ವಿಧಾನ ಸೌಧ ಹಾಗೇ ಇದೆ, ವಿಧಾನ ವೀಧಿ ಬದಲಾಗಿದೆ!
ಬೆಂಗಳೂರು, ಸೆ. 01: ಸಾಹಸ ಸಿಂಹ ವಿಷ್ಣುವರ್ಧನ್, ಮಂಡ್ಯದ ಗಂಡು ಅಂಬರೀಶ್, ಕ್ರೇಜಿ ಸ್ಟಾರ್ ರವಿಚಂದ್ರನ್ ಕಾಲದ ಸಿನಿಮಾಗಳನ್ನು ನೋಡಿದರೆ ಸಾಕು. ವಿಧಾನಸೌಧ, ಅದರ ಎದುರು ಹೈಕೋರ್ಟ್, ಮಧ್ಯೆ ಚಿಕ್ಕದಾದ ಒಂದು ಉದ್ಯಾನ, ಸಂಚರಿಸುತ್ತಿರುವ ಕೆಂಪು ಬಸ್ಸುಗಳು ಕಾಣಸಿಗುತ್ತವೆ. ವಿಧಾನಸೌಧದ ಎದುರು ಚಿತ್ರೀಕರಣ ಮಾಡಿದ ಹಾಡುಗಳ ಎಣಿಕೆ ಮಾಡಲೂ ಸಾಧ್ಯವಿಲ್ಲ.
ಆದರೆ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಈ ಸೌಂದರ್ಯ ಕಳೆದ ಐದು ವರ್ಷಗಳಿಂದ ಮರೆಯಾಗಿತ್ತು. ವಿಧಾನ ವೀಧಿಯಲ್ಲಿನ ಸುರಂಗ ಮಾರ್ಗ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು ಕೆಲವೇ ದಿನದಲ್ಲಿ ಗತವೈಭವ ಮರುಕಳಿಸಲಿದೆ.[ನಮ್ಮ ಮೆಟ್ರೋಗೆ ಮೂರು ವರ್ಷ: ಜನ ಏನಂತಾರೆ?]
ರಾಜಧಾನಿಯ ಶಕ್ತಿಕೇಂದ್ರ ತನ್ನ ಹಳೆ ಸಹಜ ಸೌಂದರ್ಯವನ್ನು ಕಂಡುಕೊಳ್ಳುತ್ತಿದೆ. ಒಳಗಿನ ಸರ್ಕಾರಗಳು ಬದಲಾಗಿರಬಹುದು, ಆದರೆ ಜನಕ್ಕೆ ಎಂದಿಗೂ ಇದು ಶಕ್ತಿ ಕೇಂದ್ರವೇ. ಕಳೆದ 5 ವರ್ಷಗಳಿಂದ ವಿಧಾನಸೌಧ ಮತ್ತು ಹೈಕೋರ್ಟ್ ನಡುವೆ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು ವಿಧಾನ ವೀಧಿಯನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ.
ಹಾಗಾದರೆ ನಾವು ವಿಧಾನಸೌಧದ ಹೊಸ ನೋಟವನ್ನು, ವಿಧಾನ ವೀಧಿಯನ್ನು ಕಣ್ಣು ತುಂಬಿಕೊಂಡು ಬರೋಣವೇ? ಬನ್ನಿ ಒಂದು ಸುತ್ತು ಹಾಕೋಣ!
ನಮ್ಮ ಶಕ್ತಿ ಸೌಧ ಹೀಗಿದೆ!
ಹೌದು ಹೀಗೆ ಹೇಳಬೇಕಾಗಿದೆ. ಕಳೆದ ಐದು ವರ್ಷಗಳ ಕಾಲದಿಂದ ವಿಧಾನಸೌಧದ ಸಂಪೂರ್ಣ ಚಿತ್ರಣವನ್ನು ಕಣ್ಣು ತುಂಬಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮೆಟ್ರೋ ಕಾಮಗಾರಿಯ ಬೋರ್ಡ್ ಗಳು, ಮಣ್ಣಿನ, ರಾಶಿ, ಜೆಸಿಬಿ ಸದ್ದು ಇವು ಸೌಧದ ಸೌಂದರ್ಯಕ್ಕೆ ಅಡ್ಡಿ ಮಾಡುತ್ತಿದ್ದವು.
