ಗೋಹತ್ಯೆಯಿಂದ ಸಿಗುವ ವಸ್ತುಗಳನ್ನು ತ್ಯಜಿಸಿ, ಶ್ರೀಗಳ ಸಂದೇಶ
ಬೆಂಗಳೂರು, ಆಗಸ್ಟ್ 27 : ನಮ್ಮ ನಗುವಿನ ಹಿಂದೆ ಬೇರೆಯವರ ಅಳುವಿರಬಾರದು, ಬದುಕುವ ಹಕ್ಕು ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇದೆ.
ಗೋವು ಪ್ರೀತಿಯಿಂದ ಕೊಡುವ ವಸ್ತುಗಳನ್ನು ಬಳಸಿ, ಗೋವಿನ ನೋವಿನಿಂದ, ಗೋಹತ್ಯೆಯಿಂದ ಸಿಗುವ ವಸ್ತುಗಳನ್ನು ತ್ಯಜಿಸಿ ಎಂದು ರಾಘವೇಶ್ವರ ಶ್ರೀಗಳು ಕರೆ ನೀಡಿದ್ದಾರೆ.
ಶನಿವಾರ (ಆ 27) ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ 39ನೇ ದಿನದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ 'ಗೋಹತ್ಯೆಯಲ್ಲಿ ನಮ್ಮ ಪಾಲೆಷ್ಟು, ಗೊತ್ತಿದ್ದೋ ಗೊತ್ತಿಲ್ಲದೆಯೋ ದೇಶದಲ್ಲಿ ನಡೆಯುವ ಗೋಹತ್ಯೆಯನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆಯೇ? ಎಂಬ ವಿಷಯದ ಕುರಿತು ಶ್ರೀಗಳು ಮಾತನಾಡುತ್ತಿದ್ದರು. (ಹಾಲಿಗೆ ಹಾಲೇ ಪರ್ಯಾಯ)
ಗೋವಿನ ಚರ್ಮ, ಕೊಬ್ಬು, ರಕ್ತ, ಮೂಳೆಗಳನ್ನು ಬಳಸಿದರೂ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಗೋಹತ್ಯೆಯನ್ನು ಬೆಂಬಲಿಸಿದಂತಾಗುತ್ತದೆ. ಗೋಹತ್ಯೆಗೆ ಕಾರಣವಾಗುವ ವಸ್ತುಗಳನ್ನು ಬಳಸಿದರೆ ಗೋಹತ್ಯೆಯ ಪಾಪ ಆ ವಸ್ತುಗಳನ್ನು ಬಳಸಿದವರಿಗೂ ಬರುತ್ತದೆ ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಗೋವಿನ ಕೊಬ್ಬನ್ನು ಸವರಿದ ಗುಂಡುಗಳನ್ನು ವಿರೋಧಿಸಿ ಅಂದು ಸ್ವಾತಂತ್ರ್ಯ ಸಂಗ್ರಾಮ ಆರಂಭವಾಯಿತು. ಗೋವಿನ ಕೊಬ್ಬಿರುವ ಗುಂಡನ್ನು ಬಾಯಲ್ಲಿ ಕಚ್ಚಲಾರೆ ಎಂದು ಧೀರೋದತ್ತವಾಗಿ ಪ್ರಾಣಾರ್ಪಣೆ ಮಾಡಿದ ಮಂಗಲಪಾಂಡೆಯಂತವರು ಜನಿಸಿದ ನಮ್ಮದೇಶದಲ್ಲಿ ಇಂದು ನಾವೇನನ್ನು ಮಾಡುತ್ತಿದ್ದೇವೆ ಎಂದು ಶ್ರೀಗಳು ಪ್ರಶ್ನಿಸಿದರು.
ಗೋವಿನ ಚರ್ಮದಿಂದ ಮಾಡಿದ ಚೀಲ, ಶೂ,ಪರ್ಸ್, ಬೆಲ್ಟುಗಳು, ಗೋವಿನ ಕೊಬ್ಬನ್ನು ಬಳಸಿರುವ ಬೇಕರಿ ಪದಾರ್ಥಗಳು, ಸೋಪು, ಲಿಫ್ಟಿಕ್ ಮುಂತಾದ ಸೌಂದರ್ಯ ವರ್ಧಕಗಳು, ಮುಂತಾದವುಗಳನ್ನು ತ್ಯಜಿಸಲು ಶ್ರೀಗಳು ಈ ಸಂದರ್ಭದಲ್ಲಿ ಕರೆ ನೀಡಿದರು.
