ಚಿತ್ರಗಳು : ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಬಿಸಿ
ಬೆಂಗಳೂರು, ಜುಲೈ 30 : ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಎಂಟಿಸಿ ಬಸ್, ನಮ್ಮ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಯಾವುದೇ ಬಿಎಂಟಿಸಿ ಬಸ್ಸುಗಳು ಇಂದು ರಸ್ತೆಗಿಳಿದಿಲ್ಲ. ಮುಂಜಾನೆ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಗಿತ್ತು. ಆದರೆ, ಎಂ.ಜಿ.ರಸ್ತೆ ಮತ್ತು ಮೈಸೂರು ರಸ್ತೆ (ನಾಯಂಡಹಳ್ಳಿ) ಮೆಟ್ರೋ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದ ಬಳಿಕ ಸಂಚಾರ ಸ್ಥಗಿತಗೊಳಿಸಲಾಗಿದೆ.[ಕರ್ನಾಟಕ ಬಂದ್ : ಕ್ಷಣ-ಕ್ಷಣದ ಮಾಹಿತಿ]
ಹೋಟೆಲ್, ಪೆಟ್ರೋಲ್ ಬಂಕ್, ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು ಮುಚ್ಚಿವೆ. ಬೆಂಗಳೂರಿನ ಜನರು ವೀಕೆಂಡ್ ಶಾಪಿಂಗ್ ಮಾಡುವಂತಿಲ್ಲ. ಎಲ್ಲಾ ಮಾಲ್ಗಳನ್ನು ಮುಚ್ಚಲಾಗಿದ್ದು, ಸಂಜೆಯ ವೇಳೆಗೆ ತೆರೆಯುವ ಸಾಧ್ಯತೆ ಇದೆ. ಚಿತ್ರರಂಗವೂ ಬಂದ್ಗೆ ಬೆಂಬಲ ಕೊಟ್ಟಿದ್ದು, ಚಿತ್ರಮಂದಿರಕ್ಕೆ ಬೀಗ ಹಾಕಲಾಗಿದೆ.[ಕಳಸಾ ಬಂಡೂರಿ ಯೋಜನೆ, ವಿವಾದ ಮತ್ತು ನಾವು]
ಟೌನ್ ಹಾಲ್ನಿಂದ ಫ್ರೀಡಂಪಾರ್ಕ್ ತನಕ ಕನ್ನಡ ಪರ ಸಂಘಟನೆಗಳ ಪ್ರತಿಭಟನಾ ಜಾಥಾ ನಡೆಯಲಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ನಟ ಶಿವರಾಜ್ ಕುಮಾರ್ ಮುಂತಾದವರು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ
ಮೆಜೆಸ್ಟಿಕ್ನಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಂದ್ನಿಂದಾಗಿ ಖಾಲಿಯಾಗಿದೆ. ಕನ್ನಡ ಪರ ಸಂಘಟನೆಗಳ ಸದಸ್ಯರು ಬಸ್ ನಿಲ್ದಾಣದದ ಬಳಿ ಆಟೋ, ಕ್ಯಾಬ್ ಬರದಂತೆ ತೆಡೆಯುತ್ತಿದ್ದಾರೆ. ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಕೆಆರ್ ಮಾರುಕಟ್ಟೆ ಖಾಲಿ
ಕರ್ನಾಟಕ ಬಂದ್ ಬಿಸಿ ಕೆ.ಆರ್.ಮಾರುಕಟ್ಟೆಗೆ ಮುಂಜಾನೆಯೇ ತಟ್ಟಿದೆ. ಮಾರ್ಕೆಟ್ ಜನರಿಲ್ಲದೇ ಬಿಕೋ ಅನ್ನುತ್ತಿದೆ. ವ್ಯಾಪಾರಸ್ಥರು ಬಂದ್ನಿಂದಾಗಿ ನಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಆಸ್ಪತ್ರೆಗಳಿಗೆ ವಿನಾಯಿತಿ
ಬಂದ್ನಿಂದ ಆಸ್ಪತ್ರೆಗಳಿಗೆ ವಿನಾಯಿತಿ ನೀಡಲಾಗಿದೆ. ವಿಕ್ಟೋರಿಯಾ ಮತ್ತು ವಾಣಿವಿಲಾಸ ಆಸ್ಪತ್ರೆಗಳಿಗೆ ಜನರು ಮುಂಜಾನೆಯೇ ಬಂದು ಕುಳಿತಿದ್ದಾರೆ.
ರಸ್ತೆಗಳು ಖಾಲಿ-ಖಾಲಿ
ಬಿಎಂಟಿಸಿ, ಆಟೋ, ಕೆಎಸ್ಆರ್ಟಿಸಿ ಸಂಚಾರ ಸ್ಥಗಿತಗೊಂಡಿರುವುದರಿಂದ ಬೆಂಗಳೂರಿನ ರಸ್ತೆಗಳು ಖಾಲಿಯಾಗಿವೆ.
ಸಾಹಿತ್ಯ ಪರಿಷತ್ ಮುಂದೆ ಪ್ರತಿಭಟನೆ
ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮುಂದೆ ಕನ್ನಡ ಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಲು ಸಿದ್ಧರಾಗುತ್ತಿದ್ದಾರೆ.
ಚಿತ್ರ ಪ್ರದರ್ಶನ ರದ್ದು
ಕರ್ನಾಟಕ ಬಂದ್ಗೆ ಚಿತ್ರೋದ್ಯಮದವರು ಬೆಂಬಲ ಕೊಟ್ಟಿದ್ದಾರೆ. ಆದ್ದರಿಂದ, ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದಾಗಿದೆ.
ಪೆಟ್ರೋಲ್ ಬಂಕ್ ಬಂದ್
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್ಗಳನ್ನು ಬಂದ್ ಮಾಡಲಾಗಿದೆ.