ಊರಿಗೆ ಊರೇ ಕಣ್ಣು ದಾನ ಮಾಡಲು ಹರೀಶನೇ ಸ್ಫೂರ್ತಿ
ಬೆಂಗಳೂರು,ಮಾರ್ಚ್,02: ಯಾವ ಕ್ಷಣ, ಯಾವ ಸಂದರ್ಭ ಯಾವ ವ್ಯಕ್ತಿಯ ಬಾಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಖಂಡಿತವಾಗಿಯೂ ಊಹಿಸಲು ಸಾಧ್ಯವಿಲ್ಲ. ಈ ಮಾತಿಗೆ ಸಾಕ್ಷಿಯಾಗಿದ್ದು ಇತ್ತೀಚೆಗಷ್ಟೇ ನೆಲಮಂಗಲ ಬಳಿ ನಡೆದ ರಸ್ತೆ ಅಪಘಾತದಲ್ಲಿ ದೇಹ ಎರಡು ತುಂಡಾಗಿದ್ದರೂ ತನ್ನ ಕಣ್ಣುಗಳನ್ನು ದಾನ ಮಾಡುವಂತೆ ಹೇಳಿ ಸಾವನ್ನಪ್ಪಿದ ವ್ಯಕ್ತಿಯ ಪರೋಪಕಾರ ಧರ್ಮ.
ಹೌದು ಈ ಮಾತನ್ನು ಹೇಳಿ ಸಾವನ್ನಪ್ಪಿದ ವ್ಯಕ್ತಿಯೇ ಎನ್. ಹರೀಶ್. ಈತನ ಊರು ತುಮಕೂರಿನ ಗುಬ್ಬಿ ತಾಲೂಕಿನ ಕರೆಗೋಡನಹಳ್ಳಿ. ಇವನ ಕೊನೆಕ್ಷಣದ ನಿರ್ಧಾರ ಇನ್ನೊಬ್ಬರ ಬಾಳಿಗೆ ಬೆಳಕಾಗಿದೆ ಎಂಬುದನ್ನು ತಿಳಿದ ಊರಿನ 170 ಜನರು ತಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಸಾರ್ಥಕತೆ ಮೆರೆದಿದ್ದಾರೆ.[ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]
'ಹರೀಶ್ ಅವರ 11ನೇ ದಿನದ ಕಾರ್ಯದ ದಿನ ಅವರ ಹೆಸರಿನಲ್ಲಿ ಅನ್ನದಾನ ಹಮ್ಮಿಕೊಳ್ಳಲಾಗಿತ್ತು. ಆ ದಿನ ಊರಿಗೆ ಬರಬೇಕೆಂದು ಊರಿನ ಜನತೆ ನನಗೆ ಆಹ್ವಾನ ನೀಡಿತ್ತು. ಇವರ ಆಹ್ವಾನಕ್ಕೆ ಮಣಿದ ನಾನು ಹರೀಶ್ ಅವರ 11ನೇ ದಿನದ ಕಾರ್ಯಕ್ಕೆ ಹೋದೆ. ನನಗೆ ಅಲ್ಲೊಂದು ಅಚ್ಚರಿ ಕಾದಿತ್ತು. ಈ ಊರಿನ 170 ಮಂದಿ ಕಣ್ಣುದಾನ ಮಾಡಲು ಮುಂದಾಗಿರುವುದು ಕೇಳಿ ನಾನು ದಿಗ್ಭ್ರಮೆಗೊಂಡೆ' ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗ್ ಶೆಟ್ಟಿ ಅಲ್ಲಿನ ಆ ಕ್ಷಣಗಳನ್ನು ತೆರೆದಿಟ್ಟಿದ್ದಾರೆ.
'ಈ ನಿರ್ಣಯದಲ್ಲಿ ಕೇವಲ ಯುವಕರು ಮಾತ್ರವಲ್ಲ 82 ವರ್ಷ ವೃದ್ಧರೂ ಸೇರಿರುವುದು ಆಶ್ಚರ್ಯಕರ. ಈ ಊರಿನಲ್ಲಿ ಸುಮಾರು 300 ಜನರಿದ್ದಾರೆ. ಅದರಲ್ಲಿ ಹರೀಶ್ ಅವರ ತಾಯಿ, ಸಂಬಂಧಿಕರು ಸೇರಿದಂತೆ ಒಟ್ಟು 170 ಮಂದಿ ಕಣ್ಣನ್ನು ದಾನ ಮಾಡಲು ಸಂಪೂರ್ಣ ಸಮ್ಮತಿ ಸೂಚಿಸಿ ಹೆಸರನ್ನು ನೊಂದಾವಣೆ ಮಾಡಿದ್ದಾರೆ' ಎಂದು ನಾರಾಯಣ ನೇತ್ರಾಲಯದ ಕಣ್ಣಿನ ಬ್ಯಾಂಕ್ ಮುಖ್ಯಸ್ಥರಾದ ಡಾ. ರಾಜ್ ಕುಮಾರ್ ಹೇಳಿದರು.[ಮೃತ ಹರೀಶ್ ಕುಟುಂಬಕ್ಕೆ ಜಮೀರ್ ಹಣ ಸಹಾಯ]
ಹರೀಶ್ ಸಾವನ್ನಪ್ಪಿದ್ದು ಹೇಗೆ? ಯಾವಾಗ?
ಎನ್.ಹರೀಶ್ ಅವರು ಫೆ.17ರಂದು ತುಮಕೂರಿನಿಂದ ಬೆಂಗಳೂರಿಗೆ ವಾಪಸ್ ಬರುವಾಗ ತಿಪ್ಪಗೊಂಡನಹಳ್ಳಿ ಬಳಿ ಅವರ ಬೈಕ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆ ಮೇಲೆ ಬಿದ್ದರು. ಆಗ ಬಂದ ಟ್ರಕ್ ಅವರ ಹೊಟ್ಟೆ ಮೇಲೆ ಹತ್ತಿದ ಪರಿಣಾಮ ದೇಹ ಎರಡು ತುಂಡಾಗಿದೆ. ಅವರು ಜನರ ಸಹಾಯಕ್ಕಾಗಿ ಬಿದ್ದಲ್ಲಿಯೇ 20 ನಿಮಿಷ ಗೋಗರೆದಿದ್ದಾರೆ.[ಸಾವಿನ ಬಳಿಕ ಮತ್ತೊಂದು ಜೀವಕ್ಕೆ ಚೇತನ ತುಂಬಿದ ಚೇತನ್]
ಬಳಿಕ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರನ್ನು ನೋಡಿದ ಸ್ಥಳೀಯರು ಆಂಬ್ಯುಲೆನ್ಸ್ ಗೆ ಫೋನ್ ಮಾಡಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವಾಗಲೇ ಹರೀಶ್ ಮೃತಪಟ್ಟಿದ್ದಾರೆ. ಆದರೆ, ಸಾಯುವ ಮೊದಲು ನನ್ನ ಅಂಗಾಗಗಳನ್ನು ದಾನ ಮಾಡಿ ಎಂದು ಹೇಳಿದ್ದರು.