ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ : ತೀವ್ರ ಟೀಕೆಗೆ ಗುರಿಯಾದ ಪರಮೇಶ್ವರ ಹೇಳಿಕೆ
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕರ್ನಾಟಕದ ರಾಹುಲ್ ಗಾಂಧಿ. ಇಂಥ ಬೇಜವಾಬ್ದಾರಿ ಮಂತ್ರಿಯಿಂದ ಕರ್ನಾಟಕವನ್ನು ದೇವರೇ ಕಾಪಾಡಬೇಕು ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು, ಡಿಸೆಂಬರ್ 02 : "ಇಂಥ (ಹೊಸ ವರ್ಷಾಚರಣೆ) ಘಟನೆಗಳು ಜರುಗುವಾಗ ಮಹಿಳೆಯರ ಮೇಲೆ (ಲೈಂಗಿಕ) ದೌರ್ಜನ್ಯಗಳು ನಡೆಯುವುದು ಸಹಜ. ಪಾಶ್ಚಿಮಾತ್ಯ ದಿರಿಸು ಧರಿಸುತ್ತಿರುವುದರಿಂದ ಮಹಿಳೆಯರ ಮೇಲೆ ಹಲ್ಲೆಗಳಾಗುತ್ತಿವೆ" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿರುವುದು ಭಾರೀ ಟೀಕೆಗೆ ಗುರಿಯಾಗುತ್ತಿದೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಎಂಜಿ ರಸ್ತೆಯಲ್ಲಿ ನೆರೆದಿದ್ದ ಮಹಿಳೆಯರನ್ನು ಲೈಂಗಿಕವಾಗಿ ಹಿಂಸಿಸಿದ್ದಾರೆ. ಇದು ಫೋಟೋಗಳಲ್ಲಿ ಕೂಡ ದಾಖಲಾಗಿದೆ. ಸಾವಿರದೈನೂರು ಪೊಲೀಸರು ಅಲ್ಲಿದ್ದರೂ ಜನರು ಭಾರೀ ಸಂಖ್ಯೆಯಲ್ಲಿದ್ದರಿಂದ ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸುವುದು ಸಾಧ್ಯವಾಗಿರಲಿಲ್ಲ.
ಈ ಘಟನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಇಂಥ ಘಟನೆಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಇಂಥ ಕಾರ್ಯಕ್ರಮಗಳನ್ನು ನಗರದಿಂದ ಹೊರವಲಯದಲ್ಲಿ ನಡೆಸಬೇಕು. ಹೇಗೆ ವ್ಯವಹರಿಸಬೇಕೆಂದು ಜನರಿಗೆ ಹೇಳುವುದು ಕಷ್ಟ. ಕನ್ನಡಿಗರಂತೆ ಬಟ್ಟೆ ಧರಿಸುವಂತೆ ಒತ್ತಾಯ ಹೇಳುವುದೂ ಅಸಾಧ್ಯ. ಆದರೆ, ಇಂಥ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. [ಬೆಂಗಳೂರು ಮಾನ ಕಳೆದ ಪುಂಡರು, ಅಸಹಾಯಕ ಪೊಲೀಸರು]
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕರ್ನಾಟಕದ ರಾಹುಲ್ ಗಾಂಧಿ. ಇಂಥ ಬೇಜವಾಬ್ದಾರಿ ಮಂತ್ರಿಯಿಂದ ಕರ್ನಾಟಕವನ್ನು ದೇವರೇ ಕಾಪಾಡಬೇಕು ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ಟ್ವೀಟ್ ಮಾಡಿದ್ದಾರೆ. ಗೃಹ ಸಚಿವರಾಗಿ ಪರಮೇಶ್ವರ ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಕೂಡ ಟೀಕಿಸಿದ್ದಾರೆ.
Home Minister Parameshwara - Karnataka's Rahul Gandhi ...
— C.T.Ravi (@CTRavi_BJP) January 2, 2017
God save the State from such irresponsible & careless ministers. https://t.co/pFT1AbRfML
ಕುಡಿದ ಮತ್ತಿನಲ್ಲಿದ್ದ ಓರ್ವ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ನಡೆಸಿ, ಆಕೆಯ ಬಟ್ಟೆ ಕಳಚಲು ಇಬ್ಬರು ಪುಂಡರನ್ನು ಓರ್ವ ಮಹಿಳಾ ಪೊಲೀಸ್ ಪೇದೆ ಬೆನ್ನತ್ತಿದ್ದರು. ಇಂಥ ಪರಿಸ್ಥಿತಿಯಲ್ಲಿ ಮಹಿಳೆಯೊಬ್ಬಳು ಸಿಲುಕಿದ್ದು ತುಂಬಾ ಬೇಜಾರದ ಸಂಗತಿ ಎಂದು ಆ ಮಹಿಳಾ ಪೇದೆ ತಿಳಿಸಿದ್ದಾರೆ. ಈ ಘಟನೆಗೆ ಲಂಡನ್ನಿಗೆ ಹೋಗಿರುವ ರಾಹುಲ್ ಗಾಂಧಿಯವರು ಹೇಗೆ ಪ್ರತಿಕ್ರಿಯಿಸುತ್ತಾರೆ?