ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವರಾಜ ರಾಜಗುರು ಸ್ಮರಣಾರ್ಥ ಗುರುವಂದನಾಕ್ಕೆ ಬನ್ನಿ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 06: ಸಂಗೀತಾಸಕ್ತ 'ಗೆಳೆಯರ ಬಳಗ'ವು ವಿಖ್ಯಾತ ಹಿಂದುಸ್ಥಾನಿ ಗಾಯಕ, ಪದ್ಮಭೂಷಣ ದಿವಂಗತ ಪಂಡಿತ್. ಬಸವರಾಜ ರಾಜಗುರು ಅವರ ಸ್ಮರಣಾರ್ಥ ಪ್ರತಿ ವರ್ಷದಂತೆ ಈ ವರ್ಷವೂ ಗುರುವಂದನಾ' ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.

ಮಲ್ಲೇಶ್ವರದ ಸೇವವಾಸದನದಲ್ಲಿ ಸಂಜೆ 5ಕ್ಕೆ ನಡೆಯುವ ಐದನೇ ವರ್ಷದ ಈ ಕಾರ್ಯಕ್ರಮದಲ್ಲಿ ಖ್ಯಾತ ಹಿಂದುಸ್ಥಾನಿ ಗಾಯಕಿ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ (ಗಾಯನ), ಸತೀಶ್ ಭಟ್ ಮಾಳಕೊಪ್ಪ (ಗಾಯನ) ಹಾಗೂ ಸುಮಾ ಹೆಗಡೆ ಹಿತ್ಲಳ್ಳಿ (ಸಂತೂರ್ ವಾದನ)

ಈ ಕಲಾವಿದರಿಗೆ ಸಹವಾದನದಲ್ಲಿ ಪಂ. ಉದಯರಾಜ್ ಕರ್ಪೂರ್, ಗುರುಮೂರ್ತಿ ವೈದ್ಯ, ಶೌರಿ ಶಾನಭೋಗ್ (ತಬಲಾ), ಸತೀಶ್ ಕೊಳ್ಳಿ, ಸೂರ್ಯ ಉಪಾಧ್ಯ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ. ಪ್ರವೇಶ ಉಚಿತ.

Pt Basavaraj Rajaguru

ಹೆಚ್ಚಿನ ವಿವರಗಳಿಗೆ ಸಂಪರ್ಕ: 80953-04253
ಸ್ಥಳ: ಸೇವಾಸದನ, 14ನೇ ಕ್ರಾಸ್, ಮಲ್ಲೇಶ್ವರ.
ಸಮಯ: ಶುಕ್ರವಾರ ಸಂಜೆ 05.00 (08 ಏಪ್ರಿಲ್ 2016)

ಕಲಾವಿದರ ಪರಿಚಯ

* ಪೂರ್ಣಿಮಾ ಭಟ್ ಕುಲಕರ್ಣಿ
ಪಂ. ಬಸವರಾಜ ರಾಜಗುರು ಪರಂಪರೆಯ ಪ್ರತಿಭಾವಂತ ಗಾಯಕಿ ಹಾಗೂ ಮಾಧುರ್ಯದ ಗಾಯನಶೈಲಿಯ ಹಿರಿಯ ಕಲಾವಿದೆ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ . ಶ್ರೀಮತಿ ಉಷಾ ದಾತಾರ್ ಅವರಲ್ಲಿ ಸಂಗೀತದ ಪ್ರಾರಂಭಿಕ ಶಿಕ್ಷಣವನ್ನು ಪ್ರಾರಂಭಿಸಿದ ಪೂರ್ಣಿಮಾ ಭಟ್ ನಂತರ ಪಂ. ಬಸವರಾಜ ರಾಜಗುರು ಅವರಲ್ಲಿ ಖ್ಯಾಲ್, ಠುಮ್ರಿ, ತರಾನಾ ವಚನ, ನಾಟ್ಯಗೀತ್‍ಗಳ ವಿಶೇಷ ಶಿಕ್ಷಣವನ್ನು ಪಡೆದರು.

