ಸೈಬರ್ ಕ್ರೈಂನಲ್ಲಿ ಬೆಂಗಳೂರು ದೇಶಕ್ಕೇ ನಂಬರ್ ಒನ್
ಬೆಂಗಳೂರು, ಜೂನ್ 22: ಇತ್ತೀಚೆಗೆ ಕನ್ನಡದ ನಟಿಯೊಬ್ಬರು ಪೊಲೀಸರಿಗೆ ದೂರು ದಾಖಲಿಸಿದ್ದರು. ಅನಾಮಿಕ ವ್ಯಕ್ತಿಯೊಬ್ಬ ತನ್ನ ಚಿತ್ರವನ್ನು ತಿದ್ದಿ, ಅಸಭ್ಯವಾಗಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ ಎಂಬುದು ದೂರಿನ ಸಾರಾಂಶವಾಗಿತ್ತು.
ಬೆಂಗಳೂರಿನ ಬಳಿಯ ಕ್ಷೇತ್ರ ಪ್ರತಿನಿಧಿಸುವ ಜನಪ್ರತಿನಿಧಿಯೊಬ್ಬರು ಕೆಲ ತಿಂಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದು ಏಕೆ ಗೊತ್ತೆ? ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ, ಒಂದು ಲಕ್ಷದ ತೊಂಬತ್ತು ಸಾವಿರ ರುಪಾಯಿಯನ್ನು ದೋಚಲಾಗಿತ್ತು. ಅದಕ್ಕಾಗಿ ದೂರು ನೀಡಿದ್ದರು.
'ಸೈಬರ್ ಕ್ರೈಂ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲು'
ಈ ಎರಡೂ ಪ್ರಕರಣಗಳು ಬೆಳಕಿಗೆ ಬಂದಿದ್ದು ಏಕೆಂದರೆ, ಇಬ್ಬರೂ ಸಾರ್ವಜನಿಕ ಜೀವನದಲ್ಲಿ ಪರಿಚಿತರು ಎಂಬ ಕಾರಣಕ್ಕೆ. ಇಲ್ಲದಿದ್ದರೆ ಗೊತ್ತೇ ಆಗುತ್ತಿರಲಿಲ್ಲ. ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳು ತುಂಬ ಮಾಮೂಲು ಎಂಬಂತಾಗಿದೆ. 2015ರಲ್ಲಿ ಸಾವಿರದ ಒಂದು ಪ್ರಕರಣ ದಾಖಲಾಗಿದ್ದವು. ಅಂದರೆ ದಿನಕ್ಕೆ ಮೂರು ಪ್ರಕರಣ ನಡೆದಂತೆ ಲೆಕ್ಕಕ್ಕೆ ಬರುತ್ತದೆ.
ಬಹಳ ಪ್ರಕರಣಗಳು ಅನಾಮಿಕರಿಂದಲೇ ನಡೆದವು. ಅದನ್ನು ಬಿಟ್ಟರೆ ಗುರುತಿಗೆ ಸಂಬಂಧಿಸಿದ ಮಾಹಿತಿ ಕಳವಿಗೆ ಸಂಬಂಧಿಸಿದ ದೂರುಗಳು ದಾಖಲಾಗಿವೆ. ಬೆಂಗಳೂರಿನ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಹಾಗೆ ಪೊಲೀಸರ ಬಳಿಯ ಮಾಹಿತಿಯನ್ನು ನೂರಾಒಂದು ವರದಿಗಾರರು ಹಾಗೂ ಇಂಡಿಯಾ ಸ್ಪೆಂಡ್ ನಿಂದ ವಿಶ್ಲೇಷಣೆ ಮಾಡಲಾಗಿದೆ.
ಸೈಬರ್ ಕ್ರೈಂನಲ್ಲಿ ಬೆಂಗಳೂರು ಮೊದಲು
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋದ ಪ್ರಕಾರ 1041 ಸೈಬರ್ ಅಪರಾಧಗಳು ವರದಿಯಾಗುವ ಮೂಲಕ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಆ ನಂತರದ ಸ್ಥಾನಗಳಲ್ಲಿ ಹೈದರಾಬಾದ್ (354), ಕೋಲ್ಕತ್ತಾ (111), ದೆಹಲಿ (90), ಮುಂಬೈ (29), ಚೆನ್ನೈ (26) ನಗರಗಳಿವೆ.
