ಅಂದ ಹಾಗೆ ಈ ಕಂಡಕ್ಟರ್ ಹೆಸರು ತಾಂಡಚಂದ್!
ಬೆಂಗಳೂರು, ಏ. 24 : ಪ್ರತಿನಿತ್ಯ ಬಿಎಂಟಿಸಿ ಬಸ್ಸಲ್ಲಿ ಅಡ್ಡಾಡುವವರಿಗೆ ಮಾತ್ರ ಗೊತ್ತಿರತ್ತೆ ಬವಣೆ ಏನೆಂದು. ಚಿಲ್ರೆ ಸರಿಯಾಗಿ ಕೊಟ್ರೆ ಸರಿ, ಇಲ್ಲದಿದ್ದರೆ ನಾಲಿಗೆಗೆ ಬೆರಳು ನೆಕ್ಕಿ ಟಿಕೆಟ್ ಹರಿದು, ಚೀಟಿ ಹಿಂದೆ ಬಾಲ್ ಪೆನ್ನಿಂದ ಗೀಚಿ ಆಮೇಲಿಸ್ಕೊಳ್ಳಿ ಅಂತಾರೆ. ಇಳಿಯುತ್ತಿದ್ದಾಗ ಮತ್ತೆ ಚಿಲ್ಲರೆಗಾಗಿ ಗುದ್ದಾಟ. ಚಿಲ್ಲರೆ ಇದ್ರೂ, ನೀವಿಬ್ರೂ ಹಂಚಿಕೊಳ್ಳಿ ಅಂತ ಹೇಳಿ ಟಾಟಾ ಅಂದುಬಿಡುವವರೇ ಹೆಚ್ಚು.
ಇದೊಂದು ರೀತಿಯ ಪ್ರತಿನಿತ್ಯದ ಕಥೆಯಾದರೆ, ಬರೆದುಕೊಟ್ಟ ದುಡ್ಡು ಇಸಿದುಕೊಳ್ಳುದು ಮರೆತು ಇಳಿದು ಪೇಚಾಡುವವರದು ಇನ್ನೊಂದು ಕಥೆ. ನಮ್ಮನ್ನೇ ನಾವು ಬೈದುಕೊಂಡು ಅಥವಾ ಚಿಲ್ರೆ ಇಸಿದುಕೊಳ್ಳಲು ಮರೆದ ಗಂಡನನ್ನು 'ಅಯ್ಯ ನಿಮ್ಮ ಮರೆವಿಗಿಷ್ಟು' ಅಂತ ಮಾತಿನಲ್ಲಿ ತಿವಿಯುವವರೇ ಜಾಸ್ತಿ. ಕಂಡಕ್ಟರ್ ಜೇಬಿಗೆ ಸೇರಿದ ದುಡ್ಡು ಮತ್ತೆ ವಾಪಸ್ ಬರುವುದು ಸಾಧ್ಯವಾ? ನೋ ಚಾನ್ಸ್!
ಆದರೆ, ಇಲ್ಲೊಂದು ವಿಶಿಷ್ಟವಾದ ಮತ್ತು ನಂಬಲು ತುಸು ಕಷ್ಟವಾದ ಕಥೆಯೊಂದಿಗೆ. ಇದು ಕಥೆಯಲ್ಲ ನಿಜವಾದ ಘಟನೆ. ಅದೇನಾಯಿತೆಂದರೆ... ಬಸ್ ಹತ್ತಿ, ಚೀಟಿ ಹಿಂದೆ ಬರೆಸಿಕೊಂಡು, ಚಿಲ್ರೆ ಇಸಿದುಕೊಳ್ಳಲು ಮರೆತು, ನಂತರ ಸತತ ಪ್ರಯತ್ನದಿಂದ ಕಷ್ಟಪಟ್ಟು ದುಡಿದ ದುಡ್ಡನ್ನು ಪ್ರಾಮಾಣಿಕ ನಿರ್ವಾಹಕನಿಂದ ಪಡೆದ ಕಥೆಯನ್ನು ಬಸುಕಿ ನಂದನ್ ಮಾತಲ್ಲೇ ಓದಿರಿ. [ಇಂಥ ರಾಜಕಾರಣಿಗಳನ್ನು ಪಡೆದ ನಾವೇ ಧನ್ಯರು!]
"ಯಾವುದೋ ಗುಂಗಿನಲ್ಲಿ ವೋಲ್ವೊ ಬಸ್ಸಿಂದ ಇಳಿದು ಎರಡು ಗಂಟೆಯಾದ ನಂತರ ನನಗೆ ಆಘಾತ ಕಾದಿತ್ತು. ಒಂದೆರಡಲ್ಲ ಬರೊಬ್ಬರಿ 420 ರು.ಗಳನ್ನು ಬಸ್ ಕಂಡಕ್ಟರ್ ನಿಂದ ಇಸಿದುಕೊಳ್ಳಲು ನಾನು ಮರೆತಿದ್ದೆ. ನನ್ನ ಮರುವಿಗೆ ಪೇಚಾಡಿಕೊಳ್ಳುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ."
"ಈ ಬಗ್ಗೆ ಕೆಲವರಿಗೆ ಹೇಳಿದಾಗ, ನಿರ್ವಾಹಕನಿಂದ ದುಡ್ಡು ವಾಪಸ್ ಪಡೆಯುವುದು ಸಾಧ್ಯವೇ ಇಲ್ಲ. ಅದು ಅವರ ಪ್ರಾಮಾಣಿಕತೆಯ ಮೇಲೆ ಅವಲಂಬಿತವಾಗಿರುತ್ತದೆ. ಬೆಂಗಳೂರಿನ ಕಂಡಕ್ಟರ್ ಗಳು ಹೇಗಿದ್ದಾರೆ ನಿನಗೆ ಗೊತ್ತೇ ಇದೆ. ಸೋ, ಫಾರ್ಗೆಟ್ ಇಟ್ ಅಂತ ಬುದ್ಧಿವಾದ ಹೇಳಿದವರೇ ಹೆಚ್ಚು."
