ವಿಸರ್ಜನೆ ನಂತರವೂ ಚಿಗುರೊಡೆಯುತ್ತಾನೆ ಈ ಬೀಜ ಗಣೇಶ
ಬೆಂಗಳೂರು, ಆಗಸ್ಟ್ 11 : ಗಣೇಶ ಹಬ್ಬಕ್ಕೆ ಬಣ್ಣ ರಹಿತ ಪರಿಸರಸ್ನೇಹಿ ಗಣೇಶನ ಮೂರ್ತಿಯನ್ನು ತಂದು ಪೂಜೆ ಮಾಡಿ, ವಿಸರ್ಜನೆ ಮಾಡುವ ಪದ್ಧತಿ ಇತ್ತೀಚೆಗೆ ಹೆಚ್ಚಾಗುತ್ತಿದೆ.
ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಒಪಿ) ಬಳಸಿ ತಯಾರಿಸಲಾದ ಗಣೇಶ ಮೂರ್ತಿ ಮೇಲೆ ಸರ್ಕಾರ ನಿಷೇಧ ಕೂಡಾ ಹೇರಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಿದರೂ ಕೆಲವು ಮೂರ್ತಿಗಳಲ್ಲಿ ರಾಸಾಯನಿಕ ಬಣ್ಣಗಳ ಬಳಕೆಯಾಗುತ್ತಿದೆ.
ಇದನ್ನು ಹೊಗಲಾಡಿಸಲು ಹೊಸ ಮಾದರಿಯ ಗಣೇಶ ಮೂರ್ತಿ ಈಗ ಅನ್ ಲೈನ್ ನಲ್ಲಿ ಲಭ್ಯವಿದೆ. ಹೌದು, ಇದೀಗ ಬೆಂಗಳೂರಿನಲ್ಲಿ 'ಬೀಜ ಗಣೇಶ(Seed Ganesh)' ಸಾರ್ವಜನಿಕರಿಗೆ ಸಿಗಲಿದೆ.
ಏನಿದು ಸೀಡ್ ಗಣೇಶ: ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿದ ಮೇಲೆ ತ್ಯಾಜ್ಯವನ್ನು ಬೇರ್ಪಡಿಸಿದರೂ ಅದರಲ್ಲಿ ಮರುಬಳಕೆಗೆ ಯೋಗ್ಯವಾದ ವಸ್ತುಗಳಿರುವುದಿಲ್ಲ. ಜೇಡಿಮಣ್ಣಿನಿಂದ ಮಾತ್ರ ಮಾಡಿದ ಮೂರ್ತಿ ನೀರಿನಲ್ಲಿ ಕರಗಿ ಬಿಡುತ್ತದೆ.
ಆದರೆ, ಇಂಥ ಗಣೇಶ ಮೂರ್ತಿಯಲ್ಲಿ ಗಿಡವೊಂದರ ಬೀಜವನ್ನು ಇಟ್ಟು ಮುಂದೆ ಹೊಸ ಚಿಗುರನ್ನು ಕಾಣಬಹುದಾಗಿದೆ ಎಂಬ ಹೊಸ ಆಲೋಚನೆಯೊಂದಿಗೆ ತಂಡವೊಂದು ಕಾರ್ಯರೂಪಕ್ಕೆ ತರುತ್ತಿದ್ದಾರೆ.
ಕೆಂಪು ಮಣ್ಣು, ಜೇಡಿ ಮಣ್ಣು, ಸಾವಯವ ಗೊಬ್ಬರ, ನೈಸರ್ಗಿಕ ಬಣ್ಣ ಹಾಗೂ ಬೀಜದೊಂದಿಗೆ ನಿರ್ಮಾಣವಾದ ಗಣೇಶ ಮೂರ್ತಿಯನ್ನು ಮಿಕ್ಕ ಮೂರ್ತಿಗಳಂತೆ ಪೂಜಿಸಬಹುದು. ಆದರೆ, ವಿಸರ್ಜನೆಯ ನಂತರ ಈ ಮೂರ್ತಿ ಮತ್ತೆ ಚಿಗುರೊಡೆಯಲಿದೆ.
ಹೆಚ್ಚಿನ ಮಾಹಿತಿಗೆ ಬಟ್ಟೆಬರೆ.ಕಾಂ ತಾಣಕ್ಕೆ ಭೇಟಿ ಕೊಡಿ, ಆಗಸ್ಟ್ 14ರೊಳಗೆ ನೋಂದಾಯಿಸಿಕೊಳ್ಳಿ. ಆಗಸ್ಟ್ 18 ರಿಂದ 23ರೊಳಗೆ ನಿಮ್ಮ ಮನೆಗೆ ಗಣೇಶ ಮೂರ್ತಿ ತಲುಪಲಿದೆ.