ನಂತರದ ದಿನಗಳಲ್ಲಿ ಪಂ. ವಸಂತ ಕನಕಾಪುರ, ಶ್ರೀಮತಿ ಕುಸುಮಾ ಶಿಂಧೆ, ಶ್ರೀಮತಿ ಉಷಾ ಚಿಪಲ್ ಕಟ್ಟಿ ಪುಣೆ, ಪಂ. ಮುರಳಿ ಮನೋಹರ್ ಶುಕ್ಲಾ ಅವರಲ್ಲಿಯೂ ಅಭ್ಯಾಸ ನಡೆಸಿದರು. ಬಿಎ ಮತ್ತು ಎಂಎ ಪದವಿಯಲ್ಲಿ ಚಿನ್ನದ ಪದಕ ಗಳಿಸಿರುವ ಪೂರ್ಣಿಮಾ ಭಟ್ ಆಕಾಶವಾಣಿಯ ಎ' ಶ್ರೇಣಿ ಕಲಾವಿದೆ.

ಹರಿವಲ್ಲಭ ಸಂಗೀತ ಮಹೋತ್ಸವ, ಸವಾಯಿ ಗಂಧರ್ವ ಸಂಗೀತ ಮಹೋತ್ಸವ, ಎನ್‍ಸಿಪಿಎ ಸಂಗೀತ ಕಾರ್ಯಕ್ರಮ, ಆಕಾಶವಾಣಿ ಸಂಗೀತ ಸಮ್ಮೇಳನ ಸೇರಿದಂತೆ ದೇಶವಿದೇಶಗಳಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಇವರು ಆಕಾಶವಾಣಿ, ದೂರದರ್ಶನದಲ್ಲಿ ಹಾಗೂ ಇನ್ನಿತರ ಟಿವಿ ವಾಹಿನಿಗಳಲ್ಲೂ ಕಛೇರಿಗಳನ್ನು ನೀಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ಧಾರೆಯೆರೆಯುತ್ತಿರುವ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

* ಸುಮಾ ಹೆಗಡೆ ಹಿತ್ಲಳ್ಳಿ
ಸಂತೂರ್ ವಾದನದ ಕರ್ನಾಟಕದ ಯುವ ಪ್ರತಿಭೆ ಸುಮಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹಿತ್ಲಳ್ಳಿಯವರು. ಕೃಷಿಕರಾದ ಇವರ ತಂದೆ ಜಿ. ಜಿ. ಹೆಗಡೆ ತಬಲಾ ವಾದಕರು ಹಾಗೂ ಹವ್ಯಾಸಿಯಾಗಿ ಸಂತೂರ್ ವಾದ್ಯವನ್ನು ತಯಾರಿಸುವವರು. ಸುಮಾ ಹೆಗಡೆ ಸಂತೂರ್‍ನ ಪ್ರಾರಂಭಿಕ ಅಭ್ಯಾಸವನ್ನು ತಂದೆಯವರ ಬಳಿಯೇ ಆರಂಭಿಸಿದರು.

ಜಗತ್ಪ್ರಸಿದ್ಧ ಸಂತೂರ್ ವಾದಕ ಪಂ. ಶಿವಕುಮಾರ್ ಶರ್ಮ ಅವರ ಆಣತಿಯಂತೆ ಅವರದೇ ಶಿಷ್ಯ ಪಂ. ಧನಂಜಯ್ ದೈತಣಕರ್ ಬಳಿ ಕಳೆದ ಆರೇಳು ವರ್ಷಗಳಿಂದ ಸಂತೂರ್ ಕಲಿಕೆಯನ್ನು ಮುಂದುವರಿಸಿದ್ದಾರೆ. ದೇಶದ ಹಲವಾರು ಕಡೆ ಸಂತೂರ್ ನುಡಿಸಿರುವ ಇವರು ಸಂತೂರ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವುಳ್ಳ ನಮ್ಮ ನಾಡಿನ ಪ್ರತಿಭೆ ಎಂಬುದು ಹೆಮ್ಮೆಯ ಸಂಗತಿ.

