'ಮಳೆ ನೀರು ಸಂಗ್ರಹಿಸದಿದ್ದರೆ ದಂಡ ಗ್ಯಾರಂಟಿ'
ಬೆಂಗಳೂರು, ನ.22: ನೀರು ಸಂಗ್ರಹ, ಬಳಕೆ, ಜಾಗೃತಿ ಬಗ್ಗೆ ಅತಿದೊಡ್ಡ ಸಮ್ಮೇಳನ ನಗರದ ಹೋಟೆಲ್ ವೊಂದರಲ್ಲಿ ಸರಳವಾಗಿ ಇತ್ತೀಚೆಗೆ ನಡೆಸಲಾಯಿತು. ಈ ಸಮ್ಮೇಳನದ ಮುಖ್ಯ ಉದ್ದೇಶ ಮಳೆ ನೀರು ಸಂಗ್ರಹ ಹಾಗೂ ನೀರು ಉಳಿಸುವುದರ ಬಗ್ಗೆ ಅರಿವು ಮೂಡಿಸುವುದಾಗಿತ್ತು. ಇದೇ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಮಾತನಾಡಿ, ಮಳೆ ನೀರು ಸಂಗ್ರಹ ಮಾಡದ ಕಟ್ಟಡದ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಎಂದರು.
ವಿಶ್ವದಲ್ಲಿ ಅತಿ ಹೆಚ್ಚು ನೀರು ಬಳಕೆ ಮಾಡುವ ರಾಷ್ಟ್ರಗಳ ಪೈಕಿ ಒಂದೆನಿಸಿರುವ ಭಾರತದಲ್ಲಿ ಇರುವ ನೀರಿನ ಸಂಗ್ರಹವನ್ನು ಬಳಕೆ, ಪುನರ್ ಬಳಕೆ ಮಾಡುವ ವಿಧಾನದಲ್ಲಿ ಅನೇಕ ದೋಷಗಳು, ಅವೈಜ್ಞಾನಿಕ ಕ್ರಮಗಳು ಅನುಸರಿಸುತ್ತಿರುವುದರಿಂದ ಜಲಕ್ಷಾಮ ಸಮಸ್ಯೆ ಎದುರಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಹೇಳಿದರು.
ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ: ಸುಮಾರು 2400 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಹಳೆ ಕಟ್ಟಡಗಳಲ್ಲಿ ಮಳೆ ನೀರಿನ ಸಂಗ್ರಹ ಕಡ್ಡಾಯ ಮಾಡಲಾಗಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಹೊಂದಿರದ ಕಟ್ಟಡಗಳ ಮಾಸಿಕ ನೀರಿನ ಬಿಲ್ಲಿನ ಮೇಲೆ ಶೇ 25 ರಿಂದ 50ರಷ್ಟು ದಂಡ ವಿಧಿಸುವ ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ.ಬೆಂಗಳೂರಿನ ಹಳೆ ಕಟ್ಟಡಗಳ ಪೈಕಿ 7,200 ರಷ್ಟು ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಇನ್ನೂ ಅಳವಡಿಸಿಲ್ಲ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್: 'ನೀರಿನ ಮಿತ ಬಳಕೆಗೆ ಇಸ್ರೇಲ್ ಮಾದರಿ ಆಗಬೇಕು. ಅಲ್ಲಿ ವರ್ಷಕ್ಕೆ ಸರಾಸರಿ 6-7 ಇಂಚು ಮಳೆಯಾಗುತ್ತದೆ. ಅದರೆ, ಅಲ್ಲಿ ನೀರನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳುತ್ತಾರೆ. ನಮ್ಮಲ್ಲಿ ಸರಾಸರಿ 35 ರಿಂದ 40 ಇಂಚು ಮಳೆಯಾದರೂ ನೀರಿನ ಕೊರತೆ ಎದುರಿಸುತ್ತಿದ್ದೇವೆ' ಎಂದರು.
'ಕೆರೆಗೆ ಕಲುಷಿತ ನೀರು ಸೇರುವುದನ್ನು ತಡೆಯಲು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್ಟಿಪಿ) ಅಳವಡಿಸುವ ಪ್ರಯತ್ನ ನಡೆದಿದೆ. ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಿಗೆ ಇನ್ನೂ ಮೂರು ಎಸ್ಟಿಪಿಗಳನ್ನು ಅಳವಡಿಸಲಾಗುವುದು. ನೀರು ಪೂರೈಸುವ ಹಳೆಯ ಕೊಳವೆ ಮಾರ್ಗಗಳನ್ನು ಬದಲಾಯಿಸಲಾಗುವುದು' ಎಂದು ಹೇಳಿದರು.
ನೀರು- ಜೀವನಾಮೃತ, ಪ್ರತಿ ಹನಿ ನೀರನ್ನು ಉಳಿಸಿ' ಕಾರ್ಯಾಗಾರದಲ್ಲಿ ಗಣೇಶ್ ಪಗಾರೆ, ಐಡಬ್ಲ್ಯೂ ಎ ಏಷ್ಯಾ ವಿಭಾಗದ ನಿರ್ದೇಶಕ, ಜಗದೀಸ್ ಪಟ್ನಾಕರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಜಿಸಿ ಚಂದ್ರಶೇಖರ್,ವ್ಯವಸ್ಥಾಪಕ ನಿರ್ದೇಶಕ ಪಿ.ಮಣಿವಣ್ಣನ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಡಾ.ಎನ್.ಮಂಜುಳಾ, ಎಸ್ ಕೃಷ್ಣಪ್ಪ, ಬಿ ಶ್ರೀನಿವಾಸ್ ರೆಡ್ಡಿ, ಆನಂದಿ ಚರಣ್ ಸಾಹು ಮುಂತಾದವರು ಪಾಲ್ಗೊಂಡಿದ್ದರು.
ಮುಂದಿನ ವರ್ಷ ವಾಟರ್ ಲಾಸ್ 2016 ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ಅಂತಾರಾಷ್ಟ್ರೀಯ ಮಟ್ಟದ ಉಪನ್ಯಾಸಗಳು, 1000ಕ್ಕೂ ಅಧಿಕ ಪ್ರತಿನಿಧಿಗಳು, 100 ಕ್ಕೂ ಅಧಿಕ ಕಂಪನಿಗಳು, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಂಡೋನೇಷಿಯಾ, ಇಸ್ರೇಲ್, ಮಲೇಷಿಯಾ, ಸಿಂಗಪುರ, ಯುಕೆ, ಯುಎಸ್ ಎ ಸೇರಿದಂತೆ ಅನೇಕ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೃಷ್ಣಪ್ಪ ಹೇಳಿದರು. (ಒನ್ ಇಂಡಿಯಾ ಸುದ್ದಿ)