ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಭಾರೀ ಮಳೆ-ಬಿರುಗಾಳಿ, ವಿದ್ಯುತ್ ಕಡಿತ
ಬೆಂಗಳೂರಿನ ವಿವಿಧೆಡೆ ಬುಧವಾರ ರಾತ್ರಿ ಭಾರೀ ಮಳೆಯಾಗಿ ಬಿರುಗಾಳಿ ಬೀಸಿದೆ. ಈ ಕಾರಣಕ್ಕೆ ಹಲವೆಡೆ ವಿದ್ಯುತ್ ಕಡಿತವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಕ್ಕೆ ಕೂಡ ಮಳೆ ಅಡ್ಡಿಯಾಯಿತು
ಬೆಂಗಳೂರು, ಮೇ 17: ಬೆಂಗಳೂರಿನ ವಿವಿಧೆಡೆ ಬುಧವಾರ ರಾತ್ರಿ ಭಾರೀ ಮಳೆಯಾಗಿದೆ. ಮಳೆಗೆ ಮರಗಳು ನೆಲಕ್ಕೆ ಉರುಳಿವೆ. ಹೆಬ್ಬಾಳ, ಕೆ. ಆರ್.ಪುರಂ, ಏರ್ ಪೋರ್ಟ್ ರಸ್ತೆ ಸೇರಿದ ಹಾಗೆ ಹಲವೆಡೆ ಸಕತ್ ಮಳೆಯಾಗಿದೆ. ಹೂಡೀಯಲ್ಲಿ ಹೈ ವೊಲ್ಟೇಜ್ ಟ್ರಾನ್ಸ್ ಫಾರ್ಮರ್ ಸಿಡಿದಿದೆ. ಇನ್ನು ಏರ್ ಪೋರ್ಟ್ ರಸ್ತೆಯಲ್ಲಿ ಮರ ಉರುಳಿ ಸಂಚಾರ ಅಸ್ತವ್ಯಸ್ತವಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲೇ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್ ಕಡಿತವಾಗಿದೆ. ನಾಗವಾರ, ಸದಾಶಿವನಗರ, ಹೆಬ್ಬಾಳ ಸೇರಿದಂತೆ ವಿವಿಧೆಡೆ ಬಿರುಗಾಳಿ ಭಾರೀ ಪ್ರಮಾಣದಲ್ಲಿ ಬೀಸಿದೆ. ವಾಹನ ಸವಾರರು ಪರದಾಡುವಂತಾಗಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವಂಥವರ ಪಾಡು ಹೇಳತೀರದಾಗಿದೆ.[ಮೇ 29ರಂದು ಕರ್ನಾಟಕಕ್ಕೆ ಮುಂಗಾರಿನ ಆಗಮನ]
ಮೈಸೂರು ರಸ್ತೆ, ವಿಮಾನ ನಿಲ್ದಾಣ ರಸ್ತೆ, ಬಾಣಸವಾಡಿ, ಸದಾಶಿವ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆ ವಾಹನ ಸಂಚಾರ ಸಮಸ್ಯೆಯಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಲ್ಲಲು ಹೆದರುವಂಥ ಸ್ಠಿತಿ ಏರ್ಪಟ್ಟಿದೆ. ಅದರಲ್ಲೂ ನಾಗವಾರ, ಹೆಬ್ಬಾಳ ಹಾಗೂ ಕೆಆರ್ ಪುರಂ ಕಡೆ ಗಾಳಿ-ಮಳೆ ಮತ್ತೂ ಹೆಚ್ಚಾಗಿದೆ. ವಾಹನ ಸವಾರರೇ ಎಚ್ಚರ, ವಿದ್ಯುತ್ ಸಂಪರ್ಕ ಕಡೀತವಾಗಿದೆ, ಭಾರೀ ಬಿರುಗಾಳಿ ಬೀಸುತ್ತಿದೆ.