* ಸತೀಶ್ ಭಟ್ ಮಾಳಕೊಪ್ಪ
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಮಾಳಕೊಪ್ಪದವರು ಸತೀಶ್ ಭಟ್. ಇವರು ಬಸವರಾಜ ರಾಜಗುರು ಪರಂಪರೆಯ ಮತ್ತೊಂದು ಕುಡಿ. ಪಂ. ಗಣಪತಿ ಭಟ್ ಹಾಸಣಗಿ ಅವರ ಬಳಿ ಗುರುಕುಲ ಪದ್ಧತಿಯ ಸಂಗೀತ ಶಿಕ್ಷಣವನ್ನು ಪಡೆದವರು ಸತೀಶ್ ಭಟ್. ಭರವಸೆಯ ಗಾಯಕರಲ್ಲಿ ಒಬ್ಬರಾದ ಇವರು ಆಕಾಶವಾಣಿಯ ಎ' ಶ್ರೇಣಿ ಕಲಾವಿದ. ತಮ್ಮ ಪ್ರತಿಭೆಗಾಗಿ ಹಲವಾರು ವಿದ್ಯಾರ್ಥಿವೇತನ, ಪುರಸ್ಕಾರಗಳನ್ನು ಪಡೆದ ಸತೀಶ್ ಪ್ರಸ್ತುತ ಕುಂದಾಪುರದ ಖಾಸಗಿ ಶಾಲೆಯೊಂದರಲ್ಲಿ ಸಂಗೀತ ಅಧ್ಯಾಪಕರಾಗಿದ್ದಾರೆ.

ಬಸವರಾಜ ರಾಜಗುರು ಅವರ ಸ್ಮರಣಾರ್ಥ ಕಾರ್ಯಕ್ರಮ

ಬಸವರಾಜ ರಾಜಗುರು ಅವರ ಸ್ಮರಣಾರ್ಥ ಕಾರ್ಯಕ್ರಮ

ಬಸವರಾಜ ರಾಜಗುರು ಅವರ ಸ್ಮರಣಾರ್ಥ ಕಾರ್ಯಕ್ರಮ

ಬಸವರಾಜ ರಾಜಗುರು ಅವರ ಸ್ಮರಣಾರ್ಥ ಕಾರ್ಯಕ್ರಮ

ಬಸವರಾಜ ರಾಜಗುರು ಅವರ ಸ್ಮರಣಾರ್ಥ ಕಾರ್ಯಕ್ರಮ

* ಸಹಕಲಾವಿದರ ಪರಿಚಯ
- ಉದಯರಾಜ್ ಕರ್ಪೂರ್
ಕರ್ನಾಟಕದ ಪ್ರಮುಖ ತಬಲಾವಾದಕರಲ್ಲಿ ಒಬ್ಬರು ಉದಯರಾಜ್ ಕರ್ಪೂರ್. ತಬಲಾದ ಪ್ರಾರಂಭಿಕ ಶಿಕ್ಷಣವನ್ನು ಪಂ. ಶೇಷಗಿರಿ ಹಾನಗಲ್ ಅವರಲ್ಲಿ ಪಡೆದ ಉದಯರಾಜ್ ನಂತರ ಪಂ. ರವೀಂದ್ರ ಯಾವಗಲ್ ಅವರಲ್ಲಿ ಹಲವಾರು ವರ್ಷಗಳ ತಬಲಾ ಅಭ್ಯಾಸ ಮಾಡಿದರು. ಪಂ. ಕೆ. ಜಿ. ಗಿಂಡೆ, ಪಂ. ರಾಜೀವ ತಾರಾನಾಥ, ಪಂ. ಶಿವಕುಮಾರ್ ಶರ್ಮ, ಪಂ. ಗಣಪತಿ ಭಟ್ ಹಾಸಣಗಿ, ಪಂ. ಎಂ. ವೆಂಕಟೇಶ್‍ಕುಮಾರ್ ಹೀಗೆ ಅಂತಾರಾಷ್ಟ್ರೀಯ ಖ್ಯಾತಿಯ ಹಲವಾರು ಕಲಾವಿದರಿಗೆ ಇವರು ಸಾಥ್ ನೀಡಿದ್ದಾರೆ.

ದೇಶವಿದೇಶಗಳ ಹಲವಾರು ಸಂಗೀತಕಛೇರಿಗಳಲ್ಲಿ ಭಾಗವಹಿಸಿರುವ ಇವರಿಗೆ ಹಲವಾರು ಪ್ರಶಸ್ತಿಪುರಸ್ಕಾರಗಳು ದೊರೆತಿವೆ. ತಬಲಾ ಸೋಲೋದಲ್ಲಿನ ಇವರ ಪರಿಣತಿ ಗಮನಾರ್ಹವಾದುದು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಹಲವಾರು ವಿದ್ಯಾರ್ಥಿಗಳಿಗೆ ತಬಲಾ ಶಿಕ್ಷಣ ನೀಡುತ್ತಿದ್ದಾರೆ.