ಪೊಲೀಸರ ಸಮರ್ಥನೆ
ಬೆಂಗಳೂರಿನ ಜನರಿಗೆ ಸೈಬರ್ ಅಪರಾಧಗಳ ಬಗ್ಗೆ ಅರಿವಿದೆ. ಆದ್ದರಿಂದಲೇ ಹೆಚ್ಚಿನ ದೂರುಗಳನ್ನು ದಾಖಲಿಸುತ್ತಾರೆ ಎಂಬುದು ಪೊಲೀಸರು ಮುಂದಿಡುವ ವಾದ.
ಈವರೆಗೆ ಯಾರಿಗೂ ಶಿಕ್ಷೆಯಾಗಿಲ್ಲ
ಗೃಹ ಸಚಿವ ಡಾ.ಜಿ.ಪರಮೇಶ್ವರ ಜೂನ್ ಎಂಟರಂದು ವಿಧಾನಸಭೆಯಲಿ ನೀಡಿದ ಮಾಹಿತಿ ಏನೆಂದರೆ, ಕಳೆದ ಎರಡೂವರೆ ವರ್ಷದಲ್ಲಿ ಮೂರು ಸಾವಿರದ ಐನೂರಾ ಐವತ್ತೆರಡು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಆದರೆ ಯಾರಿಗೂ ಶಿಕ್ಷೆಯಾಗಿಲ್ಲ. ಏಕೆಂದರೆ ಅಧಿಕಾರಿಗಳು ಸಮಸ್ಯೆಯ ಮೂಲದವರೆಗೆ ತಲುಪಲು ಸಾಧ್ಯವಾಗಿಲ್ಲ ಎಂದಿದ್ದರು. ಸೈಬರ್ ಕ್ರೈಂಗಳನ್ನು ಭೇದಿಸುವುದಕ್ಕೆ ಹಾಗೂ ತಡೆಯುವುದಕ್ಕೆ ಪೊಲೀಸರಿಗೆ ತಜ್ಞರ ಅಗತ್ಯ ಇರುವುದನ್ನು ಈ ಹೇಳಿಕೆ ಖಾತ್ರಿಪಡಿಸುತ್ತದೆ.
ಅನಾಮಿಕರಿಂದಲೇ ವಂಚನೆ
ಬೆಂಗಳೂರಿನಲ್ಲಿ ದಾಖಲಾಗಿರುವ ದೂರುಗಳ ಪೈಕಿ ಹೆಚ್ಚಿನ ಪಕ್ಷ ಅನಾಮಿಕರಿಂದ ಆಗಿರುವಂಥವೇ. ಅನಾಮಿಕರಿಂದ ವಂಚನೆ ಪ್ರಕರಣಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ 66D ಅಡಿ ಬರುತ್ತವೆ. ಅಂಥ 574 ಪ್ರಕರಣಗಳು ಬೆಂಗಳೂರಿನಲ್ಲಿ 2015ರಲ್ಲಿ ದಾಖಲಾಗಿದ್ದವು.
ಬೇರೆಯವರ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ
ಆ ನಂತರದ ಸ್ಥಾನದಲ್ಲಿ ಇರುವ ಅಪರಾಧ ಬೇರೆಯವರ ಗುರುತು ಹಾಕಿಕೊಂಡು ವಂಚನೆ ಮಾಡಿರುವುದು. ಬೇರೆಯವರ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವಂಥ ಪ್ರಕರಣಗಳು ಇದರಡಿ ಬರುತ್ತವೆ. ಅಂಥ 336 ಪ್ರಕರಣಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ 66C ಅಡಿ ಬರುತ್ತವೆ.
ಸರ್ಜಾಪುರದಲ್ಲಿ ಅತಿಹೆಚ್ಚು ಪ್ರಕರಣ
ಒಟ್ಟು ದಾಖಲಾಗಿರುವ ಪ್ರಕರಣಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ಕೃತ್ಯ ನಡೆದಿರುವುದು ಸಂಜೆ ಆರು ಗಂಟೆಯಿಂದ ಬೆಳಗ್ಗೆ ಆರರ ಮಧ್ಯೆ. ಸರ್ಜಾಪುರದಲ್ಲಿ ಅತಿಹೆಚ್ಚು ಅಂದರೆ ನೂರಾಮೂವತ್ತೊಂದು ಪ್ರಕರಣ ದಾಖಲಾಗಿವೆ.
