ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಅಧಿಕಾರಿಗಳಿಗೆ ಸರಕಾರದ ಹೊಸ ಟಾನಿಕ್ !

By ಬಾಲರಾಜ್ ತಂತ್ರಿ
|
Google Oneindia Kannada News

(ಬಿಬಿಎಂಪಿ ಅಧಿಕಾರಿಗಳ ಬಗ್ಗೆ ಒಂದು ವಿಢಂಬನಾತ್ಮಕ ಮತ್ತು ಕಾಲ್ಪನಿಕ ಲೇಖನ) ಸದಾ ಸಂಕಷ್ಟದಲ್ಲಿ, ಬೇಡವಾಗಿರೋ ಸುದ್ದಿಯಲ್ಲಿ, ಭ್ರಷ್ಟಾಚಾರದ ವಿಷಯದಲ್ಲಿ ಖ್ಯಾ(ಕು)ತಿ ಪಡೆದಿರುವ ಬೃಹತ್ ಬೆಂಗಳೂರು ಪಾಲಿಕೆಗೆ ಹೊಸ ಕಾಯಕಲ್ಪ ನೀಡಲು ಸರಕಾರ ಮುಂದಾಗಿದೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಎನ್ನುವ ಭೇದ ಭಾವವಿಲ್ಲದೆ ಪಾಲಿಕೆ ಸದಸ್ಯರುಗಳು ಅಧಿಕಾರಿಗಳ ವಿರುದ್ದ ತಿರುಗಿ ಬೀಳುತ್ತಿರುವುದು ಖುದ್ದು ಮೇಯರ್ ಮತ್ತು ಸರಕಾರಕ್ಕೆ ನುಂಗಲಾರದ ತುತ್ತಾಗಿದೆ.

ಈ ಮುಖಭಂಗದಿಂದ ಹೊರಬರುವ ಧೃಡ ನಿರ್ಧಾರಕ್ಕೆ ಕೊನೆಗೂ ಸರಕಾರ ಬಿಬಿಎಂಪಿ ಚುನಾವಣೆಗೆ ಮುನ್ನ ಮುಂದಾಗಿದೆ.

ಇದರಂತೆ, ಮೇಯರ್, ಬಿಬಿಎಂಪಿ ಆಡಳಿತ ಸಮಿತಿ ಅಧ್ಯಕ್ಷ ಮತ್ತು ವಿಪಕ್ಷದ ಮುಖಂಡರನ್ನು ಕರೆಸಿ ಬೆಂಗಳೂರು ಉಸ್ತುವಾರಿ ಸಚಿವರು ಕೂಲಂಕುಷವಾಗಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಭೆ ನಡೆಸಿದ್ದರು ಎನ್ನುವುದು ಈಗ ಗುಪ್ತವಾಗಿ ಉಳಿದಿಲ್ಲ. (ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಿಎಂ ಗರಂ)

ಸಭೆಯಲ್ಲಿನ ಒಕ್ಕೂರಿಲಿನ ನಿರ್ಧಾರದಂತೆ ಬಿಬಿಎಂಪಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಪಕ್ಷಾತೀತವಾಗಿ ನಿರ್ಧರಿಸಲಾಗಿದೆ ಎನ್ನುವುದು ಬಿಬಿಎಂಪಿ ಆವರಣದಲ್ಲಿ ಸದ್ಯ ನಡೆಯುತ್ತಿರುವ ಹಸಿಬಿಸಿ ಟಾಕ್.

ಹಾರೆ ಪಿಕ್ಕಾಸಿನಿಂದ ಹಿಡಿದು ಹಿಟಾಚಿ ಬುಲ್ಡೋಜರ್ ತನಕ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬಾಚಿಕೊಳ್ಳುವ ಅಧಿಕಾರಿಗಳ ಮೇಲೆ ಸಭೆಯಲ್ಲಿ ಎಲ್ಲರೂ ಮುನಿಸಿಕೊಂಡಿದ್ದಾರೆ.

ಆದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ಮುನ್ನ ಕಾದುನೋಡುವ ತಂತ್ರಕ್ಕೆ ಬೆಂಗಳೂರು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿರುವುದು ಅಧಿಕಾರಿಗಳ ವಲಯದಲ್ಲೀಗ ಸಂಚಲನ ಮೂಡಿಸಿದೆ. (ಬೆಂಗಳೂರು ಮೇಯರ್ ಶಾಂತಕುಮಾರಿ ಸಂದರ್ಶನ)

ಬಿಬಿಎಂಪಿ ನೀಡುವ ಸಂಬಳ ಅಧಿಕಾರಿಗಳಿಗೆ ಪುಡಿಗಾಸಿನಂತಾಗಿದ್ದರೂ, ಅವರವರ ಕಾರ್ಯಕ್ಷಮತೆ ಮತ್ತು ದಕ್ಷತೆಯ ಆಧಾರದ ಮೇಲೆ ವಾರ್ಷಿಕ ಸಂಬಳದ (gross annual income, before TDS) ಶೇ.40ರಷ್ಟನ್ನು variable pay ಮೂಲಕ ನೀಡುವ ಪ್ರಮುಖ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ.