- ಗುರುಮೂರ್ತಿ ವೈದ್ಯ
ಗುರುಮೂರ್ತಿ ವೈದ್ಯ ಅವರ ಹೆಸರು ತಬಲಾ ಕ್ಷೇತ್ರದಲ್ಲಿ ಚಿರಪರಿಚಿತವಾದದ್ದು. ಜಿ. ಜಿ. ಹೆಗಡೆ ಹಿತ್ಲಳ್ಳಿ , ಪಂ. ಬಸವರಾಜ ಬೆಂಡೆಗೇರಿ ಅವರ ಬಳಿ ತಬಲಾ ಶಿಕ್ಷಣ ಪಡೆದ ಗುರುಮೂರ್ತಿ ಪಂ. ರವೀಂದ್ರ ಯಾವಗಲ್ ಅವರ ಬಳಿ ತಬಲಾ ಶಿಕ್ಷಣವನ್ನು ಮುಂದುವರಿಸಿದ್ದಾರೆ. ತಬಲಾದ ಜೊತೆಗೆ ಚಂಡೆ, ಮೃದಂಗ ವಾದನಗಳನ್ನೂ ಇವರು ಬಲ್ಲವರು.

ವಿದುಷಿ ಪ್ರಭಾ ಅತ್ರೆ, ಪಂ. ಉಲ್ಲಾಸ್ ಕಶಾಲ್ಕರ್, ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ, ಪಂ. ವಿನಾಯಕ್ ತೊರವಿ, ಪಂ. ಅಜಯ್ ಪೋಹಣರ್ ಹೀಗೆ ಅನೇಕ ಸುಪ್ರಸಿದ್ಧ ಕಲಾವಿದರಿಗೆ ಸಾಥ್ ನೀಡಿರುವ ಇವರು ದೇಶವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅನೇಕ ಸಬಲಾ ಸೋಲೋ ಕಛೇರಿಗಳನ್ನೂ ನೀಡಿದ್ದಾರೆ. ಆಕಾಶವಾಣಿಯ ಕಲಾವಿದರಾದ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

- ಶೌರಿ ಶಾನಭೋಗ್
ಶೌರಿ ಶಾನುಭೋಗ್ ಶಿವಮೊಗ್ಗ ಜಿಲ್ಲೆಯ ಸಾಗರದವರು. ಪಂ. ಮಡಿವಾಳಪ್ಪ ಸಾಲಿ ಅವರ ಬಳಿ ತಬಲಾದ ಪ್ರಾರಂಭಿಕ ಶಿಕ್ಷಣ ಶೌರಿ ಪ್ರಸ್ತುತ ಉದಯರಾಜ್ ಕರ್ಪೂರ್ ಅವರ ಬಳಿ ತಬಲಾ ಅಭ್ಯಾಸ ಮುಂದುವರಿಸಿದ್ದಾರೆ. ಸಂಗೀತವನ್ನೇ ವೃತ್ತಿಯನ್ನಾಗಿಸಿಕೊಂಡ ಇವರು ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ತಬಲಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

- ಸತೀಶ್ ಕೊಳ್ಳಿ
ಧಾರವಾಡದವರಾದ ಸತೀಶ್ ಕೊಳ್ಳಿ ಹಾರ್ಮೋನಿಯಂ ಕ್ಷೇತ್ರದ ದಿಗ್ಗಜ ಪಂ. ವಸಂತ ಕನಕಾಪುರರ ಬಳಿ ಇವರು ಹಾರ್ಮೋನಿಯಂ ಶಿಕ್ಷಣ ಪಡೆದವರು. ಮುಂದೆ ಸಂಗೀತವನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಹಾರ್ಮೋನಿಯಂ ಕಲಿಕೆ ಮುಂದುವರಿಸಿದರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ದೇಶದ ಹಲವಾರು ಕಡೆ ಹಾರ್ಮೋನೀಯಂ ಸೋಲೋ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪಂ. ಮಾಧವ ಗುಡಿ, ಪಂ. ಗಣಪತಿ ಭಟ್ ಹಾಸಣಗಿ, ಪಂ. ಎಂ. ವೆಂಕಟೇಶ್‍ಕುಮಾರ್, ಪಂ. ಕೈವಲ್ಯಕುಮಾರ್ ಗುರವ ಮುಂತಾದ ಶ್ರೇಷ್ಠ ಕಲಾವಿದರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದಾರೆ.