ಅರಣ್ಯ ಮತ್ತು ತೋಟಗಾರಿಕಾ ಇಲಾಖೆ
ಹೈ ಕೋರ್ಟ್ ಎದುರು ಮರ ಗಿಡಗಳು ಬೆಳೆದಿದ್ದು ಅದನ್ನು ತೆರವು ಮಾಡುವುದೋ, ಇಲ್ಲವೇ ಕತ್ತರಿಸುವುದೋ ಎಂದು ಅರಣ್ಯ ಇಲಾಖೆ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಆಗ ಮಾತ್ರ ಹಿಂದೆ ಇದ್ದ ಬಗೆಯ ಉದ್ಯಾನ ನಿರ್ಮಾಣ ಸಾಧ್ಯ.
ನೇರವಾದ ರಸ್ತೆ
ಮೆಟ್ರೋ ಕಾಮಗಾರಿ ಕಾರಣ ಪ್ರತಿ ಆರು ತಿಂಗಳಿಗೊಮ್ಮೆ ರಸ್ತೆಯನ್ನು ಬದಲಾಯಿಸಲಾಗುತ್ತಿತ್ತು. ಆದರೆ ಇದೀಗ ನೇರವಾದ ರಸ್ತೆ ಮಾಡಲಾಗಿದೆ. ವಿಕಾಸ ಸೌಧದಿಂದ ಆರಂಭವಾದ ರಸ್ತೆ ನೇರವಾಗಿ ಕಾಫಿ ಬೋರ್ಡ್ ತಲುಪುತ್ತದೆ.
ವಿಭಿನ್ನ ಮೆಟ್ರೋ ಸ್ಟೇಶನ್
ಬೆಂಗಳೂರಿನ ಉಳಿದ ಕಡೆಯ ಮೆಟ್ರೋ ನಿಲ್ದಾಣಗಳಿಗೂ ವಿಧಾನ ಸೌಧದ ಎದುರು ನಿರ್ಮಾಣ ಮಾಡಿರುವ ಮೆಟ್ರೋ ನಿಲ್ದಾಣಕ್ಕೂ ಭಿನ್ನತೆಯಿದೆ. ವಿಧಾನಸೌಧದ ವಾಸ್ತುಶಿಲ್ಪಕ್ಕೆ ಅನುಗುಣವಾಗಿ ಮೆಟ್ರೋ ಸ್ಟೇಶನ್ ಗಳನ್ನು ನಿರ್ಮಿಸಲಾಗಿದೆ.
ಎಲ್ಲೆಲ್ಲಿ ಮೆಟ್ರೋ ನಿಲ್ದಾಣ
ಕಬ್ಬನ್ ಪಾರ್ಕ್ ನಿಂದ ವಿಧಾಸೌಧದ ರಸ್ತೆಗೆ ಸೇರುವ ಜಾಗದಲ್ಲಿ ಒಂದು ನಿಲ್ದಾಣ, ಇತ್ತ ಪ್ರೆಸ್ ಕ್ಲಬ್ ಗೆ ತೆರಳುವಲ್ಲಿ ಒಂದು ನಿಲ್ದಾಣ ಒಂದು ಮಾರ್ಗಕ್ಕೆ ಸಂಬಂಧಿಸಿದ್ದಾರೆ, ವಿಕಾಸ ಸೌಧ ಮತ್ತು ವಿಧಾನ ಸೌಧ ಮಧ್ಯೆ ಅಂದರೆ ವಿಧಾನ ಸೌಧ ಸಾರ್ವಜನಿಕ ಪ್ರವೇಶ ದ್ವಾರದ ಬಳಿ ತುರ್ತು ನಿರ್ಗಮನ ಮತ್ತು ವಿಧಾನಸೌಧ ಬಸ್ ನಿಲುಗಡೆ ಜಾಗದ ಸಮೀಪ ಒಂದು ನಿಲ್ದಾಣ ನಿರ್ಮಾಣ ಮಾಡಲಾಗಿದೆ.
ಸಿಮೆಂಟ್ ರಸ್ತೆ
ಡಾಂಬರೀಕರಣಕ್ಕೆ ತೀಲಾಂಜಲಿ ನೀಡಲಾಗಿದ್ದು ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮೊದಲಿನ ವ್ಯವಸ್ಥೆಯಂತೆ ಎರಡು ರಸ್ತೆಗಳನ್ನು ಒನ್ ವೇ ಆಗಿ ಇರಿಸಿಕೊಳ್ಳಲಾಗಿದ್ದು ಕೆಲವೇ ದಿನದಲ್ಲಿ ನಾಗರಿಕರು ಸೌಂದರ್ಯ ಆಸ್ವಾದಿಸಬಹುದು.