ಬೆಂಗಳೂರಿಗರ ನೆಮ್ಮದಿ ಕಿತ್ತುಕೊಳ್ಳಲಿದ್ದ ಬಿಡಿಎ ವಿರುದ್ಧ ಜನರ ಗೆಲುವು!
ತನ್ನ 2015 ನಗರ ವಾಣಿಜ್ಯ ಯೋಜನೆಗೆ ತಿದ್ದುಪಡಿ ತಂದ ಬಿಡಿಎ. ಜನ ವಸತಿ ಪ್ರದೇಶಗಳಲ್ಲಿ ಹೇರಳವಾಗಿ ವಾಣಿಜ್ಯ ಚಟುವಟಿಕೆಗೆ ಅನುವು ಮಾಡಲಿದ್ದ ಯೋಜನೆ. ಈ ಯೋಜನೆ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದ ನಾಗರಿಕರು.
ಬೆಂಗಳೂರು, ಜುಲೈ 27: ನಗರದಲ್ಲಿ ಮಧ್ಯಮ ವರ್ಗಗಳು ಹೆಚ್ಚಾಗಿ ವಾಸಿಸುವ ವಸತಿ ಪ್ರದೇಶಗಳಲ್ಲಿನ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವ ತನ್ನ ಪ್ರಸ್ತಾವನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತಿದ್ದುಪಡಿ ತಂದಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ಈ ತಿದ್ದುಪಡಿ ತರಲಾಗಿದ್ದು, ಇದು ಜನರ ಆಕ್ರೋಶಕ್ಕೆ ಸಂದ ಜಯ ಎಂದು ಬಣ್ಣಿಸಲಾಗಿದೆ.
ಬಿಡಿಎನಿಂದ ಎಸ್ಸಿ, ಎಸ್ ಟಿಗೆ 6.7 ಲಕ್ಷಕ್ಕೆ ಒಂದು ಬಿಎಚ್ ಕೆ ಫ್ಲಾಟ್
2015ರಲ್ಲಿ ಇಂಥದ್ದೊಂದು ನಿಯಮಾವಳಿಗಳನ್ನು (Bangalore's Revised Master Plan 2015) ಬಿಡಿಎ ರೂಪಿಸಿತ್ತು. ಈ ಹೊಸ ನಿಯಮಾವಳಿಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಅದರಂತೆ, ಜನ ವಸತಿಯಿರುವ ಯಾವುದೇ ಪ್ರದೇಶಗಳಲ್ಲಿನ 40 ಅಡಿ ಹಾಗೂ ಅದಕ್ಕಿಂತ ಹೆಚ್ಚು ಅಗಲವಿರುವ ರಸ್ತೆಗಳ ಎರಡೂ ಬದಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುವು ಮಾಡಿಕೊಡುವ ಪ್ರಸ್ತಾವನೆ ಇದಾಗಿತ್ತು.
ಆದರೆ, ಇದರ ವಿರುದ್ಧ ಇಂದಿರಾನಗರ ಮುಂತಾದ ಬಡಾವಣೆಗಳ ನಾಗರಿಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜನ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಹೇರಳವಾಗಿ ಅವಕಾಶ ನೀಡಿದರೆ, ನಾಗರಿಕರು ನೆಮ್ಮದಿಗೆ ಧಕ್ಕೆಯುಂಟಾಗುತ್ತದೆಂದು ಅಹವಾಲು ಸಲ್ಲಿಸಿದ್ದರು.
ನಾಗರಿಕರ ಅರ್ಜಿ ಹಿನ್ನೆಲೆಯಲ್ಲಿ, ತಿಂಗಳುಗಟ್ಟಲೆ ವಿಚಾರಣೆ ನಡೆಸಿದ ಹೈಕೋರ್ಟ್, ಇದೇ ವರ್ಷ ಫೆಬ್ರವರಿ 19ರಂದು ಆದೇಶ ನೀಡಿ, ಬಿಡಿಎ ನಿಯಾವಳಿಗಳಲ್ಲಿ ಬದಲಾವಣೆ ತರುವಂತೆ ಸೂಚಿಸಿತ್ತು. ಅದರಂತೆ, ಬಿಡಿಎ ತನ್ನ ಮಾಸ್ಟರ್ ಪ್ಲಾನ್ ನಲ್ಲಿ ಬದಲಾವಣೆ ತಂದಿದೆ ಎಂದು ಹೇಳಲಾಗಿದೆ.