ಒತ್ತುವರಿಗೆ ಎಂದು ಕೊನೆ, ತೆರವಾಗುತ್ತಾ ದರ್ಶನ್ ಮನೆ?
ಬೆಂಗಳೂರು, ಅಕ್ಟೋಬರ್, 14 : ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಿಸಿರುವ ನಟ ದರ್ಶನ ಅವರ ಮನೆ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಎಸ್.ಎಸ್.ಆಸ್ಪತ್ರೆ ತೆರವುಗೊಳಿಸುವ ಬಗ್ಗೆ ಜಿಲ್ಲಾಡಳಿತ ವರದಿ ಸಿದ್ದಪಡಿಸಿದೆ.
ಈ ಕುರಿತು ಒನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್ ಶಿವಶಂಕರ್ " ನಟ ದರ್ಶನ್ ಅವರು ಒಟ್ಟು 2,100 ಚ. ಅಡಿ ರಾಜ ಕಾಲುವೆ ಪ್ರದೇಶ ಒತ್ತುವರಿ ಮಾಡಿ ಮನೆ ನಿರ್ಮಿಸಿರುವುದು ದೃಢಪಟ್ಟಿದೆ. ಈ ಸಂಬಂಧ ವರದಿ ಸಿದ್ಧಪಡಿಸಲಾಗಿದ್ದು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ" ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರು ಸ್ವಯಂ ತೆರವಿಗೆ ಆದೇಶ ನೀಡಿದಲ್ಲಿ ನಟ ದರ್ಶನ ಅವರ ಮನೆ ಶೇ. 90ರಷ್ಟು ಭಾಗ ತೆರವುಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.[ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್ಸೈಟ್ನಲ್ಲಿ ಲಭ್ಯ]
ಶಾಸಕ ಶಾಮನೂರು ಶಿವಶಂಕರಪ್ಪ ಅವರ ಎಸ್.ಎಸ್. ಆಸ್ಪತ್ರೆಯು ಸಹ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವುದು ದೃಢಪಟ್ಟಿದೆ. ಒಟ್ಟು 22ಗುಂಟೆ ಒತ್ತುವರಿ ಸ್ಥಳ ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 17ರಂದು ಜಿಲ್ಲಾಧಿಕಾರಿ ವಿ.ಶಂಕರ್ ಅವರು ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ ಕಾಲುವೆ ಒತ್ತುವರಿ ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಕೇವಲ ಬಡವರ ಮನೆಗಳನ್ನು ಮಾತ್ರ ತೆರವುಗೊಳಿಸುತ್ತಿದೆ ಎಂದು ಆರೋಪಗಳು ಕೇಳಿಬಂದಿದ್ದವು.
ನಟ ದರ್ಶನ್ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಸ್ಪತ್ರೆ ತೆರವುಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ನೀಡಿತ್ತು.