ಹೋಮಿಯೋಪಥಿ ವೈದ್ಯ ಡಾ.ಬಿ.ಟಿ.ರುದ್ರೇಶ್ ಗೆ ನಾಡೋಜ ಗೌರವ
ಹೋಮಿಯೋಪಥಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಾ.ಬಿ.ಟಿ.ರುದ್ರೇಶ್ ಅವರಿಗೆ ಪ್ರಸಕ್ತ ಸಾಲಿನ ನಾಡೋಜ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಬೆಂಗಳೂರು, ಏಪ್ರಿಲ್ 20: ಹೋಮಿಯೋಪಥಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಾ.ಬಿ.ಟಿ.ರುದ್ರೇಶ್ ಅವರಿಗೆ ಪ್ರಸಕ್ತ ಸಾಲಿನ ನಾಡೋಜ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ವೈದ್ಯಕೀಯ ಕ್ಷೇತ್ರದ ಜೊತೆ, ಕನ್ನಡ ನಾಡು-ನುಡಿಯ ಅಭಿವೃದ್ಧಿಗೂ ಡಾ.ಬಿ.ಟಿ.ರುದ್ರೇಶ್ ಶ್ರಮಿಸಿರುವ ಹಿನ್ನೆಲೆಯಲ್ಲಿ ಈ ಗೌರವ ನೀಡಲಾಗುತ್ತಿದೆ. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಮೂಲಕ ಸರ್ಕಾರ ನೀಡುವ ಈ ಪ್ರಶಸ್ತಿಯನ್ನು ಏಪ್ರಿಲ್ 21ರಂದು ಹಂಪಿ ವಿಶ್ವವಿದ್ಯಾಲಯದ ನವರಂಗ ಆವರಣದಲ್ಲಿ ಜರುಗುವ 25ನೇ ನುಡಿಹಬ್ಬದಲ್ಲಿ ಪ್ರದಾನ ಮಾಡಲಾಗುವುದು. [ನಿರಾಶಾ ಕೂಪದಲ್ಲಿರುವ ರೋಗಿಗಳಿಗೆ ಹೊಸ ಆಶಾಕಿರಣ]
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನಾಡೋಜ ಪ್ರಶಸ್ತಿಯನ್ನು ರುದ್ರೇಶ್ ಅವರಿಗೆ ಪ್ರದಾನ ಮಾಡಲಿದ್ದಾರೆ.
ಆರೋಗ್ಯ- ಆಯಸ್ಸು-100, ಹೋಮಿಯೋಪಥ, ವೈದ್ಯನ ಹತ್ತು ಮುಖಗಳು, ಬಡವರ ಬಾದಾಮಿ ಹೋಮಿಯೋಪಥಿ, ಬದುಕು - ಬೆಳಕು, ಬೆಳ್ಳಿ-ಬೆಳಕು ಇತ್ಯಾದಿ ಕನ್ನಡ ಪುಸ್ತಕಗಳ ಜೊತೆಗೆ The Healing Touch ಎಂಬ ಇಂಗ್ಲಿಶ್ ಪುಸ್ತಕವನ್ನೂ ಡಾ.ರುದ್ರೇಶ್ ಬರೆದಿದ್ದಾರೆ. ಇದರೊಂದಿಗೆ ವಿವಿಧ ಪ್ರತಿಷ್ಠಿತ ಪತ್ರಿಕೆಗಳಿಗೆ ನೂರಾರು ಲೇಖನಗಳನ್ನೂ ಬರೆದಿದ್ದಾರೆ.
ಸೆಂಟ್ರಲ್ ಕೌನ್ಸಿಲ್ ಫಾರ್ ಹೋಮಿಯೋಪಥಿಯ ಕಾರ್ಯನಿರ್ವಾಹಕ ಸದಸ್ಯರಾಗಿರುವ ಇವರ ವೈದ್ಯಕೀಯ ಸೇವೆಯನ್ನು, 1981 ರಿಂದ ಇಲ್ಲಿಯವರೆಗೆ ಸುಮಾರು 15 ಲಕ್ಷ ರೋಗಿಗಳು ಪಡೆದಿದ್ದಾರೆ.