ರೋಗಗ್ರಸ್ತ ಮೈಸೂರು ರಸ್ತೆಗೆ ಬ್ಯಾಟರಾಯನಪುರ ಪೊಲೀಸರೇ ಡಾಕ್ಟರ್ಸ್!
ಬೆಂಗಳೂರು, ಮೇ 20 : ಇಂಥ ರಸ್ತೆಯನ್ನು ಪೊಲೀಸರು ಎಷ್ಟು ದಿನ ಅಂತ ನೋಡ್ತಾರೆ? ಹದಗೆಟ್ಟುಹೋಗಿರುವ ರಸ್ತೆಯನ್ನು ಸರಿ ಮಾಡಲು ಸ್ಥಳೀಯ ಕಾರ್ಪೊರೇಟರಾಗಲಿ, ಕ್ಷೇತ್ರದ ಶಾಸಕನಾಗಲಿ ಬರುವುದಿಲ್ಲ ಎಂದು ತಿಳಿದಿದ್ದೇ ಸ್ವತಃ ಸಂಚಾರಿ ಪೊಲೀಸರೇ ಗಂಡಾಂತರಕ್ಕೆ ತೆರೆದುಕೊಂಡಿರುವ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ.
ಇದು ನಾಯಂಡಹಳ್ಳಿಯಿಂದ ರಾಜರಾಜೇಶ್ವರಿ ದ್ವಾರದ ನಡುವಿರುವ ರಸ್ತೆಯ ದಾರುಣ ಕಥೆ. ರಸ್ತೆ ಎಷ್ಟು ಹಡಾಲೆದ್ದು ಹೋಗಿದೆಯೆಂದರೆ, ದಿನನಿತ್ಯ ಅಡ್ಡಾಡುವ ಸಂಚಾರಿಗಳಿರಲಿ, ಪ್ರತಿದಿನ ಸಂಚಾರವನ್ನು ನಿಯಂತ್ರಿಸುತ್ತಿರುವ ಪೊಲೀಸರೇ ಬೇಸತ್ತು ಹೋಗಿದ್ದಾರೆ. ಅನಾಹುತವಾಗುವ ಮೊದಲು ನಾವೇ ಸರಿ ಮಾಡುವುದೊಳಿತು ಎಂದು ಅವರೇ ರಿಪೇರಿಗೆ ನಿಂತಿದ್ದಾರೆ.
ಹ್ಯಾಟ್ಸಾಫ್ ಟು ಬ್ಯಾಟರಾಯನಪುರ ಠಾಣೆಯ ಪೊಲೀಸರಿಗೆ. ಮಿನಿ ಲಾರಿಯಲ್ಲಿ ಮಣ್ಣನ್ನು ತಂದು ಬೃಹದಾಕಾರವಾಗಿ ತೆರೆದುಕೊಂಡಿರುವ ತೆಗ್ಗು, ಗುಂಡಿಗಳನ್ನು ಕೈಯಾರೆ ಮಾಚ್ಚಿದ್ದಾರೆ. ಇನ್ನಾದರೂ ಕಾರ್ಪೊರೇಟರ್ ಎಚ್ಎಸ್ ರಾಜೇಶ್ವರಿಯಾಗಲಿ, ಗೋವಿಂದರಾಜನಗರದ ಶಾಸಕ ಪ್ರಿಯ ಕೃಷ್ಣ ಎಚ್ಚೆತ್ತುಕೊಳ್ಳದಿದ್ದರೆ ಮತಹಾಕಿದ ಮತದಾರರೇ ಎಚ್ಚರಿಸಬೇಕಾಗುತ್ತದೆ. [ಮೃತ್ಯುರೂಪಿ ನಾಯಂಡಹಳ್ಳಿ ಜಂಕ್ಷನ್ ಹೀಗಿದೆ ನೋಡಿ]
ಮೈಸೂರು ರಸ್ತೆಯ ಕಥೆ ಇಲ್ಲಿಗೇ ನಿಲ್ಲುವುದಿಲ್ಲ. ಒಂದು ಸಣ್ಣ ಮಳೆಯಾದರೂ ಸಾಕು ರಾಜರಾಜೇಶ್ವರಿ ನಗರ ದ್ವಾರ ಮತ್ತು ಜ್ಞಾನಭಾರತಿ ದ್ವಾರದ ನಡುವಿನ ರಸ್ತೆ ಸ್ವಿಮ್ಮಿಂಗ್ ಪೂಲಾಗುತ್ತದೆ. ಅಕ್ಕಪಕ್ಕದ ಚರಂಡಿಗಳು ಮಣ್ಣಿನಿಂದ ತುಂಬಿಕೊಂಡಿವೆ. ನೀರು ಚರಂಡಿಗೆ ಸರಾಗವಾಗಿ ಹರಿಯದ ಕಾರಣ ರಸ್ತೆ ತುಂಬೆಲ್ಲ ನೀರೋ ನೀರು.
