ನಳಪಾಕದ ಹಿಂದಿರುವವರಿಗೆ ನಟಿ ನೀತು ಸನ್ಮಾನ
ಬೆಂಗಳೂರು, ಆಗಸ್ಟ್ 23: ನಾಲಗೆ ಮೇಲೆ ನೀರೂರಿಸುವ ತಿಂಡಿ ತಿಂದು, ಬಾಯಿ ಚಪ್ಪರಿಸಿ ಗೆಳೆಯ-ಗೆಳತಿಯರಿಗೆ ಹೋಟೆಲ್ ಹೆಸರು-ವಿಳಾಸ ಮೆಸೇಜ್ ಮಾಡಿ ಹೋಗ್ತೀವಿ. ಆದರೆ ಆ ತಿಂಡಿ ಅಷ್ಟು ಚೆನ್ನಾಗಿ ಆಗುವುದಕ್ಕೆ ಶ್ರಮಿಸಿದವರಿಗೆ 'ಸೂಪರ್ರಾಗಿದೆ ಗುರೂ..' ಅಂತ ಒಂದು ಮಾತು ಹೇಳಿರ್ತೀವಾ? ಇಲ್ಲ ಅಂತ ಹೇಳೋದಿಕ್ಕೆ ಆಗದಿದ್ದರೂ ಅಪರೂಪ ಅಂತ ಹೇಳಬಹುದು.
ಇದೇ ಮಾತನ್ನು ನೆನಪಿಸಿಕೊಳ್ಳುವ ಹಾಗೆ ಕೆ.ಅರ್.ಪುರಂ ಶಾಸಕ ಭೈರತಿ ಬಸವರಾಜ್ ಹೋಟೆಲ್ ಕಾರ್ಮಿಕರನ್ನು ಹೊಗಳಿದರು. ಯಾವುದೇ ಹೋಟೆಲ್ ಉದ್ಧಾರ ಆಗಬೇಕು ಅಂದರೆ ಕಾರ್ಮಿಕರ ಶ್ರಮ ಮುಖ್ಯ ಕಾರಣ ಎಂದರು. ಒಟ್ಟಿನಲ್ಲಿ ಕೆ.ಆರ್.ಪುರಂನಲ್ಲಿರುವ 'ಶ್ರೀಗುರು ನಳಪಾಕ' ಹೋಟೆಲ್ ಆಯೋಜಿಸಿದ್ದ ಕಾರ್ಮಿಕರ ಸನ್ಮಾನ ಕಾರ್ಯಕ್ರಮವನ್ನು ಶಾಸಕರು ಬಳಸಿದ್ದು ಅಲ್ಲಿನ ಕಾರ್ಮಿಕರ ಶ್ರಮವನ್ನು ನೆನಪಿಸಿಕೊಳ್ಳುವುದಕ್ಕೆ.
ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎನ್.ನಾಗರಾಜು ಕೂಡ ಹಾಜರಿದ್ದರು. ಗ್ರಾಹಕರಿಗೆ ರುಚಿಕರವಾದ ಆಹಾರ ಸೇವೆ ನೀಡುವ ಕಾರ್ಮಿಕರ ಬಗ್ಗೆ ಮೆಚ್ಚುಗೆ ಮಾತಾಡುವವರೇ ಕಡಿಮೆ. ಅಂಥದ್ದರಲ್ಲಿ ಈ ರೀತಿಯ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವುದು ತುಂಬ ಖುಷಿ ವಿಷಯ ಎಂದರು ಚಿತ್ರನಟಿ ನೀತು.[ಆರಡಿ ನೀತು ಹುಯ್ದ ಹನ್ನೆರಡಡಿ ಬೃಹತ್ ದೋಸೆ]
ಇದೇ ಸಂದರ್ಭದಲ್ಲಿ ಗಣೇಶ ಹಬ್ಬದಲ್ಲಿ ಮಣ್ಣಿನ ಗಣಪತಿಯನ್ನು ಪೂಜಿಸುವ ಕುರಿತು ಜನರಲ್ಲಿ ಅರಿವು ಮೂಡಿಸಲು ಮಾತಾಡ್ತಾನೆ ನೋಡಿ ನಮ್ಮ ಗಣೇಶ' ಎಂಬ ಬೀದಿ ನಾಟಕದ ಪ್ರದರ್ಶನ ನಡೆಯಿತು.
ಬಿಬಿಎಂಪಿ ಸದಸ್ಯರಾದ ಜಯಪ್ರಕಾಶ್, ಎಂ.ಎನ್.ಶ್ರೀಕಾಂತಗೌಡರು, ಪೂರ್ಣಿಮಾ ಶ್ರೀನಿವಾಸ್, ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ರಮಣಶ್ರೀ ಗೂಪ್ ಅಧ್ಯಕ್ಷ ಎಸ್.ಷಡಕ್ಷರಿ, ಕರ್ನಾಟಕ ಬ್ಯಾಂಕ್ ಉಪ ಮಹಾಪ್ರಬಂಧಕ ಗೋಕುಲದಾಸ ಪೈ, ಹೋಟೆಲ್ ಮಾಲೀಕ ಮಧುಸೂದನ್, ಮುಖ್ಯ ಕಟ್ಟಡ ವಿನ್ಯಾಸಗಾರ ಚಂದ್ರ ಆಚಾರ್ ಉಪಸ್ಥಿತರಿದ್ದರು.