ನೀವು ಪತ್ರಿಕೆಗೆ ಬರೆಯಬೇಕೆ? ಹಾಗಿದ್ದರೆ ಈ ಪುಸ್ತಕ ಓದಿ!
'ಪತ್ರಿಕೆಗೆ ಬರೆಯೋದು ಹೇಗೆ?' ಎಂಬ ಪುಸ್ತಕದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಕಾರಣವಿಷ್ಟೆ, ತಮ್ಮ ಫೇಸ್ಬುಕ್, ಟ್ವಿಟರ್ ಗೋಡೆಗಳಲ್ಲಿ ಬರೆದುಕೊಳ್ಳುವವರು, ಅದೇ ಬರಹವನ್ನು ಹೇಗೆ ಪತ್ರಿಕೆಯೊಂದಕ್ಕೆ ಬರೆಯಬಹುದು ಎಂಬುದನ್ನು ಈ ಪುಸ್ತಕ ಹೇಳುತ್ತಿದೆ.
ಯುವ ಪತ್ರಕರ್ತ ವಿನಾಯಕ ಕೋಡ್ಸರ, ತಮ್ಮದೇ ಮಿಥಿಲಾ ಪ್ರಕಾಶನದ ಮೂಲಕ ಈ ಪುಸ್ತಕವನ್ನು ಹೊರಗೆ ತರುತ್ತಿದ್ದಾರೆ. "ನಮ್ಮಲ್ಲಿ ಬರೆಯಬೇಕೆಂಬುದು ಬಹಳಷ್ಟು ಜನರ ಬಯಕೆ. ಬರೆಯುತ್ತಾರೆ ಕೂಡ. ಆದರೆ ಯಾವ ಪತ್ರಿಕೆಗೆ ಹೇಗೆ ಬರೆಯಬೇಕು? ಏನು ಬರೆಯಬೇಕು ಎಂದು ಗೊತ್ತಿಲ್ಲರುವುದಿಲ್ಲ. ಇನ್ನು ಕೆಲ ಪುರವಣಿಯಲ್ಲಿ ಕುಳಿತವರಿಗೆ ಲೇಖಕನಿಗೆ ಚ್ಯುತಿಯಾಗದಂತೆ ಹೇಗೆ ಎಡಿಟ್ ಮಾಡಬೇಕು ಎಂಬ ಸ್ಪಷ್ಟತೆಯಿಲ್ಲ. ಅದಕ್ಕಿಂತ ಮುಖ್ಯವಾಗಿ ಪುರವಣಿಗಳು ಗಂಭೀರತೆ ಕಳೆದುಕೊಳ್ಳುತ್ತಿವೆ. ಓರ್ವ ಲೇಖಕನ ಲೇಖನಕ್ಕೆ ಪ್ರತಿಕ್ರಿಯಿಸುವ ಸೌಜನ್ಯತೆಯನ್ನು ಕಳೆದುಕೊಂಡಿದೆ ಎಂಬ ದೂರು ಇದೆ. ಮತ್ತೊಂದು ಮಗ್ಗುಲಿನಲ್ಲಿ ನೋಡಿದರೆ ಉದ್ದನೆಯ ಇಡೀ ಲೇಖನವನ್ನು ಪೂರ್ತಿಯಾಗಿ ನೋಡುವ ವ್ಯವಧಾನ ಹಲವರಿಗಿಲ್ಲ ಎಂಬುದು ಬಹುವಾಗಿ ಕಾಡುತ್ತಿತ್ತು. ಅದಕ್ಕೆ ಉತ್ತರವಾಗಿ ಈ ಪುಸ್ತಕ" ಎಂದು ಕೋಡ್ಸರ ಬರೆದುಕೊಂಡಿದ್ದಾರೆ. ಅಲ್ಲಿಗೆ ಪುಸ್ತಕದ ಉದ್ದೇಶ ಮತ್ತು ಅದರಲ್ಲಿರುವ ವಸ್ತು ಸ್ಪಷ್ಟವಾಗಿದೆ.
ಕಾರ್ಯನಿರತ ಪತ್ರಕರ್ತರು, ಫ್ರೀಲಾನ್ಸ್ ಬರಹಗಾರರು ಇದರಲ್ಲಿ ಬರೆದಿರುವುದು ವಿಶೇಷ. ಶ್ರೀವತ್ಸ ಜೋಶಿ, ಶಿವಾನಂದ ಕಳವೆ, ರೋಹಿತ್ ಚಕ್ರತೀರ್ಥ, ನವೀನ್ ಸಾಗರ್, ಶ್ರೀನಿಧಿ ಡಿ.ಎಸ್, ಶ್ರೀನಿಧಿ ಟಿ.ಜಿ, ಮಾವೆಂಸ ಪ್ರಸಾದ್, ಜಯದೇವ್ಪ್ರಸಾದ್ ಮೊಳೆಯಾರ್, ವಿಕಾಸ್ ನೇಗಿಲೋಣಿ, ರಜನಿ ಹೆಗಡೆ, ವಿದ್ಯಾರಶ್ಮಿ ಪೆಲತ್ತಡ್ಕ ಪತ್ರಿಕಾ ಬರವಣಿಗೆ ಕುರಿತು ಬರೆದಿದ್ದಾರೆ. ನಿರಂಜನ ವಾನಳ್ಳಿ ಮುನ್ನುಡಿ, ರವಿ ಹೆಗಡೆಯವರ ಬೆನ್ನುಡಿ ಪುಸ್ತಕಕ್ಕಿದೆ.
ಫೆ.20ರ ಶನಿವಾರ ಸಂಜೆ 4.30ಕ್ಕೆ ಬೆಂಗಳೂರಿನ ಕೆ.ಆರ್.ಸರ್ಕಲ್ಲಿನ ಯುವಿಸಿಇ ಆವರಣದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ. ಆಕರ್ಷಕ ವಿನ್ಯಾಸದೊಂದಿಗೆ ಬಂದಿರುವ ಪುಸ್ತಕ, ಮುನ್ನುಡಿಯಲ್ಲಿ ನಿರಂಜನ ವಾನಳ್ಳಿಯವರು ಹೇಳಿದಂತೆ ಪತ್ರಿಕಾ ಬರವಣಿಗೆಗೆ ಮಾರ್ಗದರ್ಶಿಯಾಗಬಲ್ಲ ಕೃತಿ. ಮಿಸ್ ಮಾಡದೆ ಓದಿ, ನಂತ್ರ ಬರೆಯಿರಿ!