ತಾನು ಸತ್ತು ಐವರ ಜೀವ ಉಳಿಸಿದ ಪುಣ್ಯಾತ್ಮ
ಬೆಂಗಳೂರು, ಮಾರ್ಚ್ 10: ಬೆಂಗಳೂರಿನ ಗ್ರನೈಟ್ ವ್ಯಾಪಾರಿಯೊಬ್ಬರು ತಾವು ಸತ್ತು ಐದು ಜನರನ್ನು ಬದುಕಿಸಿದ್ದಾರೆ! ಆ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ಮಾರ್ಚ್ 2 ರಂದು ಬೆಂಗಳೂರಿನ ವಿಲ್ಸನ್ ಗಾರ್ಡನ್ ನ ಅಶೋಕಾ ಪಿಲ್ಲರ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗ್ರನೈಟ್ ವ್ಯಾಪಾರಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೂಲತಃ ರಾಜಸ್ಥಾನದವರಾದ ಇವರು ಪತ್ನಿ, ಇಬ್ಬರು ಮಕ್ಕಳ ಜೊತೆ ಬೆಂಗಳೂರಿನಲ್ಲೇ ನೆಲೆಸಿದ್ದರು.
ಅಪಘಾತ ಸಂಭವಿಸಿದ 6 ದಿನದ ನಂತರ ಮಣಿಪಾಲ ಆಸ್ಪತ್ರೆಯ ವೈದ್ಯರು ವ್ಯಕ್ತಿಯ ಬ್ರೇನ್ ಡೆಡ್ ಆಗಿದೆ ಎಂದು ಘೋಷಿಸಿದ್ದರು. ತಕ್ಷಣವೇ ವ್ಯಕ್ತಿಯ ಕುಟುಂಬ ಅವರ ದೇಹದ ಕೆಲವು ಅಂಗಗಳನ್ನು ದಾನಮಾಡಲು ಮುಂದಾಯಿತು. ಅವರ ಹೃದಯವನ್ನು ಹೊತ್ತ ಅಂಬುಲೆನ್ಸ್ ಗ್ರೀನ್ ಕಾರಿಡಾರ್ ಮೂಲಕ 25 ಕಿ.ಮೀ.ದೂರವನ್ನು ಕೇವಲ 19 ನಿಮಿಷದಲ್ಲಿ ತಲುಪಿತು. ನಾರಾಯಣ ಹೃದಯಾಲಯದಲ್ಲಿ ಹೃದಯ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಈ ಹೃದಯವನ್ನು ಕಸಿ ಮಾಡಲಾಯಿತು.
ಕಿಡ್ನಿ ಮತ್ತು ಇನ್ನಿತರ ಉಪಯುಕ್ತ ಅಂಗಗಳನ್ನೂ ದಾನ ಮಾಡಿ ಕನಿಷ್ಠ ಐದು ಜನರಿಗೆ ಹೊಸ ಬದುಕು ನೀಡಲಾಯಿತು.