ಹಾಗೆಯೇ, ರಾಜರಾಜೇಶ್ವರಿ ನಗರ ದ್ವಾರದಿಂದ ನಾಯಂಡಹಳ್ಳಿ ಬಳಿ ಚಲಿಸುತ್ತ ಎಡಬದಿಗೆ ಸ್ವಲ್ಪ ಕಣ್ಣು ಹಾಯಿಸಿ. ಟಿವಿಎಸ್ ಶೋರೂಂ ಎದುರುಗಡೆ ಆಪೋಶನ ತೆಗೆದುಕೊಳ್ಳಲು ಚರಂಡಿಗಳು ತೆರೆದುಕೊಂಡಿವೆ. ಅತ್ತ ರಿಪೇರಿಯೂ ಇಲ್ಲ, ಇತ್ತ ಮುಚ್ಚಿಯೂ ಇಲ್ಲ. ಭರ್ಜರಿ ಮಳೆ ಸುರಿದು ಮುಚ್ಚಿಕೊಂಡರೆ ಅನಾಹುತ ಕಟ್ಟಿಟ್ಟಬುತ್ತಿ. [ಅಕ್ಷರಶಃ ಕೆಸರುಗದ್ದೆಯಾಗಿರುವ ನಾಯಂಡಹಳ್ಳಿ ಜಂಕ್ಷನ್]
ನಮ್ಮ ಮೆಟ್ರೋ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿದೆ. ರಸ್ತೆ ಅಗಲೀಕರಣಕ್ಕಾಗಿ ಅಕ್ಕಪಕ್ಕದ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಆದರೆ, ಚರಂಡಿಗಳನ್ನು ಇನ್ನೂ ಹಾಗೆಯೇ ಬಿಡಲಾಗಿದೆ (ಚಿತ್ರಗಳನ್ನು ನೋಡಿ). ದಿನನಿತ್ಯ ಅಡ್ಡಾಡುವ ಜನರು ಸರ್ಕಸ್ ಮಾಡುತ್ತಲೇ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ಮಳೆಗಾಲ ಇನ್ನೂ ಆರಂಭವಾಗಿಲ್ಲ. ಶುರುವಾಗುವುದರೊಳಗೆ ಎಲ್ಲ ಚರಂಡಿಗಳು ಹೂಳಿನಿಂದ ಮುಕ್ತವಾಗಿರಬೇಕು, ದುರಸ್ತಿಯಾಗಿರಬೇಕು ಎಂದು ಮುಖ್ಯಮಂತ್ರಿ ಫರ್ಮಾನು ಹೊರಡಿಸಿದ್ದರೂ ಕಿವಿಗೆ ಹಾಕಿಕೊಳ್ಳುವವರು ಯಾರು? ಕನಿಷ್ಠಪಕ್ಷ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರದ ನಿವಾಸಿಗಳು ದನಿ ಎತ್ತಬೇಕು. ಇಲ್ಲದಿದ್ದರೆ, ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಪರೋಕ್ಷವಾಗಿ ಪ್ರಜೆಗಳೂ ಕಾರಣರಾಗುತ್ತಾರೆ, ಎಚ್ಚರ!
ದುರಂತಕ್ಕೆ ಆಹ್ವಾನ ನೀಡುತ್ತಿರುವ ತೆರೆದ ಗುಂಡಿ
ನೀರು ಹೋಗಲು ಆಸ್ಪದವೇ ಇಲ್ಲದಂತೆ ತುಂಬಿವೆ ಚರಂಡಿಗಳು
ಯಮಲೋಕಕ್ಕೆ ಅಟ್ಟಲು ಕಾದುನಿಂತಿರುವ ಚರಂಡಿ
ಪಾದಚಾರಿ ರಸ್ತೆ ತುಂಬ ತುಂಬಿರುವ ಮಣ್ಣು ಕಸದ ರಾಶಿ