ಶ್ರೀರಾಮಕೃಷ್ಣಾಶ್ರಮದ ಪೂಜ್ಯ ಸ್ವಾತ್ಮಾರಾಮಾನಂದಜಿ ಸಂತ ಸಂದೇಶ ನೀಡಿ, ಗೋವಿನ ಕುರಿತಾಗಿ ರಾಮಕೃಷ್ಣ ಪರಮಹಂಸರ ಮಾತುಗಳನ್ನು ಹಂಚಿಕೊಂಡು, ಗೋವನ್ನು ಕಡಿದು ತಿಂದರೆ ತಾಯಿಯನ್ನು ತಿಂದ ಹಾಗಾಗುವುದಿಲ್ಲವೇ ಎಂದು ಹೇಳಿದರು.
ಗೋಸಂರಕ್ಷಣೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಕಾರ್ಯ ಶ್ಲಾಘನೀಯ, ಎಲ್ಲರೂ ಸೇರಿ ಗೋವನ್ನು ರಕ್ಷಿಸೋಣ ಎಂದು ಸ್ವಾತ್ಮಾರಾಮಾನಂದಜಿ ಹೇಳಿದರು. ಗೋ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಯಾಗದ ಕಮಲನಾಥ ತ್ರಿಪಾಠಿ ಮತ್ತು ಕೃಷ್ಣಮೂರ್ತಿಯವರಿಗೆ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು.
ಶ್ರೀಭಾರತೀ ಪ್ರಕಾಶನವು ಹೊರತಂದ ಕೈಲಾಸ ಯಂತ್ರ ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸ್ವಾತ್ಮಾರಾಮಾನಂದಜಿ ಲೋಕಾರ್ಪಣೆ ಮಾಡಿದರು.
ವೃತ್ತಿಪರರಿಗೆ ವಿಶೇಷ ಕಾರ್ಯಾಗಾರವನ್ನು ಹಮ್ಮಿ ಕೊಳ್ಳಲಾಗಿತ್ತು, ವಿವಿಧ ವೃತ್ತಿಯ, ನಾನಾ ಕಂಪನಿಗಳ ನೂರಾರು ವೃತ್ತಿ ನಿರತರು, ಸ್ವಉದ್ಯೋಗಿಗಳು ಭಾಗವಹಿಸಿದ್ದರು. ಪಾದುಕಾ ಪೂಜೆ ನೆರವೇರಿಸಿದ ಭಂಡಾರಿ ಸಮಾಜದವರಿಗೆ ಶ್ರೀಗಳು ವ್ಯಾಸಮಂತ್ರಾಕ್ಷತೆಯನ್ನು ಅನುಗ್ರಹಿಸಿದರು. (ಭಾರತ ಗೋಮೂತ್ರ ರಫ್ತು ಮಾಡಿ ಕೀರ್ತಿಶಾಲಿಯಾಗಲಿ)
ಸಭಾ ಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಮನೋರಮಾ ಭಟ್ ಹಾಗು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಗೋಸೇವಾಪುರಸ್ಕೃತರ ಜೊತೆ ಆಗಮಿಸಿದ ಪ್ರಯಾಗದ ಗೋಪ್ರೇಮಿಗಳು ಹಾಗೂ ಲೋಕಾರ್ಪಣೆಯಾದ ಪುಸ್ತಕದ ಲೇಖಕರಾದ ಹಿತ್ತಲಳ್ಳಿ ಸೂರ್ಯನಾರಾಯಣ ಭಟ್ ಶ್ರೀಗಳಿಂದ ಆಶೀರ್ವಾದ ಪಡೆದರು.
ಶ್ರೀಮಠದ ಪದಾಧಿಕಾರಿಗಳು, ಭಂಡಾರಿ ಸಮಾಜದ ಪ್ರಮುಖರು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯ ಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.