"ಆದರೆ, ನಾನು ಆಸೆ ಬಿಡಲಿಲ್ಲ. 420 ರು. ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ. ಟಿಕೆಟ್ ಮೇಲಿರುವ ನಂಬರ್ ಆಧರಿಸಿ ಡೀಪೋಗೆ ಹೋಗಿ ಕೇಳಿದರೆ ಬಸ್ ನಂಬರ್ ಮತ್ತು ಕಂಡಕ್ಟರ್ ವಿವರ ಸಿಗಬಹುದೆಂದು, ಅದೃಷ್ಟ ಪರೀಕ್ಷೆ ಮಾಡೇಬಿಡೋಣ ಅಂತ ಅಂದುಕೊಂಡೆ."
"ಡೀಪೋಗೆ ಹೋದಾಗ, ಆ ಬಸ್ ತಮ್ಮ ಡೀಪೋದಲ್ಲ, ವಿಚಾರಣೆ ಸಂಖ್ಯೆಗೆ ಕರೆ ಮಾಡಿ ಪ್ರಯತ್ನಿಸಿ ಎಂಬ ಸಲಹೆ ಬಂತು. ನನ್ನ ಅದೃಷ್ಟಕ್ಕೆ ವಿಚಾರಣೆ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಬಸ್ ನಂಬರ್ ಮತ್ತು ಕಂಡಕ್ಟರ್ ಮೊಬೈಲ್ ಸಂಖ್ಯೆಯ ವಿವರ ದೊರೆಯಿತು. ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿಯ ಆಸರೆ ಸಿಕ್ಕಂತಾಗಿತ್ತು."
"ಆ ಮೊಬೈಲಿಗೆ ಕರೆ ಮಾಡಿ ಏನಾಗಿದೆಯೆಂದು ಇಂಗ್ಲಿಷಿನಲ್ಲಿ ವಿವರಿಸಿದಾಗ, 'ಸರ್, ನನಗೆ ಇಂಗ್ಲಿಷ್ ಬರುವುದಿಲ್ಲ, ಸಿಲ್ಕ್ ಬೋರ್ಡ್ ಜಂಕ್ಷನ್ನಿಗೆ ಮಧ್ಯಾಹ್ನ 2.30ಕ್ಕೆ ಬರುತ್ತೇನೆ, ಅಲ್ಲಿ ಸಿಗೋಣ' ಅಂತ ಉತ್ತರ ಬಂತು. ಬೇರೆ ನಿರ್ವಾಹಕನಾಗಿದ್ದರೆ ಯಾಮಾರಿಸಿ ಬಿಡುತ್ತಿದ್ದರೇನೋ. ಆದರೆ, ನನಗೇ ಅಚ್ಚರಿಯಾಗುವಂತೆ 1 ಗಂಟೆಗೆ ಆ ನಿರ್ವಾಹಕನಿಂದ ಮತ್ತೆ ಕರೆ ಬಂದಿತು."
"ಬಸ್ಸು ಹತ್ತಿ ಸೀಟು ಹಿಡಿದ ಮೇಲೆ ಕಂಡಕ್ಟರ್ ಯಾರನ್ನೋ ಹುಡುಕುತ್ತಿರುವಂತೆ ಅತ್ತಿತ್ತ ನೋಡುತ್ತಿದ್ದರೆ. ನಂತರ ನನ್ನ ನಂಬರಿಗೆ ತಾವೇ ಮತ್ತೆ ಕರೆ ಮಾಡಿದರು. ನಾನು, 'ಇಲ್ಲಿದ್ದೇನೆ' ಅಂತ ಕೈಬೀಸಿದ್ದೆ. ಅವರು ನನ್ನ ಟಿಕೆಟ್ ನಂಬರ್ ಚೆಕ್ ಮಾಡಿ, ನನಗೆ ನ್ಯಾಯಯುತವಾಗಿ ಸಿಗಬೇಕಾದ 420 ರು.ಗಳನ್ನು ನನ್ನ ಕೈಗಿತ್ತರು. ನನಗೆ ಮನಸ್ಸು ಮಾತ್ರವಲ್ಲ ಕಣ್ಣು ಕೂಡ ತುಂಬಿ ಬಂದಿತ್ತು."
ಎಲ್ಲರೂ 420 ಇರುವುದಿಲ್ಲ ಅಲ್ಲವೆ? ಅಂದ ಹಾಗೆ ಆ ಕಂಡಕ್ಟರ್ ಹೆಸರು ತಾಂಡಚಂದ್ (ಚಿತ್ರದಲ್ಲಿರುವವರು). ಕೆಲ ದಿನಗಳ ಹಿಂದೆ ಮಧುಸೂಧನ ಎಂಬ ಆಟೋ ಡ್ರೈವರ್ ಕೂಡ ಮರೆತುಹೋಗಿದ್ದ ಹೊಸ ಲ್ಯಾಪ್ಟಾನ್ನು ಸ್ವತಃ ತಾವೇ ಅದರ ಮಾಲಿಕರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದರು. ಇಂಥ ಕನ್ನಡ ಮಣ್ಣಿನ ನಿಜವಾದ ಮಕ್ಕಳಿಗೆ ಒಂದು ಸಲಾಂ. [ಕೃಪೆ : ಲಾಜಿಕಲ್ ಇಂಡಿಯನ್]