ಸಂಕ್ರಾಂತಿ ಪ್ರಾಣಿ ಕಾಳಗ ಕಂಡರೆ ಸಹಾಯವಾಣಿಗೆ ಕರೆ ಮಾಡಿ
ಬೆಂಗಳೂರು, ಜ. 13: ಮಕರ ಸಂಕ್ರಾಂತಿ ನಿಮಿತ್ತ ರಾಜ್ಯದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳ ಕಾಳಗ ಏರ್ಪಡಿಸಲಾಗುತ್ತದೆ. ಆದರೆ, ಇಂತಹ ಸ್ಪರ್ಧೆಗಳು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಾಣಿ ಹಿಂಸೆ ಕಾಯ್ದೆಯ ಉಲ್ಲಂಘನೆಯಾಗಿದೆ. ಆದ್ದರಿಂದ ಅವುಗಳನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಮಾನವ ಸಂಘಟನೆಯು ರಾಷ್ಟ್ರಮಟ್ಟದಲ್ಲಿ ಸಹಾಯವಾಣಿಯನ್ನು ಆರಂಭಿಸಿದೆ.
ಹುಂಜಗಳು, ನಾಯಿಗಳು ಹಾಗೂ ದನಗಳ ಮಧ್ಯೆ ಏರ್ಪಡಿಸುವ ಕಾಳಗ ಮುಂತಾದವನ್ನು ತಡೆಗಟ್ಟಲು ಸಹಾಯವಾಣಿ (+91 7674922044) ಗೆ ಕರೆ ಮಾಡಬಹುದು. [ಪ್ರಾಣಿರಕ್ಷಕರ ಹದ್ದಿನ ಕಣ್ಣಿನ ನಡುವೆ ಕಂಬಳ ಓಟ]
"ಕರ್ನಾಟಕದ ಕರಾವಳಿ ಭಾಗ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಹುಂಜದ ಕಾಳಗ ಅತ್ಯಂತ ಸಾಮಾನ್ಯ ಸಂಗತಿ. ಈ ಸಂದರ್ಭದಲ್ಲಿ ಕೋಳಿಗಳ ಕಾಲಿಗೆ ಬ್ಲೇಡ್ ಲಗತ್ತಿಸಿರಲಾಗುತ್ತದೆ. ಅವು ಪರಸ್ಪರ ದಾಳಿ ನಡೆಸಿದಾಗ ತೀವ್ರ ಗಾಯವಾಗುತ್ತದೆ. ಇಂತಹ ಕೋಳಿಗಳ ಮೇಲೆ ವೀಕ್ಷಕರು ಹಣ ಹಾಕಿ ಜೂಜಾಡುತ್ತಾರೆ. ಚಿಕ್ಕ ಮಕ್ಕಳು ಇಂತಹ ಆಟ ನೋಡಿದಾಗ ಅವರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಕ್ಕಳು ಕ್ರೌರ್ಯ ರೂಢಿಸಿಕೊಂಡು ಮಾನವೀಯತೆ ಕಳೆದುಕೊಳ್ಳುತ್ತಾರೆ" ಎಂದು ಅಂತಾರಾಷ್ಟ್ರೀಯ ಮಾನವ ಸಂಘಟನೆ ನಿರ್ದೇಶಕ ಎನ್.ಜಿ. ಜಯಸಿಂಹ ತಿಳಿಸಿದ್ದಾರೆ. [ಪೆಟ್ಟಿಲ್ಲದ ಕಂಬಳಕ್ಕೆ ಕರಾವಳಿ ಸಜ್ಜು]
ಇಂತಹ ಕಾಳಗಗಳು ಕಂಡುಬಂದಲ್ಲಿ ಮೇಲೆ ಹೇಳಿದ ಸಹಾಯವಾಣಿಗೆ ತಿಳಿಸಬೇಕು. ನಂತರ ಪೊಲೀಸರಿಗೆ ತಿಳಿಸಿ ಕಾಳಗಗಳನ್ನು ಪ್ರತಿಬಂಧಿಸಲಾಗುವುದು ಎಂದು ಜಯಸಿಂಹ ತಿಳಿಸಿದ್ದಾರೆ. [ಕಂಬಳಕ್ಕೆ ಹೈ ಹಸಿರು ನಿಶಾನೆ]