ಗಣೇಶ ವಿಸರ್ಜನೆಗೆ ಬಂದು ನೊಂದ ಹಿರಿಯ ನಾಗರಿಕ
ನಾನು ಬಸವನಗುಡಿಯ ನಿವಾಸಿ, ವಯಸ್ಸು 68, ನನ್ನ ಪತ್ನಿಗೆ 63. ಮಕ್ಕಳಿಬ್ಬರು ವಿದೇಶದಲ್ಲಿ ಇದ್ದಾರೆ. ನಾವು ಪ್ರತಿ ವರ್ಷದಂತೆ ಈ ವರ್ಷವೂ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದೇವೆ.
ಒಂದೇ ದಿನ ನಮ್ಮ ಮನೆಯಲ್ಲಿ ಗಣೇಶನ್ನು ಕೂರಿಸುವುದು ವಾಡಿಕೆ. ಅದರಂತೆ ಸೆಪ್ಟೆಂಬರ್ 5 ರಂದು ಹಬ್ಬ ಆಚರಣೆ ಮಾಡಿ ಮೂರ್ತಿ ವಿಸರ್ಜನೆಗೆ ಎಂದು ಯಡಿಯೂರು ಕೆರೆ ಬಳಿ ತೆರಳಿದೆವು. ನಾವು ರಾತ್ರಿ ಸುಮಾರು ಎಂಟು ಗಂಟೆ ಸಮಯಕ್ಕೆ ಅಲ್ಲಿಗೆ ತೆರಳಿದರೆ ರಶ್ಯೋ ರಶ್ಯು.. ಮೂರ್ತಿ ವಿಸರ್ಜನೆಗೆ ಮುಂದಾದರೆ ಜನ ನಮ್ಮನ್ನೇ ತಳ್ಳಿಕೊಂಡು ಹೋಗುತ್ತಿದ್ದರು. ಇದು ಸಾಧ್ಯವಿಲ್ಲದ ಕೆಲಸ ಎಂದು ಅರಿತು ಆಟೋ ಮಾಡಿಸಿಕೊಂಡು ವಾಪಸ್ ಮನೆಗೆ ಬಂದೆವು.[ಅಮೂಲ್ಯ ಮಾಹಿತಿ, ಗಣೇಶ ವಿಸರ್ಜನೆಗೆ ಹತ್ತಿರದ ಕೆರೆ ಎಲ್ಲಿದೆ?]
ಮಂಗಳವಾರ ಬೆಳಗ್ಗೆ ಮೂರ್ತಿ ವಿಸರ್ಜನೆ ಮಾಡೋಣ ಅಂತ ಆಟೋ ಹಿಡಿದು ಯಡಿಯೂರು ಕೆರೆ ಬಳಿ ತೆರಳಿದೆವು. ಬೆಳಗ್ಗೆ 10.30 ಆದ್ದರಿಂದ ಜನಜಂಗುಳಿ ಸ್ವಲ್ಪ ಕಡಿಮೆ ಇತ್ತು. ಬಿಬಿಎಂಪಿ, ಸರ್ಕಾರ ಹೇಳಿದಂತೆ ಪರಿಸರ ಸ್ನೇಹಿ ಗಣಪತಿಯನ್ನೇ ಮನೆಗೆ ತಂದಿದ್ದೆವು.
ಆಟೋದಿಂದ ಇಳಿದ ಮೂರ್ತಿ ವಿಸರ್ಜನೆ ಮಾಡಲು ದ್ವಾರದ ಬಳಿ ತೆರಳಿದಾಗ ಒಂದು ಕ್ಷಣ ನಮಗೆ ಏನು ತೋಚದಂತಾಯಿತು. ನೀರಿಗಿಳಿದು ಮೂರ್ತಿ ವಿಸರ್ಜನೆ ಮಾಡಲು ಅವಕಾಶ ಇಲ್ಲ, ಪರವಾಗಿಲ್ಲ. ನಮ್ಮಂತಹ ವಯಸ್ಸಾದ ವ್ಯಕ್ತಿಗಳಿಂದ ಅದು ಸಾಧ್ಯವೂ ಇಲ್ಲ.
ನಮ್ಮ ಕೈಯಿಂದ ಮೂರ್ತಿ ತೆಗೆದುಕೊಳ್ಳುವ ಮುನ್ನವೇ ಆತ ಹಣಕ್ಕಾಗಿ ಕೈ ಚಾಚಿದ್ದ. ನಾನು ನಾಜೂಕಾಗಿ ಹಿತ್ತಾಳೆಯ ಹರಿವಾಣದಲ್ಲಿ ತೆಗೆದುಕೊಂಡು ಹೋಗಿದ್ದ ಮೂರ್ತಿಯನ್ನು ಆತ ಹೇಗೆ ಬೇಕೋ ಹಾಗೆ ಎತ್ತಿಕೊಳ್ಳಲು ಸಿದ್ಧವಾಗಿದ್ದ.
