ಯುವತಿಯ ಕೈಕಾಲು ಕಟ್ಟಿ ಮನೆ ಕೆಲಸದಾತ ಮಾಡಿದ್ದೇನು?
ಬೆಂಗಳೂರು, ಸೆ. 21 : ಮನೆಯಲ್ಲಿ ಯುವತಿಯೊಬ್ಬಳು ಒಂಟಿಯಾಗಿದ್ದ ವೇಳೆ ಅಡುಗೆ ಕೆಲಸದಾತ ತನ್ನ ಸಹಚರನೊಂದಿಗೆ ಆಕೆಯ ಕೈ ಕಾಲು ಕಟ್ಟಿ ಮನೆಯಲ್ಲಿದ್ದ ಹಣ, ಆಭರಣಗಳನ್ನು ದೋಚಿ ಪರಾರಿಯಾದ ಘಟನೆ ಜಯನಗರದಲ್ಲಿ ನಡೆದಿದೆ.
ಪವನ್ ಜೈನ್ ಮತ್ತವರ ಪತ್ನಿ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದಾರೆ. ಇದರಿಂದ ಅವರ ಪುತ್ರಿ 25 ವರ್ಷದ ದಂತ ವೈದ್ಯೆ ಪ್ರತಿಭಾ ಜೈನ್ ಮಾತ್ರ ಮನೆಯಲ್ಲಿದ್ದರು. ಈ ವೇಳೆ ದಿನೇಶ್ ಮತ್ತು ಆತನ ಸ್ನೇಹಿತ ಸೇರಿಕೊಂಡು ಇಬ್ಬರು ಈ ಕೃತ್ಯ ಎಸಗಿದ್ದಾರೆ. ದಿನೇಶ್ ಹಲವು ದಿನಗಳಿಂದ ಅಡುಗೆ ಕೆಲಸ ಮಾಡಿಕೊಂಡು ಪ್ರತಿಭಾ ಅವರ ಮನೆಯಲ್ಲಿಯೇ ವಾಸಿಸುತ್ತಿದ್ದ. [ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆಭರಣ ಅಂಗಡಿ ದರೋಡೆ]
ರಾತ್ರಿ 9.30ರ ವೇಳೆಗೆ ದಿನೇಶ್ ನನ್ನು ಕೇಳಿಕೊಂಡು ವ್ಯಕ್ತಿಯೊಬ್ಬ ಮನೆಗೆ ಬಂದಿದ್ದಾನೆ. ಬಳಿಕ ಇಬ್ಬರೂ ಸೇರಿ ಪ್ರತಿಭಾರಿಗೆ ಚಾಕು ತೋರಿಸಿ ಕೈ ಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ 2 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಬಾಯಿಗೆ ಹಾಕಿದ್ದ ಟೇಪನ್ನು ಕಷ್ಟಪಟ್ಟು ತೆಗೆದ ಪ್ರತಿಭಾ ಸಹಾಯಕ್ಕಾಗಿ ಕೂಗಿದ್ದಾರೆ. ಕೂಡಲೇ ಧಾವಿಸಿದ ಸ್ಥಳೀಯರು ಲಾಕ್ ಆಗಿದ್ದ ಬಾಗಿಲನ್ನು ಒಡೆದು ಅವರಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಡಾ. ಶರಣಪ್ಪ ಕಳ್ಳತನ ಪ್ರಕರಣ ಬಗ್ಗೆ ಕೆಲ ಸುಳಿವು ದೊರೆತಿವೆ ಆದಷ್ಟು ಬೇಗನೆ ಆರೋಪಿಗಳನ್ನು ಬಂಧಿಸುತ್ತೇವೆ ಎಂದಿದ್ದಾರೆ.