ಡಿಡಿ ಹಗರಣ, ಅಗರಬತ್ತಿ ಕಂಪನಿ ಓನರಿಗೆ ಅಂಟಿಹಾಕಿಕೊಂಡ ಸಿಬಿಐ
ಕಪ್ಪು ಹಣ ಬದಲಿಸಿಕೊಳ್ಳಲು ಎಂಥೆಂಥ ಮಾರ್ಗ ಕಂಡುಕೊಳ್ತಾರೆ? ಬೆಂಗಳೂರಿನ ಬಸವನಗುಡಿಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದ ಹಗರಣ ಹೊಸ ಬಗೆಯ ವಂಚನೆ ಕ್ರಮವನ್ನು ತೆರೆದಿಟ್ಟಿದೆ. ಮೂವರ ಬಂಧನವಾಗಿ, ವಿಚಾರಣೆ ನಡೆಯುತ್ತಿದೆ.
ಬೆಂಗಳೂರು, ಡಿಸೆಂಬರ್ 19: ಸಿಬಿಐ ಕಣ್ಣಿಗೆ ಬಿದ್ದಿರುವ ಈ ಪ್ರಳಯಾಂತಕರು ಡಿಮ್ಯಾಂಡ್ ಡ್ರಾಫ್ಟ್ ಬಳಸಿ ಹೇಗೆ ತಮ್ಮ ಕಪ್ಪು ಹಣವನ್ನು ಬದಲಿಸಿಕೊಳ್ಳಲು ಯೋಜನೆ ರೂಪಿಸಿದ್ದರು ಗೊತ್ತೆ? ಇದೀಗ ಅಯ್ಯಯ್ಯೋ ಎನ್ನುವ ಸ್ಥಿತಿ ಬಂದಿದೆ. ಪ್ರೈವೇಟ್ ಕಂಪೆನಿಯೊಂದರ ಮಾಲೀಕ ಹಾಗೂ ಆತನ ಮಗನೀಗ ಸಿಬಿಐ ಅತಿಥಿಗಳು.
ಓಂಕಾರ್ ಪರಿಮಳ್ ಮಂದಿರ್ ಅಗರಬತ್ತಿ ಕಂಪೆನಿಯ ನಿರ್ದೇಶಕ ಎಸ್.ಗೋಪಾಲ್ ಹಾಗೂ ಆತನ ಮಗ ಅಶ್ವಿನ್ ಸುಂಕು ಸೇರಿ ಎಪ್ಪತ್ತು ಲಕ್ಷ ರುಪಾಯಿ ಮೌಲ್ಯದ ಡಿಮ್ಯಾಂಡ್ ಡ್ರಾಫ್ಟ್ ಪಡೆದಿದ್ದರು. ಈ ಡಿಡಿ ಪಡೆದಿದ್ದು ಬೆಂಗಳೂರಿನ ಬಸವನಗುಡಿಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ.[ಬೆಂಗಳೂರಿನಲ್ಲಿ ಆರ್ ಬಿಐನ ಇಬ್ಬರು ಅಧಿಕಾರಿಗಳ ಬಂಧನ]
ಎಂಎಸ್ ಬಜಾಜ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ನ ಹೆಸರಿನಲ್ಲಿ ನವೆಂಬರ್ 15ರಿಂದ 18ರ ಮಧ್ಯೆ ಡಿಡಿಗಾಗಿ ಹಳೇ ನೋಟಿನಲ್ಲಿ ಬ್ಯಾಂಕ್ ಗೆ ಹಣ ಪಾವತಿಸಿದ್ದರು. ಆ ನಂತರ ಆ ಡಿಡಿ ರದ್ದು ಮಾಡಿ, ಎಲ್ಲ ಹಣವನ್ನೂ ಬ್ಯಾಂಕ್ ಖಾತೆಗೆ ಹೊಸ ನೋಟುಗಳಲ್ಲಿ ಜಮೆ ಆಗುವಂತೆ ನೋಡಿಕೊಂಡಿದ್ದರು.
ಬ್ಯಾಂಕ್ ಅಸೋಸಿಯೇಷನ್ ಅಧಿಕಾರಿಗಳು ಹೇಳುವಂತೆ, ನಗದು ಪಡೆದು ಡಿಮ್ಯಾಂಡ್ ಡ್ರಾಫ್ಟ್ ನೀಡುವುದು ಆರ್ ಬಿಐ ನಿಯಮಕ್ಕೆ ವಿರುದ್ಧವಾದದ್ದು. ಗ್ರಾಹಕರ ಖಾತೆಯಿಂದ ಹಣವನ್ನು ಡೆಬಿಟ್ ಮಾಡಿ, ಆ ನಂತರ ಡಿಡಿ ವಿತರಿಸಬೇಕು. ಒಂದು ವೇಳೆ ಗ್ರಾಹಕರು ಹಣ ತೆಗೆದುಕೊಂಡು ಬಂದರೂ ಹೊಸ ನಿಯಮದ ಪ್ರಕಾರ ಹಾಗೆ ಡಿಡಿ ವಿತರಿಸಲು ಸಾಧ್ಯವಿಲ್ಲ.[ಚಳ್ಳಕೆರೆಯ ಬಚ್ಚಲುಮನೆಯಿಂದ ಗೋವಾ ಬೀಚಿನವರೆಗೆ]
ಆದರೆ, ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡ ಕಾರಣಕ್ಕೆ ಬ್ಯಾಂಕ್ ನ ಹಿರಿಯ ಮ್ಯಾನೇಜರ್ ಲಕ್ಷ್ಮಿನಾರಾಯಣ್, ಸುಂಕು ಹಾಗೂ ಗೋಪಾಲ್ ನನ್ನು ಸಿಬಿಐ ಬಂಧಿಸಿದೆ. ಮ್ಯಾನೇಜರ್ ಸಹಾಯವಿಲ್ಲದೆ ಇಂಥ ವ್ಯವಹಾರ ಸಾಧ್ಯವಿಲ್ಲ ಎಂದು ಸಿಬಿಐ ಅನುಮಾನ ವ್ಯಕ್ತಪಡಿಸಿದೆ. ಸದ್ಯಕ್ಕೆ ತನಿಖೆಯಂತೂ ಮುಂದುವರಿದಿದೆ.