ವಿಸರ್ಜನೆಯಾಗುವವರೆಗೆ ಮೂರ್ತಿಯ ಯಾವ ಭಾಗಗಳು ಊನವಾಗಬಾರದು ಎಂಬುದನ್ನು ಮೊದಲಿನಿಂದಲೂ ನಂಬಿಕೊಂಡು ಬಂದವರು ನಾವು. ಆತನ ಗಡಿಬಿಡಿ, ವೇಷ ಭೂಷಣ ನಾವು ಇಷ್ಟು ದಿನ ಮಾಡಿದ ಪೂಜೆಗೆ ಅರ್ಥವಿದೆಯೇ? ಎಂಬುದನ್ನು ಛೇಡಿಸುವಂತೆ ಇತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮೊದಲು ಧನ್ಯವಾದ ಹೇಳುತ್ತೇನೆ. ಅವರು ಮಾಡಿರುವ ವ್ಯವಸ್ಥೆ, ಪರಿಸರ ಪ್ರೇಮವನ್ನು ಮೆಚ್ಚಬೇಕು. ಆದರೆ ಗುತ್ತಿಗೆ ನೀಡಿದ ಬಗೆ ಮಾತ್ರ ವಿಚಿತ್ರ. ನಮ್ಮ ಕೈಯಿಂದ ಮೂರ್ತಿ ತೆಗೆದುಕೊಂಡು ಹೋಗುವವರು ಸ್ನಾನ ಮಾಡಿ ಎಷ್ಟು ದಿನ ಆಯಿತೋ? ಎಂಬ ಅನುಮಾನವೂ ನನಗೆ ಬಂದಿತ್ತು.[ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ]
ಇಲ್ಲಿ ನಾನು ಜಾತಿ, ಧರ್ಮದ ವಿಷಯವನ್ನು ಎತ್ತುವುದಿಲ್ಲ. ನಮ್ಮ ಕೈಯಿಂದ ಮೂರ್ತಿ ತೆಗೆದುಕೊಳ್ಳುವವರಿಗೂ ಒಂದು ಸಮವಸ್ತ್ರ ಧರಿಸಿದರೆ ಉತ್ತಮ. ಹಣೆಗೆ ಕುಂಕುಮಿಟ್ಟು ನಮ್ಮ ಕೈಯಿಂದ ಮೂರ್ತಿ ತೆಗೆದುಕೊಂಡರೆ ಧನ್ಯತಾ ಭಾವನೆ ಬರುತ್ತದೆ. ನನ್ನ ಮನವಿಯನ್ನು ಯಾರಾದರೂ ಕೇಳಿಸಿಕೊಂಡರೆ ಅಷ್ಟೆ ಸಾಕು.
ಧಾರ್ಮಿಕ ಭಾವನೆಗೆ ಧಕ್ಕೆ ತರಬಾರದು ಎಂದು ಸಂವಿಧಾನವೇ ಹೇಳಿದೆ. ಇಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಬರುತ್ತಿದೆಯೇ ಉತ್ತರ ನನಗೆ ಗೊತ್ತಿಲ್ಲ. ಆದರೆ ವಾರಗಳ ಕಾಲದಿಂದ ದೇವರ ಪೂಜೆ ಮಾಡಿಕೊಂಡು ಬಂದು ಮಡಿಯಲ್ಲಿ ಇದ್ದು ಕಜ್ಜಾಯ ಮಾಡಿ ಹಬ್ಬ ಆಚರಣೆ ಮಾಡಿದ ನಮಗೆ ಮೂರ್ತಿ ಮುಳುಗಿಸುವ ರೀತಿಯನ್ನು ಕಂಡಾಗ ಮಾತ್ರ ಖೇದವಾಗಿದ್ದು ನಿಜ.
ನಮ್ಮ ಕೈಯಿಂದ ಮೂರ್ತಿ ಪಡೆದುಕೊಳ್ಳುವವರು ಶುದ್ಧವಾಗಿರಲಿ ಎಂಬುದೇ ನನ್ನ ಬಯಕೆ. ಅವರು ಸ್ನಾನ ಮಾಡಿ, ಹಣೆಗೊಂದು ತಿಲಕ ಇಟ್ಟು ಮೂರ್ತಿಯನ್ನು ನಮ್ಮ ಕೈಯಿಂದ ಪಡೆದುಕೊಂಡರೆ ಅಷ್ಟೆ ಸಾಕು. ಇನ್ನು ಮುಂದೆ ಬಿಬಿಎಂಪಿ ಇಂಥಹ ಸೂಕ್ಷ್ಮ ವಿಚಾರಗಳನ್ನು ಗುತ್ತಿಗೆ ನೀಡುವ ಮುನ್ನ ಒಮ್ಮೆ ಚಿಂತನೆ ನಡೆಸಬೇಕು.[ಬೆಂಗಳೂರಿಗರೇ, ಗಣೇಶ ಮೂರ್ತಿ ಕೊಳ್ಳುವ ಮುನ್ನ ಗಮನಿಸಿ...]
ಯಾವ ಊರಿನ ಕೆಲಸಗಾರರನ್ನು ಕರೆದುಕೊಂಡು ಬರುತ್ತೀರಿ? ಎಲ್ಲಿಯವರು? ಹಿಂದೆ ಯಾವ ಕೆಲಸ ಮಾಡುತ್ತಿದ್ದರು? ಸದ್ಯ ಯಾವ ಕೆಲಸ ಮಾಡುತ್ತಿದ್ದಾರೆ? ಎಂಬುದನ್ನೆಲ್ಲ ಗಮನಕ್ಕೆ ತೆಗೆದುಕೊಂಡು ಗುತ್ತಿಗೆ ನೀಡಿದರೆ ಒಳಿತು... ಇದು ನನ್ನ ಮನವಿ ಮಾತ್ರ.. ಆಗ್ರಹವಲ್ಲ..
ಗಣೇಶ ವಿಸರ್ಜನೆಗೆ ಬಂದು ನೊಂದ ಹಿರಿಯ ನಾಗರಿಕ