ನನ್ನ ಬಸ್ ಸುಟ್ಟಿದ್ದರಿಂದ ಕಾವೇರಿ ಸಮಸ್ಯೆ ಬಗೆಹರಿಯುತ್ತಾ?: ಕೆ.ಪಿ.ನಟರಾಜನ್
ಬೆಂಗಳೂರು, ಸೆಪ್ಟೆಂಬರ್ 13: ನಾಯಂಡಹಳ್ಳಿ ಬಳಿ ಡಿಸೋಜಾ ನಗರದಲ್ಲಿ ಬಸ್ ಗಳು ಹೊತ್ತಿ ಉರಿಯುವ ದೃಶ್ಯಗಳು ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದಂತೆ ಕಾವೇರಿ ಜಲ ವಿವಾದದ ತೀರ್ಪಿನಿಂದ ಪರಿಸ್ಥಿತಿ ಹೇಗೆ ಕೈ ಮೀರುತ್ತಿದೆ ಎಂದು ಅರಿವಿಗೆ ಬರತೊಡಗಿತು.
ನೂರೈವತ್ತರಿಂದ ಇನ್ನೂರರಷ್ಟಿದ್ದ ಪ್ರತಿಭಟನಾಕಾರರು ಪೆಟ್ರೋಲ್ ಬಾಂಬ್ ಸಹಿತ ಬಂದು ಕೆಪಿಎನ್ ಟ್ರಾವೆಲ್ಸ್ ಗೆ ಸೇರಿದ ನಲವತ್ತೈದು ಬಸ್ ಗೆ ಬೆಂಕಿ ಇಟ್ಟರು.[ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಸರ್ಕಾರ ಮೀರಬಹುದು]
ದಕ್ಷಿಣ ಭಾರತದ ಖಾಸಗಿ ಬಸ್ ಆಪರೇಟರ್ ಗಳ ಪೈಕಿ ಕೆಪಿಎನ್ ಪಾಲು ತುಂಬ ದೊಡ್ದದಿದೆ. ಇದರ ಮಾಲೀಕರು ತಮಿಳುನಾಡಿನ ಸೇಲಂ ಮೂಲದ ಕೆ.ಪಿ.ನಟರಾಜನ್. "ಇದೇ ಮೊದಲ ಸಲ ನಮ್ಮ ಬಸ್ ಗಳನ್ನು ಗುರಿ ಮಾಡಿಕೊಂಡು ಈ ಪರಿಯ ದಾಳಿ ಮಾಡಿರುವುದು. ಕಾವೇರಿ ಗಲಾಟೆ ಎರಡೂ ರಾಜ್ಯಗಳಲ್ಲಿ ಆಗಿದೆ. ಕೆಲವು ಸಲ ಬಸ್ ಗಳ ಮೇಲೆ ದಾಳಿಗಳು ಕೂಡ ಆಗಿವೆ, ಆದರೆ ಈ ಪ್ರಮಾಣದಲ್ಲಿ ಅಲ್ಲ" ಎನ್ನುತ್ತಾರೆ ನಟರಾಜ್.
ಕೆಪಿಎನ್ ಟ್ರಾವೆಲ್ಸ್ 1972ರಲ್ಲಿ ಅರಂಭವಾಗಿದ್ದು, ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಪುದುಚೆರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. "ನಾನೊಬ್ಬ ವ್ಯಾಪಾರಿ. ನನ್ನ ಬಸ್ ಗಳು ಹಾಗೂ ವ್ಯವಹಾರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದರಿಂದ ಕಾವೇರಿ ಸಮಸ್ಯೆ ಬಗೆಹರಿಯುತ್ತಾ? ನಮಗೂ ಇದಕ್ಕೂ ಏನೂ ಸಂಬಂಧವಿಲ್ಲ ಎಂದಿದ್ದಾರೆ ನಟರಾಜ್.[ಕೆಪಿಎನ್ ಟ್ರಾವೆಲ್ಸ್ ನ ಮೂವತ್ತಕ್ಕೂ ಹೆಚ್ಚು ಬಸ್ ಗೆ ಬೆಂಕಿ]
ಡಿಪೋದಲ್ಲಿ ಇದ್ದ ಸ್ಲೀಪರ್, ಸೆಮಿ ಸ್ಲೀಪರ್, ಎಸಿ-ನಾನ್ ಎಸಿ ಬಸ್ ಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವ ಸಿಬ್ಬಂದಿಗೂ ಗಂಭೀರವಾದ ಗಾಯಗಳಾಗಿಲ್ಲ.
"ಬೆಂಕಿ ಹಚ್ಚಬೇಕು ಅಂತಲೇ ಗುಂಪು ಸಿದ್ಧವಾಗಿ ಬಂದಿತ್ತು. ಆ ವೇಳೆ ಅಲ್ಲಿದ್ದ ನಾಲ್ಕೈದು ಡ್ರೈವರ್ ಗಳ ಮೇಲೂ ದಾಳಿಯಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಎಲ್ಲ ಬಸ್ ಗಳೂ ಸುಟ್ಟುಹೋಗಿವೆ. ಇವತ್ತು (ಮಂಗಳವಾರ) ಪೊಲೀಸರಿಗೆ ದೂರು ನೀಡುತ್ತೇವೆ" ಎಂದು ನಟರಾಜ್ ಹೇಳಿದರು.[ಬೆಂಗಳೂರಿನಲ್ಲಿರುವ ತಮಿಳರ ಪ್ರದೇಶಕ್ಕೆ ಬಿಗಿ ಭದ್ರತೆ]
"ನಮ್ಮ ತಂಡದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಆದರೆ ಏನು ಅನಾಹುತ ಆಗಬೇಕೋ ಆಗಿಹೋಗಿದೆ. ಈ ರೀತಿಯ ಭೀತಿ ಸೃಷ್ಟಿಯಾಗುವುದು ಒಳ್ಳೆಯದಲ್ಲ" ಎಂದು ಅವರು ಹೇಳಿದ್ದಾರೆ. ಕೆಪಿಎನ್ ಮಾತ್ರವಲ್ಲ, ಬೆಂಗಳೂರಿನ ತಮಿಳರಿಗೆ ಸೇರಿದ ವ್ಯವಹಾರಗಳ ಮೇಲೆ ದಾಳಿಗಳಾಗಿವೆ. ಸಿಎಂಎಚ್ ರಸ್ತೆಯಲ್ಲಿರುವ ಮೊಬೈಲ್ ಸ್ಟೋರ್ ಮೇಲೂ ದಾಳಿಯಾಗಿದೆ.
ಅದಾದ ನಂತರ ಅಡ್ಯಾರ್ ಅನಂದ ಭವನ್ ಮತ್ತಿತರ ತಮಿಳರ ಮಾಲೀಕತ್ವದ ಅಂಗಡಿಗಳ ಮೇಲೆ ದಾಳಿಯಾಗಿವೆ. ಇದೇ ರೀತಿ ಚೆನ್ನೈನಲ್ಲೂ ಸೋಮವಾರ ನ್ಯೂ ವುಡ್ ಲ್ಯಾಂಡ್ ಹೋಟೆಲ್ ಹಾಗೂ ಕರ್ನಾಟಕ ಬ್ಯಾಂಕ್ ಮೇಲೆ ಪ್ರತಿಭಟನಾನಿರತರು ದಾಳಿ ಮಾಡಿದ್ದರು. ಆದರೆ ಕರ್ನಾಟಕಕ್ಕೆ ಹೋಲಿಸಿದರೆ ಆ ಪ್ರಮಾಣ ಕಡಿಮೆ.