ಬೆಂಗಳೂರು ರೆಸಾರ್ಟಿನಿಂದ ಗುಜರಾತಿಗೆ ಎಂಎಲ್ಎಗಳ ಪಯಣ
ಬೆಂಗಳೂರು, ಆಗಸ್ಟ್ 05 : ಕುದುರೆ ವ್ಯಾಪಾರ ತಪ್ಪಿಸಿಕೊಳ್ಳಲೆಂದು ಬೆಂಗಳೂರಿನ ಬಳಿಯ ಈಗಲ್ಟನ್ ಗೋಲ್ಫ್ ರೆಸಾರ್ಟಿಗೆ ಬಂದಿದ್ದ 44 ಗುಜರಾತ್ ಕಾಂಗ್ರೆಸ್ ಶಾಸಕರು, ಹೆಂಡಂದಿರು ಮತ್ತು ಮಕ್ಕಳು ಬೆಂಗಳೂರಿಗೆ ಗುಡ್ ಬೈ ಹೇಳಿ ಗುಜರಾತ್ ನತ್ತ ಶನಿವಾರ ಪಯಣ ಬೆಳೆಸಲಿದ್ದಾರೆ.
ಪಂಚನಾಮೆ ಬಂದ ನಂತರ ದಾಳಿಯ ವಿವರ ನೀಡುವೆ: ಡಿಕೆಶಿ ಮಾತು
ಬಂದೇನೋಬಂದ್ರು ಆದರೆ ಇಂಥದೊಂದು ಸನ್ನಿವೇಶವನ್ನು ತಾವು ಎದುರಿಸುತ್ತೇವೆಂದು ಅವರು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಅವರಿಗೆ ಆತಿಥ್ಯ ಕೊಟ್ಟಿದ್ದ ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲೆ ಸತತ ನಾಲ್ಕು ದಿನಗಳ ಕಾಲ ಆದಾಯ ತೆರಿಗೆ ಇಲಾಖೆಯ ದಾಳಿಯಾಗುವುದನ್ನು ಅವರು ಸಾಕ್ಷಾತ್ ನೋಡಬೇಕಾಯಿತು.
ಇಲ್ಲಿ ಮೋಜುಮಜಾ ಮಾಡಲು ಬಂದಿದ್ದ ಶಾಸಕರು ಅನ್ಯಮನಸ್ಕರಾಗಿ ತವರಿಗೆ ತೆರಳಬೇಕಾಗಿ ಬಂದಿದೆ. ಗುಜರಾತ್ ನಲ್ಲಿ ಆಗಸ್ಟ್ 8ರಂದು ರಾಜ್ಯಸಭೆಗೆ ಚುನಾವಣೆ ನಡೆಯುತ್ತಿರುವುದರಿಂದ, ಬಿಜೆಪಿಯಿಂದ ಆಗಬಹುದಾಗ 'ಆಪರೇಷನ್ ಕಮಲ' ತಪ್ಪಿಸಿಕೊಳ್ಳಲೆಂದು ಅವರೆಲ್ಲ ಇಲ್ಲಿಗೆ ಬಂದಿದ್ದರು. ಆಗಸ್ಟ್ 8ರಂದು ಇಲ್ಲಿಯೇ ಇರಲಿದ್ದಾರೆ ಎಂದು ಕೂಡ ಹೇಳಲಾಗಿತ್ತು.
ಡಿ.ಕೆ.ಶಿವಕುಮಾರ್ ಮನೆಯಲ್ಲಿ ಐಟಿ ಪರಿಶೀಲನೆ ಅಂತ್ಯ
ಕಾಂಗ್ರೆಸ್ ಪಕ್ಷದ ಪರವಾಗಿ ಅಹ್ಮದ್ ಪಟೇಲ್ ಚುನಾವಣೆಗೆ ಸ್ಪರ್ಧಿಸುತ್ತಿದ್ದರೆ, ಬಿಜೆಪಿ ಪರವಾಗಿ ಕಾಂಗ್ರೆಸ್ ನಿಂದ ಸಿಡಿದುಹೋಗಿರುವ ಬಲ್ವಂತ್ ಸಿಂಗ್ ರಜಪೂತ್ ಅವರು ಸ್ಪರ್ಧಿಸಿದ್ದಾರೆ. ಗೆಲ್ಲಲು ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಕೊಂಡುಕೊಳ್ಳಬಹುದು ಎಂಬ ನಿರೀಕ್ಷೆಯಿಂದ ಅವರೆಲ್ಲ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು.
ಈಗಲ್ಟನ್ ರೆಸಾರ್ಟಿನಲ್ಲಿ ಡಿಕೆ ಶಿವಕುಮಾರ್ ಅವರು ಬೀಡು ಬಿಟ್ಟಿದ್ದಂಥ ಸಮಯದಲ್ಲಿಯೇ ಗೋಲ್ಫ್ ಆಡುವವರಂತೆ ಬಂದ ಐಟಿ ಅಧಿಕಾರಿಗಳು ಡಿಕೆಶಿ ಇದ್ದ ಕೋಣೆಯ ಶೋಧನೆ ಮಾಡಿದ್ದರಲ್ಲದೆ, ಗುಜರಾತ್ ಶಾಸಕರು ಇದ್ದು ರೂಂಗಳಲ್ಲಿ ಕೂಡ ಹುಡುಕಾಟ ನಡೆಸಿದ್ದರು. ಆದರೆ, ದಾಳಿ ಮಾಡಿದ್ದು ಡಿಕೆಶಿ ಮೇಲೆಯೇ ಹೊರತು ಗುಜರಾತ್ ಶಾಸಕರ ಮೇಲಲ್ಲ ಎಂದು ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.
ಈ ಚುನಾವಣೆಯಲ್ಲಿ ನೋಟಾ ಜಾರಿಗೆ ತಂದಿರುವುದರಿಂದ, ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ಏಳೆಂಟು ಶಾಸಕರು ತಮ್ಮ ವಿರುದ್ಧವೇ ಮತ ಹಾಕಬಹುದು ಎಂಬ ಹೆದರಿಕೆಯೂ ಅಹ್ಮದ್ ಪಟೇಲ್ ಅವರಿಗಿದೆ. ಕಳೆದೆರಡು ದಶಕಗಳಿಂದ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಈ ಸ್ಥಾನಕ್ಕೆ ಈಬಾರಿ ಚುನಾವಣೆ ಎದುರಾಗಿದೆ.