- ಸೂರ್ಯ ಉಪಾಧ್ಯ
ಕರ್ನಾಟಕದ ಯುವ ಹಾರ್ಮೋನಿಯಂ ವಾದಕರಲ್ಲೊಬ್ಬರು ಸೂರ್ಯ ಉಪಾಧ್ಯ. ಮೂಲತಃ ಕರ್ನಾಟಕ ಸಂಗೀತದಿಂದ ಪ್ರೇರಿತರಾದ ಇವರು ಹಾರ್ಮೋನಿಯಂ ವಾದನದೆಡೆ ವಿಶೇಷವಾಗಿ ಆಕರ್ಷಿತರಾದರು. ಅನಂತ ಭಾಗ್ವತ್ ಅವರಲ್ಲಿ ಸಂಗೀತಶಿಕ್ಷಣ ಪ್ರಾರಂಭಿಸಿದ ಸೂರ್ಯ, ನಂತರ ಪಂ. ರವೀಂದ್ರ ಕಾಟೋಟಿಯವರ ಬಳಿ ಹಾರ್ಮೋನಿಯಂ ಶಿಕ್ಷಣ ಮುಂದುವರಿಸಿದರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಹಲವಾರು ಹಿರಿಯ ಕಿರಿಯ ಕಲಾವಿದರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದಾರೆ.

* ಗೆಳೆಯರ ಬಳಗ
ಗೆಳೆಯರ ಬಳಗ'ವು ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ ಕಳೆದ ನಾಲ್ಕು ವರ್ಷಗಳಲ್ಲಿ; ವಿಖ್ಯಾತ ಗಾಯಕರಾದ ಪಂ. ಗಣಪತಿ ಭಟ್ ಹಾಸಣಗಿ, ಪಂ. ಎಂ. ಪಿ. ಹೆಗಡೆ ಪಡಿಗೇರಿ, ಪಂ. ಪರಮೇಶ್ವರ ಹೆಗಡೆ, ಪಂ. ಶ್ರೀಪಾದ ಹೆಗಡೆ ಕಂಪ್ಲಿ, ನಾಗರಾಜ್ ಶಿರನಾಲಾ ಅವರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಜೊತೆಗೆ ಉದಯೋನ್ಮುಖ ಗಾಯಕರಾದ ವಿಶಾಲ್ ಕಂಪ್ಲಿ, ರಘುನಂದನ್ ಬ್ರಹ್ಮಾವರ, ಡಾ. ಹರೀಶ್ ಹಳವಳ್ಳಿ ಅವರೂ ಈ ಕಾರ್ಯಕ್ರಮಗಳಲ್ಲಿ ಗಾಯನವನ್ನು ಪ್ರಸ್ತುತಪಡಿಸಿದ್ದರು.

ಗುಣಮಟ್ಟದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು, ಪ್ರತಿಭಾವಂತ ಹಿರಿಕಿರಿಯ ಕಲಾವಿದರಿಗೆ ವೇದಿಕೆಯನ್ನು ಒದಗಿಸಿ ಒಳ್ಳೆಯ ಸಂಗೀತ ವಾತಾವರಣವನ್ನು ನಿರ್ಮಾಣ ಮಾಡುವುದು ಈ ಬಳಗದ ಮೂಲ ಉದ್ದೇಶ.

English summary
Guru Vandana a Musical tribute to Padmabhushan Pt. Basavaraj Rajaguru by Geleyara Balaga on Friday April 08, 2016 at Seva Sadan, Malleswaram, Bangalore. Pt. Basavaraj Rajguru (1917-1991) a prominent Indian Classical musician, Composer and Vocalist in Kirana Gharana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X