Variable pay ಅನ್ನು ಅಂತಿಮ ಗೊಳಿಸಲಾಗುವ ಮಾನದಂಡದ ಮೂಲಕ ಪ್ರತೀ ಮೂರು ತಿಂಗಳಿಗೊಮ್ಮೆ ನೀಡಲು ಬಿಬಿಎಂಪಿಯ ಹಣಕಾಸು ಇಲಾಖೆ ನೋ ಪ್ರಾಬ್ಲಂ ಅಂದಿದೆ.

ಕಸ ವಿಲೇವಾರಿಯಿಂದ ಹಿಡಿದು ಬೃಹತ್ ಕಾಮಗಾರಿಯ ತನಕದ ಎಲ್ಲಾ ಯೋಜನೆಗಳಲ್ಲಿ ಲಂಚಾವತಾರ ತಾಂಡವಾಡುತ್ತಿರುವುದಕ್ಕೆ ಬ್ರೇಕ್ ಹಾಕಲು ಸರಕಾರ ಮುಂದಾಗಿರುವುದು ಸಭೆಯಲ್ಲಿನ ವಿಶೇಷ.

ಕಳಪೆ ಕಾಮಗಾರಿಗೆ ಅಧಿಕಾರಿಗಳನ್ನೇ ಹೊಣೆ ಮಾಡುವ ಪದ್ದತಿ ಇಷ್ಟು ದಿನ ಬರೀ ಮಾತಿನಲ್ಲಿದ್ದು, ಇನ್ನು ಮುಂದೆ ಅದನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ. (ಮಧ್ಯಾಹ್ನ 3ಗಂಟೆ ತನಕ ಬಿಬಿಎಂಪಿ ಕಚೇರಿಗೆ ಬರಬೇಡಿ)

ಈ ನಿರ್ಧಾರದಿಂದ ಬಿಬಿಎಂಪಿ ಅಧಿಕಾರಿಗಳು ಕೋಪಿಸಿಕೊಳ್ಳಬಾರದು ಎನ್ನುವ ಮುಂದಾಲೋಚನೆಯಿಂದ ಅಧಿಕಾರಿಗಳನ್ನು ಸಂತೃಪ್ತಿ ಪಡಿಸುವ ಇನ್ನೊಂದು ನಿರ್ಧಾರಕ್ಕೂ ಸಭೆಯಲ್ಲಿ ಬರಲಾಗಿದೆ.

ಇದರಂತೆ, ಎಲ್ಲಾ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಬಿಬಿಎಂಪಿ ಇಲಾಖೆಯ ಅಧಿಕಾರಿಗಳನ್ನು ಶಾಮೀಲು ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ, ಅಧಿಕಾರಿಗಳು ಯಾವ contractor ಅನ್ನು ಅನುಮೋದಿಸುತ್ತಾರೋ ಅವರಿಗೇ ಟೆಂಡರ್ ಅಂತಿಮಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಅಲ್ಲದೇ, ಪ್ರತೀ ಕಾಮಗಾರಿಯ ಒಟ್ಟು ಟೆಂಡರ್ ಮೊತ್ತದಲ್ಲಿ ಇಂತಿಷ್ಟು ಪರ್ಸಂಟೇಜ್ ಮೊತ್ತವನ್ನು ಕಮಿಷನ್ ರೂಪದಲ್ಲಿ ನೇರವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಅಕೌಂಟಿಗೆ ಜಮಾ ಮಾಡುವ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ ಎನ್ನಲಾಗಿದೆ.

How if implement variable pay and commission system in BBMP, Bengaluru

ಈ ಮೂಲಕ ಕಳಪೆ ಕಾಮಗಾರಿ, ಹಣ ಕೈಕೈ ಬದಲಾಗುದನ್ನು ತಪ್ಪಿಸುವ ದೂರಾಲೋಚನೆ ಸರಕಾರದ್ದು. ಜೊತೆಗೆ ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮುಗಿದರೇ ಮಾತ್ರ ಕಮಿಷನ್ ನೀಡುವ ಪದ್ದತಿ ಜಾರಿಗೆ ತರುವುದರಿಂದ ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ತಡೆ ಹಿಡಿಯಬಹುದು ಎನ್ನುವುದು ಸರಕಾರದ ವಸ್ತುನಿಷ್ಟ ಆಲೋಚನೆಯಾಗಿದೆ.

ಇಷ್ಟೆಲ್ಲಾ ಆದ ಮೇಲೂ ಬಿಬಿಎಂಪಿ ಅಧಿಕಾರಿಗಳು ಸುಧಾರಿಸಿಲ್ಲ ಎಂದಾದರೆ ಬಲವಂತದ VRS (Voluntary Retirement Scheme) ನೀಡುವ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ. ಸಭೆಯಲ್ಲಿನ 'ಮಿನಿಟ್ಸ್ ಆಫ್ ಮೀಟಿಂಗ್' ಅನ್ನು ಅನುಮೋದನೆಗಾಗಿ ಸಿಎಂ ಕಚೇರಿಗೆ ರವಾನಿಸಲಾಗಿದೆ.

English summary
How if implement variable pay and commission system in BBMP, Bengaluru. An imaginary article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X