ಗರ್ಭಿಣಿ, ಮಕ್ಕಳ ರಕ್ಷಣೆಗಾಗಿ 'ವಾತ್ಸಲ್ಯವಾಣಿ-104'
ಬೆಂಗಳೂರು, ಸೆಪ್ಟೆಂಬರ್, 22 : ಗರ್ಭಿಣಿ ಹಾಗೂ ಮಗುವಿನ ಆರೋಗ್ಯದ ಮೇಲೆ ಕಾಳಜಿ ವಹಿಸುವ ಸಲುವಾಗಿ 'ವಾತ್ಸಲ್ಯವಾಣಿ 104' ಎಂಬ ಸಹಾಯವಾಣಿಯನ್ನು ಆರೋಗ್ಯ ಸಚಿವ ಯುಟಿ ಖಾದರ್ ಸೋಮವಾರ ಜಾರಿಗೆ ತಂದಿದ್ದು, ಇದು ದೇಶದ ಮೊದಲ ಸಹಾಯವಾಣಿ ಎಂಬ ಖ್ಯಾತಿ ಪಡೆದುಕೊಂಡಿದೆ.
ರಾಜ್ಯದಲ್ಲಿ ತಾಯಿ ಹಾಗೂ ಶಿಶು ಮರಣ ದರವು ದಿನೇ ದಿನೇ ಹೆಚ್ಚುತ್ತಿದೆ. ತಾಯಿ ಮರಣದರವು 1 ಲಕ್ಷಕ್ಕೆ 133 ಆಗಿದ್ದರೆ, ಶಿಶು ಮರಣ ದರವು ಪ್ರತಿ ಒಂದು ಸಾವಿರಕ್ಕೆ 31 ಆಗಿದೆ. ತಾಯಿ ಹಾಗೂ ಮಗುವಿನ ಮರಣದರವನ್ನು ತಗ್ಗಿಸುವುದರ ಕುರಿತಾಗಿ ಚಿಂತನೆ ನಡೆಸಿದ ಆರೋಗ್ಯ ಇಲಾಖೆ ಈ ಸಹಾಯವಾಣಿಯನ್ನು ಆರಂಭಿಸಿದೆ.[ಹಿರಿಯರ ನೆರವಿಗೆ ಬೆಂಗಳೂರು ಪೊಲೀಸರ ಸಹಾಯವಾಣಿ]
ಗರ್ಭಿಣಿಯರಿಗೆ ಪ್ರಸವ ಪೂರ್ವ, ಪ್ರಸವಾ ನಂತರ ಆರೈಕೆ, ಮಗುವಿನ ಪೋಷಣೆ, ಲಸಿಕೆಗಳು ಇನ್ನಿತರ ಮಾಹಿತಿಯನ್ನು ಎಸ್ ಎಂ ಎಸ್ ಮೂಲಕ ತಿಳಿಸಲಾಗುತ್ತದೆ. ಪ್ರಸವದ ದಿನ ಹತ್ತಿರ ಬಂದಾಗ ಗರ್ಭಿಣಿಯರಿಗೆ ಆಂಬುಲೆನ್ಸ್ ಸೇವೆ ನೀಡಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಬಳಿಕ ತಾಯಿ ಮತ್ತು ಮಗುವಿಗೆ ಪೂರ್ಣ ಪ್ರಮಾಣದ ಆರೋಗ್ಯ ಸೇವೆ ನೀಡುವುದೇ ಈ ಸಹಾಯವಾಣಿಯ ಪ್ರಮುಖ ಉದ್ದೇಶವಾಗಿದೆ ಎಂದು ಯು ಟಿ ಖಾದರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಆರೋಗ್ಯ ಕ್ರಾಂತಿ ಆರಂಭವಾಗಬೇಕು. ಅದಕ್ಕಾಗಿ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮುಖ್ಯಮಂತ್ರಿ ಸಾಂತ್ವನ ಯೋಜನೆ, 50%ರಷ್ಟು ದರದಲ್ಲಿ ಗುಣಮಟ್ಟದ ಔಷಧ ಒದಗಿಸುವ ಜನೌಷಧ ಮಾರಾಟ ಮಳಿಗೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದರು.
ಈ ಸಂದರ್ಭದಲ್ಲಿ ವೈದ್ಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ವಿಧಾನ ಪರಿಷತ್ ಸದಸ್ಯೆ ಡಾ. ಜಯಮಾಲಾ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು.