ಬೆಂಗಳೂರಲ್ಲಿ 5 ದರೋಡೆಕೋರರ ಬಂಧನ, 12 ಪ್ರಕರಣಗಳು ಪತ್ತೆ
ನಗರದಲ್ಲಿ ದರೋಡೆ ಮಾಡುತ್ತಿದ್ದ 5 ಜನರನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.ಈ ಆರೋಪಿಗಳ ಮಾಹಿತಿ ಮೇರೆಗೆ ನಗರದ ವಿವಿಧ ಕಡೆಗಳಲ್ಲಿ ದರೋಡೆ ಮಾಡುತ್ತಿದ್ದ ಒಟ್ಟು 12 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬೆಂಗಳೂರು, ನವೆಂಬರ್. 03 : ರಾತ್ರಿ ವೇಳೆ ಓಡಾಡುವ ಒಬ್ಬಂಟಿಗರನ್ನು ಗುರಿಯಾಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದರೋಡೆ ಮಾಡುತಿದ್ದ ಕುಖ್ಯಾತ 5 ಜನ ಆರೋಪಿಗಳ ತಂಡವೊಂದನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಈ ಐವರ ಆರೋಪಿಗಳ ಸ್ವ-ಇಚ್ಚಾ ಹೇಳಿಕೆ ಮೇರೆಗೆ ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ .ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ. ಚಾಮರಾಜಪೇಟೆ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಮಹಾಂತ ರೆಡ್ಡಿ ಅವರ ನೇತೃತ್ವದಲ್ಲಿ ಹನುಮಂತನಗರ, ಜೆ.ಪಿ ನಗರ, ಆಡುಗೋಡಿ, ಆರ್.ಆರ್ ನಗರ, ಬಸವನಗುಡಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿಂದತೆ ಒಟ್ಟು 12 ಪ್ರಕರಣಗಳನ್ನು ಪತ್ತೆ ಮಾಡಿ ಹಲವರನ್ನು ಬಂಧಿಸಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಸುಮಾರು 8,00,000 ರೂ ಬೆಲೆ ಬಾಳುವ 62 ಮೊಬೈಲ್ ಗಳು, 1 ಲ್ಯಾಪ್ ಟಾಪ್ , 80 ಗ್ರಾಂ 80 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಒಟ್ಟು 4 ಬೈಕ್ ಗಳು, ಒಂದು ಚಾಕು, 2 ಮಚ್ಚು, ಒಂದು ಕಬ್ಬಿಣದ ರಾಡ್ ನ್ನು ವಶಪಡಿಸಿಕೊಂಡಿದ್ದಾರೆ.
ನಗರದ ವಿವಿಧ ಕಡೆಗಳಲ್ಲಿ ರಾತ್ರಿ ಸಮಯದಲ್ಲಿ ಓಡಾಡುವರನ್ನು ಗುರಿಯಾಸಿಕೊಂಡು ಮಾರಕಾಸ್ತ್ರಗಳಿಂದ ಅವರ ಮೇಲೆ ಹಲ್ಲೆ ಅವರ ಬಳಿ ಇದ್ದ ವಸ್ತುಗಳನ್ನು ದೋಚುವುದೇ ಆರೋಪಿಗಳು ಕಾಯಕ ಮಾಡಿಕೊಂಡಿದ್ದರು. ಇತರ ಆರೋಪಿಗಳ ಹೇಳಿಕೆಯಿಂದ ಬೇರೆ-ಬೇರೆ ಜಾಲಗಳನ್ನು ಪೊಲೀಸರು ಪತ್ತೆ ಹಚ್ಚಿ ಯಶಸ್ವಿಯಾಗಿದ್ದಾರೆ.