10 ಕೋಟಿ ರುಪಾಯಿ ದಂಡವನ್ನು ಶಶಿಕಲಾ ಹೇಗೆ ಕಟ್ತಾರೆ?
ಬೆಂಗಳೂರು, ಫೆಬ್ರವರಿ 22: ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ 10 ಕೋಟಿ ರುಪಾಯಿ ದಂಡ ಮೊತ್ತವನ್ನು ಶಶಿಕಲಾ ನಟರಾಜನ್ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಹದಿಮೂರು ತಿಂಗಳು ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಈ ಬಗ್ಗೆ ಮಂಗಳವಾರ ಸುತ್ತೋಲೆ ಹೊರಡಿಸಿದ್ದು, ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಹದಿಮೂರು ತಿಂಗಳು ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಶಶಿಕಲಾಗೆ ಇರುವ ಮೊದಲನೇ ಆಯ್ಕೆ ಕೋರ್ಟ್ ಆದೇಶದಂತೆ ದಂಡ ಕಟ್ಟುವುದು. ಒಂದು ವೇಳೆ ಆಕೆ ಹಣ ಕಟ್ಟಿದರೆ ಅದರ ಮೂಲವನ್ನು ವಿವರಿಸಬೇಕಾಗುತ್ತದೆ. ಅಕ್ರಮವಾಗಿ ಗಳಿಸಿದ ಆಸ್ತಿಯಿಂದ ಈ ಹಣ ಕಟ್ಟುವಂತಿಲ್ಲ. ದಂಡವನ್ನು ವಸೂಲು ಮಾಡುವ ಮುಂಚೆಯೇ ಅದರ ಮೂಲವನ್ನು ಅಧಿಕಾರಿಗಳು ಕೇಳುತ್ತಾರೆ.[ತಮಿಳುನಾಡು ನೂತನ ಸಚಿವರಿಗಿಲ್ಲ ಶಶಿಕಲಾ ದರ್ಶನ]
ಒಂದು ವೇಳೆ ಆಕೆ ಹಣ ಕಟ್ಟದಿದ್ದರೆ ಕರ್ನಾಟಕ ಸರಕಾರ ಶಶಿಕಲಾ ಆಸ್ತಿಯನ್ನು ಜಪ್ತಿ ಮಾಡಿಕೊಂಡು, ಅದನ್ನು ಹರಾಜು ಹಾಕುವ ಮೂಲಕ ಹಣ ವಸೂಲಿ ಮಾಡಲು ಕೋರ್ಟ್ ಅನುಮತಿ ಕೇಳುತ್ತದೆ. ಒಂದು ವೇಳೆ ಇದಕ್ಕೆ ಅನುಮತಿ ಸಿಕ್ಕರೆ, ಆಕೆಗಿರುವ ಆಸ್ತಿಗಳನ್ನು ಗುರುತಿಸಲಾಗುತ್ತದೆ. ಆ ನಂತರ ಅವುಗಳ ಮೌಲ್ಯಮಾಪನ ಮಾಡಿ, ಹರಾಜು ಹಾಕಲಾಗುತ್ತದೆ.
ಹರಾಜಿನಿಂದ ಬರುವ ಮೊತ್ತವನ್ನು ಸರಕಾರ ತೆಗೆದುಕೊಳ್ಳುತ್ತದೆ. ಅದೇನೇ ಆದರೂ ಆ ಮೊತ್ತ ಕರ್ನಾಟಕಕ್ಕೆ ಸೇರೋದಿಲ್ಲ. ಮೂಲ ಪ್ರಕರಣ ತಮಿಳುನಾಡಿನಲ್ಲಿ ದಾಖಲಾಗಿರುವುದರಿಂದ ಆ ಹಣ ಅಲ್ಲಿನ ಖಜಾನೆಗೆ ಹೋಗುತ್ತದೆ. ಒಂದು ವೇಳೆ ಶಶಿಕಲಾ ಹಣ ನೀಡಲಿಕ್ಕಾಗದೆ, ಅಧಿಕಾರಿಗಾಳು ಆಕೆಯ ಆಸ್ತಿಯನ್ನು ಗುರುತಿಸಲು ಆಗದಿದ್ದಲ್ಲಿ. ಅನ್ಯ ಮಾರ್ಗವಿಲ್ಲದೆ ಶಶಿಕಲಾ ಹೆಚ್ಚುವರಿ ಸಮಯವನ್ನು ಜೈಲಿನಲ್ಲೇ ಕಳೆಯಬೇಕಾಗುತ್ತದೆ.[ಶಶಿಕಲಾ ಬರುವ ದಾರಿಯಲ್ಲಿ.. ಗಲಭೆ ಸೃಷ್ಟಿಸಲು ಸುಪಾರಿ ಕೊಟ್ಟಿದ್ರಂತೆ!]
ಇಲ್ಲಿ ಇನ್ನೊಂದು ಪ್ರಶ್ನೆ ಬರುತ್ತದೆ. ಆಕೆ ಬದಲು ಬೇರೆಯವರು ದಂಡ ಕಟ್ಟಬಹುದೆ? ಕಾನೂನು ತಜ್ಞರ ಪ್ರಕಾರ, ಆ ವ್ಯಕ್ತಿಗೆ ಶಶಿಕಲಾ ಜತೆಗಿರುವ ಬಾಂಧವ್ಯ ಮತ್ತು ಆ ಹಣ ನ್ಯಾಯಬದ್ಧವಾಗಿಯೇ ಸಂಪಾದಿಸಿದ್ದು ಎಂದು ಸಾಬೀತುಪಡಿಸಲು ಬೇಕಾದಷ್ಟು ಸಾಕ್ಷ್ಯವನ್ನು ಒದಗಿಸಬೇಕಾಗುತ್ತದೆ. ಜತೆಗೆ ಆಕೆಯ ಪರವಾಗಿ ತಮಿಳುನಾಡು ಸರಕಾರವಂತೂ ಆ ಹಣವನ್ನು ಪಾವತಿಸುವಂತಿಲ್ಲ.