ಸಚಿವ ಡಿಕೆ ಶಿವಕುಮಾರ್ ಜನ್ಮದಿನ ಆಚರಣೆ ಬೇಡ ಅಂದಿದ್ಯಾಕೆ?
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಮೇ 15ರಂದು ಜನ್ಮ ದಿನ ಆಚರಿಸಿಕೊಳ್ಳದಿರಲು ಇಂಧನ ಸಚಿವ ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಅವರು ಅದ್ಧೂರಿ ಆಚರಣೆ ಬೇಡ ಎಂದು ತಿಳಿಸಿದ್ದಾರೆ
ಬೆಂಗಳೂರು, ಮೇ 12: ಇಂಧನ ಸಚಿವ ಈ ಬಾರಿ ತಮ್ಮ ಜನ್ಮದಿನವನ್ನು ಆಚರಿಸದಿರಲು ಅಥವಾ ಅದ್ಧೂರಿಯಾಗಿ ಆಚರಿಸದಿರಲು ನಿರ್ಧರಿಸಿದ್ದಾರೆ. ಮೇ 15ಕ್ಕೆ ಅವರ ಜನ್ಮದಿನ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಕೂಡ ಪ್ರಬಲವಾಗಿ ಕೇಳಿಬರುತ್ತಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ.
ಅಭಿಮಾನಿಗಳು ಹಾಗೂ ಅನುಯಾಯಿಗಳು ತುಂಬ ದೊಡ್ಡ ಮಟ್ಟದಲ್ಲಿ ಶಿವಕುಮಾರ್ ಜನ್ಮದಿನಾಚರಣೆಗಾಗಿ ಆಲೋಚನೆ ಮಾಡುತ್ತಿದ್ದ ಸಂದರ್ಭದಲ್ಲೇ ಅದ್ಧೂರಿ ಅಚರಣೆ ಮಾಡಲ್ಲ ಎಂದು ಸಚಿವರೇ ಹೇಳಿಕೆ ನೀಡಿದ್ದಾರೆ. ಇಡೀ ಕರ್ನಾಟಕ ಬರ ಪರಿಸ್ಥಿತಿ ಎದುರಿಸುವಾಗ ಇಂಥ ಸಂಭ್ರಮಾಚರಣೆ ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.[ಕೆಪಿಸಿಸಿ ಅಧ್ಯಕ್ಷರಾಗಲು ಡಿಕೆ ಶಿವಕುಮಾರ್ ಸೂಕ್ತ: ನಮ್ಮ ಓದುಗರು]
"ನನ್ನ ಸ್ನೇಹಿತರು, ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದೇನೆ. ಬ್ಯಾನರ್, ಪೋಸ್ಟರ್, ಕಟೌಟ್, ಮಾಧ್ಯಮಗಳಲ್ಲಿ ಜನ್ಮದಿನದ ಜಾಹೀರಾತುಗಳನ್ನು ನೀಡಬೇಡಿ" ಎಂದು ಶಿವಕುಮಾರ್ ಹೇಳಿದ್ದಾರೆ. ಆ ದಿನ ಬೆಂಗಳೂರಿನಲ್ಲಿ ಲಭ್ಯವಿರುವುದಿಲ್ಲ. ಆ ದಿನ ಪ್ರವಾದದಲ್ಲಿರುತ್ತೇನೆ ಎಂದಿದ್ದಾರೆ.
ಬಡವರಿಗೆ ನೆರವಾಗುವ ಕಾರ್ಯಕ್ರಮ ಕೈಗೊಳ್ಳಿ. ಬಡವರು ಹಾಗೂ ಬರದಿಂದ ತೊಂದರೆಗೊಳಗಾದವರಿಗೆ ಸಹಾಯ ಮಾಡಿ. ಆ ಮೂಲಕ ಅರ್ಥಪೂರ್ಣ ಆಚರಣೆಯಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.