ಬಿಬಿಎಂಪಿ ಹಾಗೂ ಶಾಸಕ ಹ್ಯಾರಿಸ್, ಸಚಿವ ಪ್ರಿಯಾಂಕ್ ಖರ್ಗೆ ಅವರು ಆಯೋಜನೆಯ ಹೊಣೆ ಹೊತ್ತಿದ್ದಾರೆ.[ಬಿಟಿಎಂ ಲೇಔಟ್ನಲ್ಲಿ ಶೀಘ್ರದಲ್ಲೇ ಓಪನ್ ಸ್ಟ್ರೀಟ್]
ಟ್ರಾಫಿಕ್ ಸಮಸ್ಯೆ: ಸದಾ ಸಂಚಾರ ದಟ್ಟಣೆ ಹೆಚ್ಚಿರುವ ಈ ರಸ್ತೆ ಹಳೇ ಮದ್ರಾಸು ರಸ್ತೆಯಿಂದ ಹಳೇ ವಿಮಾನ ನಿಲ್ದಾಣದವರೆಗೂ ಸಾಗುವ ರಸ್ತೆ ಇದಾಗಿದ್ದು, ಕೃಷ್ಣರಾಜಪುರ ಹಾಗೂ ವೈಟ್ಫೀಲ್ಡ್ ನಿವಾಸಿಗಳು ಕೋರಮಂಗಲ ಹಾಗೂ ಎಂ.ಜಿ. ರಸ್ತೆ ತಲುಪಲು ಒಂದೇ ಮಾರ್ಗವಾಗಿದೆ. ಸ್ಥಳೀಯರು ಮತ್ತು ವಾಹನ ಸವಾರರಿಗೆ ತೀವ್ರ ತೊಂದರೆಯಾಗಲಿದೆ ಎಂದು ದಿನಕರ್ ಅವರು ವಾದಿಸಿದ್ದಾರೆ.
ಈ ಉತ್ಸವದಿಂದ ಪಬ್ ಸಂಸ್ಕೃತಿಗೆ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ ಎಂದು ಐ ಚೇಂಜ್ ಇಂದಿರಾನಗರ ಸೇರಿದಂತೆ ಹಲವು ಸಂಘಟನೆಗಳು ಹೇಳಿವೆ. ಆದರೆ, ಈ ಉತ್ಸವದಲ್ಲಿ ಕರ್ನಾಟಕ ಸಂಗೀತ, ಸಂಕ್ರಾಂತಿ ಸಂಭ್ರಮಾಚರಣೆ ಇರಲಿದೆ, ಪಬ್ ಸಂಸ್ಕೃತಿಗೆ ಪೂರಕವಾಗಿಲ್ಲ ಎಂದು ಸಚಿವ ಪ್ರಿಯಾಂಖ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)