ಎರಡು, ಮೂರು...ಆ ನಂತರದ ಸ್ಥಾನದಲ್ಲಿರುವ ಪ್ರದೇಶ
ಎಚ್ ಎಸ್ ಆರ್ ಲೇಔಟ್ ನಲ್ಲಿ ನೂರಾ ಹದಿನಾರು, ಜಯನಗರದಲ್ಲಿ ಐವತ್ಮೂರು, ಕೋರಮಂಗಲದಲ್ಲಿ ಇಪ್ಪತ್ತೊಂಬತ್ತು, ಕಲಾಸಿಪಾಳ್ಯದಲ್ಲಿ ಐದು ಪ್ರಕರಣಗಳು ದಾಖಲಾಗಿವೆ.
ಇಲ್ಲೆಲ್ಲ ಸೈಬರ್ ಅಪರಾಧ ಪ್ರಕರಣ ದಾಖಲಾಗಿಲ್ಲ
ಕೆಆರ್ ಮಾರುಕಟ್ಟೆ, ಯಶವಂತಪುರ ಕೈಗಾರಿಕೆ ಪ್ರದೇಶ ಮತ್ತು ಬಾಪೂಜಿ ನಗರದಲ್ಲಿ ಯಾವುದೇ ಸೈಬರ್ ಅಪರಾಧ ಪ್ರಕರಣ ದಾಖಲಾಗಿಲ್ಲ.
ಎಲ್ಲಿಂದಲೋ ನಡೆಸಿದ ಅಪರಾಧ
ಸೈಬರ್ ಅಪರಾಧ ಎಲ್ಲಿ ನಡೆದಿದೆಯೋ ಅಲ್ಲೇ ದೂರು ದಾಖಲಾಗಬೇಕು ಅಂತಿಲ್ಲ. ಎಚ್ ಎಸ್ ಆರ್ ಲೇಔಟ್ ನಲ್ಲಿ ಹೆಚ್ಚು ದೂರು ದಾಖಲಾಗಿದೆ ಅಂದರೆ ಅದರರ್ಥ ಆ ಪ್ರದೇಶ ಸುರಕ್ಷಿತವಲ್ಲ ಎಂಬರ್ಥದಲ್ಲಿ ಅಲ್ಲ. ಅಪರಾಧ ಅಲ್ಲೇ ನಡೆದಿರಬಹುದು. ಆದರೆ ಅಪರಾಧಿಗಳು ಎಲ್ಲಿಂದಲೋ ಆ ಕೃತ್ಯ ಎಸಗಿರುತ್ತಾರೆ ಎನ್ನುತ್ತಾರೆ ಪೊಲೀಸ್ ಅಧಿಕಾರಿ ಎಂಡಿ ಶರತ್.
ವಾರದ ಎಲ್ಲ ದಿನವೂ ಕೆಲಸ
ಯಾವುದೇ ಸಂತ್ರಸ್ತರು ದೂರು ದಾಖಲಿಸಿದ ತಕ್ಷಣ ಪ್ರಕರಣ ಬೆನ್ನು ಹತ್ತುವುದಕ್ಕೆ ದಿನದ ಇಪ್ಪತ್ನಾಲ್ಕು ಗಂಟೆ, ವಾರದ ಏಳೂ ದಿನ ಕೆಲಸ ಮಾಡುವ ಎರಡು ಸೈಬರ್ ಅಪರಾಧ ಪೊಲೀಸ್ ಠಾಣೆಗಳಿವೆ ಎನ್ನುತ್ತಾರೆ ಶರತ್.
ವಿಷಯ ಜ್ಞಾನದ ಕೊರತೆ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವವರೇ ಹೇಳುವ ಪ್ರಕಾರ, ಪೊಲೀಸರಿಗೆ ಸೈಬರ್ ಅಪರಾಧ ಎಂಬುದೇ ಹೊಸ ವಿಷಯ. ಅವರಿಗೆ ವಿಷಯ ಜ್ಞಾನದ ಕೊರತೆ ಇದೆ.