ಹೊಸ ನೋಟು ಸಿಕ್ಕಿದ ಮೇಲೆ ಆದ ಅನುಕೂಲವೇನು?
ಬೆಂಗಳೂರು, ನವೆಂಬರ್, 15: ದೇಶದಲ್ಲಿ ಹೊಸ ನೋಟಿನ ಪರದಾಟದಿಂದ ಜನ ಪರಿತಪಿಸುತ್ತಿದ್ದಾರೆ. ಹಾಗೆಯೇ ಹೊಸ ನೋಟಿನಿಂದಾಗಿ ಕೆಲವು ಬದಲಾವಣೆಗಳೂ ಆಗಿವೆ.
ಕೇಂದ್ರ ಸರ್ಕಾರ ಐನೂರು, ಸಾವಿರ ನೋಟಿನ ಮೇಲೆ ನಿಷೇಧ ಹೇರಿದ ಮೇಲೆ ಟೋಲ್ ಗಳಲ್ಲಿ ಹಣ ಪಾವತಿಸುವುದನ್ನು ನಿಲ್ಲಿಸಲಾಗಿದ್ದು ಇದನ್ನು ನವೆಂಬರ್ 21ರವರೆಗೆ ವಿಸ್ತರಿಸಲಾಗಿದೆ.
ಇನ್ನು ಸೋಮವಾರ ರಾತ್ರಿಯಿಂದಲೇ ಜಾರಿಯಾಗುವಂತೆ ದೇಶಾದ್ಯಂತ ಎಲ್ಲ ಏರ್ ಪೋರ್ಟ್ ಗಳಲ್ಲಿ ಅನ್ವಯಿಸುವಂತೆ ಪಾರ್ಕಿಂಗ್ ಶುಲ್ಕವನ್ನು ಇದೇ 21 ರವರೆಗೆ ರದ್ದು ಮಾಡಲಾಗಿದೆ ಎಂದು ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.[ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?]
ಹಾಗೆಯೇ ಬೆಂಗಳೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಲ್ಲರೆ ಕಾರಣಕ್ಕೆ ಯಾವುದೇ ರೋಗಿಯ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ಸುತ್ತೋಲೆಯನ್ನು ಹೊರಡಿಸಿ ಬಡ ಮತ್ತು ತುರ್ತು ಪರಿಸ್ಥಿತಿಯ ರೋಗಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.[ಪರಸ್ಥಳದಿಂದ ಬೆಂಗಳೂರಿಗೆ ಬಂದವರ ನೋಟಿನ ಪರದಾಟಗಳು]
ತಮ್ಮ ಖಾತೆಯನ್ನು ಹೊಂದಿರುವ ಬ್ಯಾಂಕ್ ನಲ್ಲಿ ಒಟ್ಟು ಐದು ಬಾರಿ ಮತ್ತು ಬೇರೆ ಬ್ಯಾಂಕಿನಲ್ಲಿ ಮೂರು ಬಾರಿ ಹಣವನ್ನು ಹೊರತೆಗೆಯುವ ನಿಯಮವನ್ನು ಬ್ಯಾಂಕ್ ಗಳು ವಿಧಿಸಿದ್ದವು. ಆದರೀಗ ಬ್ಯಾಂಕುಗಳಲ್ಲಿ ಹಣವನ್ನು ಎಷ್ಟು ಬಾರಿ ಹೊರತೆಗೆದರೂ ಯಾವುದೇ ಶುಲ್ಕ ವಿಧಿಸದಂತೆ ಆರ್ ಬಿಐ ಸೂಚಿಸಿದೆ.
ಇದೇ ರೀತಿ ಜಲಮಂಡಲಿಯು ಗ್ರಾಹಕರಿಗೆ ಅನುಕೂಲವಾಗುವಂತೆ ನ.21ರ ವರೆಗೆ ನೀರಿನ ಬಿಲ್ಲನ್ನು ಹಳೇ ನೋಟಿಯಲ್ಲಿಯೇ ಕಟ್ಟಿ ಎಂದು ಹೇಳಿದೆ.
ಬ್ಯಾಂಕುಗಳಲ್ಲಿ ಹೊಸ ಐನೂರು ರು ನೋಟುಗಳು ಸೋಮವಾರದಿಂದ ಹರಿದಾಡುತ್ತಿದ್ದು, ಎಟಿಎಂ, ಮತ್ತು ಬ್ಯಾಂಕುಗಳಲ್ಲಿ ಹಣ ಬದಲಾಯಿಸುವ ಹಣದ ಪ್ರಮಾಣವನ್ನು ಹೆಚ್ಚಿಸಲಾಗಿದೆ.