ಕಾಲ ಕೆಟ್ಟಿದೆಯೆಂದು ಕೂರಬೇಡ, ತನ್ನ ತನವ ಬಿಡಬೇಡ
ಬೆಂಗಳೂರು, ಆಗಸ್ಟ್ 28 : ಕಾಲ ಕೆಟ್ಟಿದೆ ಎಂದು ಕೂರುವುದು ತರವಲ್ಲ, ತನ್ನ ತನವನ್ನು ಬಿಡಬಾರದು, ನಮ್ಮದೆಂಬ ಅಭಿಮಾನ ಎಂದೂ ಇರಬೇಕು, ಪ್ರವಾಹದ ವಿರುದ್ಧವಾಗಿ ಈಜುವುದಾದರೂ ಸರಿಯೇ, ಸತ್ಯವನ್ನು ಬಿಟ್ಟು ಹೋಗಬಾರದು ಎಂದು ರಾಘವೇಶ್ವರ ಶ್ರೀಗಳು ಕರೆ ನೀಡಿದ್ದಾರೆ.
ಭಾನುವಾರ (ಆ 28) ಗೋಚಾತುರ್ಮಾಸ್ಯದ 40ನೇ ದಿನದ ಅಂಗವಾಗಿ ರಾಮಚಂದ್ರಾಪುರ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ ಗೋಕಥಾದಲ್ಲಿ ಕಲಿಯನ್ನೇ ಕಟ್ಟಿ 'ರಾಜಾ ಕಾಲಸ್ಯ ಕಾರಣಂ' ಎಂಬುದನ್ನು ನಿರೂಪಿಸಿದ ಪರೀಕ್ಷಿತನ ಕಥೆಯನ್ನು ಶ್ರೀಗಳು ನಿರೂಪಿಸಿದರು. (ಮಠದ ಸಮಸ್ಯೆಯಿಂದ ದಕ್ಷರು ಸಿಕ್ಕಿದ್ದಾರೆ)
ಕೆಡುಕಿಗೆ ಒಳಿತನ್ನು ಕಂಡರಾಗದು, ಒಳಿತು ಹುಟ್ಟುವ ಮೊದಲೇ ಅದನ್ನು ನಾಶಮಾಡುವ ಪ್ರಯತ್ನಗಳಾಗುತ್ತವೆ, ಆದರೆ ಅರಕ್ಷಿತವಾದದ್ದನ್ನು ದೇವರು ಕಾಪಾಡುತ್ತನೆ. ಪರೀಕ್ಷಿತ ರಾಜನ ಪ್ರಕರಣದಲ್ಲಿ ಬರುವ ಧರ್ಮನಂದಿಯ ಬಗ್ಗೆ ಶ್ರೀಗಳು ಈ ಸಂದರ್ಭದಲ್ಲಿ ವಿವರಿಸಿದರು.
ಕಲಿಯುಗದ ಆದಿಯಲ್ಲಿ ತಪಸ್ಸು, ಶುಚಿ ಹಾಗೂ ಕಾರುಣ್ಯವೆಂಬ ಮೂರು ಕಾಲುಗಳನ್ನು ಕಳೆದುಕೊಂಡು ಸತ್ಯ ಎಂಬ ಕಾಲಿನಲ್ಲಿ ನಿಂತಿತ್ತು. ದರ್ಪದಿಂದ ತಪಸ್ಸು ನಾಶವಾಗುತ್ತದೆ.
ದುರ್ಜನ ಸಂಗದಿಂದ ಶುಚಿ ನಾಶವಾಗುತ್ತದೆ, ಮದದಿಂದ ಕಾರುಣ್ಯ ನಷ್ಟವಾಗುತ್ತದೆ , ಜೂಜು, ಪಾನ, ಸ್ತ್ರೀಸಂಗ ಮತ್ತು ಹಿಂಸೆಯಲ್ಲಿ ಕಲಿ ಇದ್ದು ಇವುಗಳಿಂದ ದೂರವಿರಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.
ರಾಜನೇ ಕಾಲಕ್ಕೆ ಕಾರಣನಾಗಿದ್ದು, ಪ್ರಜೆಗಳ ಪಾಪದಲ್ಲಿ ರಾಜನಿಗೂ ಪಾಲಿದೆ. ಕಲಿಪುರುಷ ಕಿರೀಟವನ್ನು ಹಾಕಿ ಮೆರೆಯುತ್ತಾನೆ, ಆದರೆ ಸಮಯ ಬಂದಾಗ ಕಾಲಿಗೆ ಬೀಳಲು ಹಿಂದೆ ಮುಂದೆ ನೋಡುವುದಿಲ್ಲ. ಈ ಬಗ್ಗೆ ಎಚ್ಚರವಾಗಿರಬೇಕು. ಕಲಿಯನ್ನು ಮೀರಿ ನಿಂತರೆ ನಮ್ಮ ಜೀವನವನದಲ್ಲಿ ಕೃತಯುಗವನ್ನು ತಂದುಕೊಳ್ಳಬಹುದು ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ವೇಳೆ ಪ್ರವಚನ, ಕಥನ, ಗಾಯನ, ರೂಪಕಗಳನ್ನೊಳಗೊಂಡ ಗೋಕಥೆಯಲ್ಲಿ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳಿ ಗಣಪತಿ ಅವರು ಮನಮೋಹಕವಾಗಿ ಚಿತ್ರಿಸಿದರು. (ಮನುಷ್ಯ ಕೃತಘ್ನನಾಗಬಾರದು)
ಗೋಕಥೆಯ ನಂತರ ಶ್ರೀಗಳು ಮತ್ತು ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ದೃಶ್ಯಮುದ್ರಿಕೆ ಹಾಗೂ ಗೋಕಥಾ ದೃಶ್ಯಮುದ್ರಿಕೆಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ವೈದ್ಯರ ಬಳಗ ಇಂದಿನ ಗೋಕಥಾ ಪ್ರಾಯೋಜಕತ್ವವನ್ನು ವಹಿಸಿತ್ತು.
ಇದಕ್ಕೂ ಮೊದಲು ರಾಘವೇಶ್ವರ ಶ್ರೀಗಳ ಆಶಯದಂತೆ 'ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ' ಎಂಬ ಉದ್ದೇಶದೊಂದಿಗೆ ಸಾಮಾಜಿಕ ಸೇವಾ ಸಂಘಟನೆಯಾದ 'ರಾಘವ ಸೇನೆ'ಯ ವತಿಯಿಂದ ಸ್ವಚ್ಚತಾ ಅಭಿಯಾನ ನಡೆಯಿತು.
ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರಿಗೆ ಗಿರಿನಗರದ ಪರಿಸರದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಚಗೊಳಿಸಲಾಯಿತು. ಸ್ವಚ್ಚತಾ ಅಭಿಯಾನಕ್ಕೆ ಬಿವಿಜಿ ಗ್ರೂಪಿನ ಪ್ರಸನ್ನ ಶಾಸ್ತ್ರಿ ಸ್ವಚ್ಚತಾ ಪರಿಕರಗಳನ್ನು ನೀಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ವೈ ವಿ ಕೃಷ್ಣಮೂರ್ತಿ, ರಾಮಚಂದ್ರ ಭಟ್ ಕೆಕ್ಕಾರು, ಡಾ ಶಾರದಾ ಜಯಗೋವಿಂದ, ರಾಘವ ಸೇನೆಯ ಆರ್ ಕೆ ಭಟ್ ಬೆಳ್ಳಾರೆ ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಹಾಜರಿದ್ದರು.