ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಒಂದು ಲಕ್ಷದವರೆಗೆ ಪ್ರೋತ್ಸಾಹಧನ
ಬೆಂಗಳೂರು, ಜೂನ್ 9: 2016-17 ನೇ ಸಾಲಿನ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹ ಧನ ಮಂಜೂರು ಮಾಡಲಾಗುತ್ತಿದೆ.
ಏಪ್ರಿಲ್ 2017ರಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಶೇ 60 ರಿಂದ 74.99 ಹಾಗೂ ಶೇ 75 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಶೇ 60 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ತಲಾ 7000 ರುಪಾಯಿ, ಶೇ 75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ತಲಾ 15000 ರುಪಾಯಿ ನೀಡಲಾಗುವುದು.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಹೆಚ್ಚಿನ ವಿವರಗಳಿಗಾಗಿ ನಿರ್ದೇಶಕರು, (ಪರೀಕ್ಷೆಗಳು) ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶ್ವರಂ, ಬೆಂಗಳೂರು- ಇವರ ಕಚೇರಿಯನ್ನು ಸಂಪರ್ಕಿಸಬಹುದು.[ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಿದ್ದರಾಮಯ್ಯ]
ದ್ವಿತೀಯ ಪಿಯುಸಿ, ಅಂತಿಮ ವರ್ಷ, ಸ್ನಾತಕೋತ್ತರ ವಿಷಯವಾದ ಎಂ.ಎ., ಎಂ.ಎಸ್ಸಿ, ಎಂ.ಕಾಂ, ಎಂಬಿಎ, ಎಂಸಿಎ, ಎಂಎಫ್ ಎ ಇತರೆ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಕ್ರಮವಾಗಿ ತಲಾ 20,000, 25,000, 30,000 ಹಾಗೂ 35,000 ರುಪಾಯಿ ನೀಡಲಾಗುವುದು.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಸಂಬಂಧಪಟ್ಟ ಜಿಲ್ಲೆಯ ಜಂಟಿ ಅಥವಾ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ವಿಶ್ವವಿದ್ಯಾಲಯ ಮಟ್ಟದಲ್ಲಿ ಸ್ನಾತಕೋತ್ತರ ಪದವಿಯಲ್ಲಿ 1 ರಿಂದ 5ನೇ ಸ್ಥಾನ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ (ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ) ಪ್ರೋತ್ಸಾಹ ಧನ ತಲಾ 50,000, ಸಿ.ಎ. (ಇನ್ಸ್ ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಟೆಂಟ್ಸ್ ಆಫ್ ಇಂಡಿಯಾ ಕೋರ್ಸ್) ತಲಾ 50,000, ಐಸಿಡಬ್ಲ್ಯೂಎ (ಇನ್ಸ್ ಟಿಟ್ಯೂಟ್ ಆಫ್ ವರ್ಕ್ಸ್ ಅಕೌಂಟ್ಸ್ ಕೋರ್ಸ್) ಕೋಲ್ಕತ್ತ ತಲಾ 50,000 ಹಾಗೂ ಕಂಪನಿ ಸೆಕ್ರಟರಿ (ಇನ್ಸ್ ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರಿ) ಕೋರ್ಸ್ ತಲಾ 50,000.[ಬೇರೆ ಜಾತಿಯವರಿಗೆ ವಿಷ ಭಾಗ್ಯ ಕರುಣಿಸಿ: ಫೇಸ್ ಬುಕ್ ನಲ್ಲಿ ಸಿಎಂಗೆ ಮನವಿ]
ಅದೇ ರೀತಿ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿ ವಿದ್ಯಾರ್ಥಿಗೆ ತಲಾ 1,00,000 ರುಪಾಯಿ ನೀಡಲಾಗುವುದು.
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್ ಸಿ ಮುಂತಾದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರೂ 1 ಲಕ್ಷ ಮೊತ್ತದ ಒಂದು ಅವಧಿಯ ಧನ ಸಹಾಯ. ಗರಿಷ್ಠ 1 ಲಕ್ಷ ಅಥವಾ ವಾಸ್ತವಿಕ ಫೀಸ್ ಮತ್ತು ಬೋರ್ಡಿಂಗ್ ವೆಚ್ಚ ಇತ್ಯಾದಿ ಮೊತ್ತದಲ್ಲಿ ಯಾವುದು ಕಡಿಮೆಯೋ ಅದನ್ನು ಕೋರ್ಸು ಅವಧಿಯಲ್ಲಿ ಎರಡು ಕಂತುಗಳಲ್ಲಿ ನೀಡಲಾಗುತ್ತದೆ.[ಜನಸಂಖ್ಯೆಗನುಗುಣವಾಗಿ ಶೇ.70 ರ ಮೀಸಲಾತಿಗೆ ಬದ್ಧ: ಸಿಎಂ]
ಹೆಚ್ಚಿನ ಮಾಹಿತಿಗಾಗಿ ಆಯುಕ್ತರ ಕಾರ್ಯಾಲಯ, ಸಮಾಜ ಕಲ್ಯಾಣ ಇಲಾಖೆ, ಬಹುಮಹಡಿ ಕಟ್ಟಡ, ಕೇಂದ್ರ, ಕಚೇರಿ, ಬೆಂಗಳೂರು ಅಥವಾ ಇಲಾಖಾ ವೆಬ್ ಸೈಟ್ ಭೇಟಿ ನೀಡಬಹುದು.