ರಾಸಲೀಲೆ ಪ್ರಕರಣ, ರಾಜೀನಾಮೆ ಕೊಡಲು ಸಿದ್ಧ: ಮೇಟಿ
ಬೆಂಗಳೂರು, ಡಿಸೆಂಬರ್ 13: ರಾಸಲೀಲೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಹಿನ್ನೆಲೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಸಚಿವ ಎಚ್.ವೈ.ಮೇಟಿ ಸಿಎಂ ಬಳಿ ನುಡಿದಿದ್ದಾರೆ ಎನ್ನಲಾಗಿದೆ.
ರಾಸಲೀಲೆ ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ಬಣ್ಣಬಣ್ಣವಾಗಿ ಬಿತ್ತರವಾಗುತ್ತಿದ್ದು, ಸಂತ್ರಸ್ತ ಮಹಿಳೆ ಮತ್ತು ಆರ್ ಟಿಐ ಕಾರ್ಯಕರ್ತರ ಗೊಂದಲ ಹೇಳಿಕೆಗಳು ವಿವಿಧ ರೂಪ ಪಡೆದುಕೊಳ್ಳುತ್ತಿದೆ. ಇದು ಪಕ್ಷಕ್ಕೆ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವ ಸಾಧ್ಯತೆಯನ್ನು ಹೆಚ್ಚಿಸಿದೆ. ಹೀಗಾಗಿ ಈ ಪ್ರಕರಣದಿಂದ ಪಕ್ಷಕ್ಕೆ ಕಳಂಕ ಬರುವುದು ಬೇಡ. ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ಮುಖ್ಯಮಂತ್ರಿ ಬಳಿ ಹೇಳಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.[ಮೇಟಿಯನ್ನು ವಜಾ ಮಾಡಲಿ : ಸಿದ್ದುಗೆ ಪೂಜಾರಿ ಸವಾಲ್]
ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿಯಾದ ಎಚ್,ವೈ.ಮೇಟಿ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಸಿದ್ದಾರೆ. ಚರ್ಚೆಯಲ್ಲಿ ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡಿದ್ದು ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ ಎಂದು ಹೇಳಿದ್ದಾರೆ. ಪಕ್ಷ ಮತ್ತು ರಾಜ್ಯದ ಹಿತದೃಷ್ಟಿಯಿಂದ ನಾನು ರಾಜೀನಾಮೆ ಕೊಡಲು ಸಿದ್ಧವಾಗಿದ್ದೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಏನು ಎಂಬುದು ಇನ್ನು ಸ್ಪಷ್ಟವಾಗಿಲ್ಲ.