ಡಾಕ್ಟರ್ಸ್ ಗೆ ಟಾನಿಕ್ ನೀಡಿದ ಸಿದ್ದರಾಮಯ್ಯ
ಬೆಂಗಳೂರು, ಜು, 02 : ರಾಜ್ಯ ಸರ್ಕಾರವು ವೈದ್ಯರ ವೇತನದಲ್ಲಿ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದೆ. ಮೂರು ವರ್ಷಗಳಿಂದ ವೇತನ ಹೆಚ್ಚಳ ಕುರಿತಾಗಿ ವೈದ್ಯರು ಹಾಗೂ ಸರ್ಕಾರದ ನಡುವೆ ಇದ್ದ ಹಗ್ಗ ಜಗ್ಗಾಟಕ್ಕೆ ಬುಧವಾರ ತೆರೆಬಿದ್ದಿದೆ.
ಆರೋಗ್ಯ ಸಚಿವ ಯು.ಟಿ ಖಾದರ್ ವೈದ್ಯರ ವೇತನ ಹೆಚ್ಚಳ ಬೇಡಿಕೆಯ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದ್ದರು. 'ಡಾಕ್ಟರ್ಸ್ ಡೇ'(ಜು.1) ದಿನವೇ ಇವರ ಬೇಡಿಕೆಗೆ ಸಿದ್ದರಾಮಯ್ಯನವರಿಂದ ಅನುಮೋದನೆ ದೊರೆತಿರುವುದು ಸರ್ಕಾರಿ ವೈದ್ಯರ ಸಂತಸಕ್ಕೆ ಕಾರಣವಾಗಿದೆ. [ಮಗ/ಮಗಳು ವೈದ್ಯರಾಗಬೇಕಾ? ಹಂ... ವಿಚಾರ ಮಾಡಿ!]
ಜನರಲ್ ಡ್ಯೂಟಿ ವೈದ್ಯಕೀಯ ಅಧಿಕಾರಿಗಳ ವೇತನ 54,000 ರೂ ದಿಂದ 60,000ಕ್ಕೆ ಹೆಚ್ಚಳಗೊಂಡಿದೆ. ಸ್ಪೆಶಲಿಸ್ಟ್ ವೈದ್ಯರ ಸಂಬಳವು 59,000 ದಿಂದ 84,000 ರೂ ಹಾಗೂ ಸೂಪರ್ ಸ್ಪೆಶಲಿಸ್ಟ್ ಅವರು 64,000 ದಿಂದ 89,000 ರೂ ಗಳನ್ನು ಪಡೆಯಲಿದ್ದಾರೆ. ಸಂಬಳ ಹೆಚ್ಚಳ ಕುರಿತಾದ ಸರ್ಕಾರಿ ಆದೇಶ ಸೂಚನೆಯನ್ನು 2 ದಿನಗಳ ತರುವಾಯ ವಿಧಾನ ಸಭೆಯಲ್ಲಿ ಘೋಷಿಸಲಾಗುವುದು ಎಂದು ಯು.ಟಿ ಖಾದರ್ ತಿಳಿಸಿದ್ದಾರೆ.