ಬೆಳೆಹಾನಿ: ಹೆಕ್ಟೇರಿಗೆ ರು.6.350 ಪರಿಹಾರ, ಕಾಗೋಡು
ಬೆಂಗಳೂರು, ಜನವರಿ 10: ಭೀಕರ ಬರಗಾಲದಿಂದಾಗಿ ಕಂಗಾಲಾಗಿರುವ ರೈತರ ಬೆಳೆಹಾನಿ ಪರಿಹಾರದ ರೂಪದಲ್ಲಿ ನೀಡಲಾಗುವ ಇನ್ ಪುಟ್ ಸಬ್ಸಿಡಿಯನ್ನು ಪ್ರಸಕ್ತ ಸಾಲಿನಲ್ಲಿ ಹೆಕ್ಟೇರಿಗೆ ರು 6,350 ನಂತೆ ಕೊಡಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಅವರು, 10ಲಕ್ಷದ ವರೆಗೆ ರೈತರ ಸರ್ವೆ ನಂಬರ್ ನೋಂದಣಿಯಾಗಿದೆ. ಇನ್ನು ಆಗಬೇಕಿದೆ. ನೋಂದಣಿಯಾದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಹೆಕ್ಕೇರಿಗೆ ರು 6,350 ಇನ್ ಪುಟ್ ಸಬ್ಸಿಡಿಯನ್ನು ನೀಡಲು ಉದ್ದೇಶಿಸಲಾಗಿದೆ. ಇದರ ಬಗ್ಗೆ ಸಂಪುಟ ಸಭೆಯನ್ನು ಇಂದು(ಮಂಗಳವಾರ) ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.[ರಾಜ್ಯಕ್ಕೆ ಹೊಸ 33 ತಾಲೂಕುಗಳ ಸೇರ್ಪಡೆ: ಕಾಗೋಡು ತಿಮ್ಮಪ್ಪ]
ರೈತರಿಗೆ ಬರಪರಿಹಾರಕ್ಕಾಗಿ ನಾವು ಕೇಂದ್ರಕ್ಕೆ ಕೇಳಿದ್ದು 4,800 ಕೋಟಿ ಅವರು ಕೊಟ್ಟಿದ್ದು ರು 1,782 ಕೋಟಿ ಆದರೆ ಬೆಳೆ ನಷ್ಟಕ್ಕೆ ಪರಿಹಾರ ನೀಡಲು 3 ಸಾವಿರಕೋಟಿಯ ಅವಶ್ಯಕತೆಯಿದೆ. ಹೀಗಾಗಿ ಮತ್ತೆ ಕೇಂದ್ರಕ್ಕೆ ಮನವಿ ಮಾಡಿ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಕಂದಾಯ ಜಮೀನನ್ನು ಫಾರಂ 50-53ರ ನಮೂನೆಯಡಿ ಅಕ್ರಮ-ಸಕ್ರಮಗೊಳಿಸುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಬಗರ್ ಹುಕುಂಗೆ ಸ್ಥಳೀಯ ಶಾಸಕರೇ ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದರು.