ಭವ್ಯ ಭಾರತದ ಮಕ್ಕಳಿಗೂ ಅಂಟಿಕೊಂಡ 'ಚಂದಾರೋಗ'
ಬೆಂಗಳೂರು. ಆಗಸ್ಟ್. 17: ಸ್ವಾತಂತ್ರ್ಯ ದಿನದ ಸಂಜೆ ಪಾರ್ಕೊಂದರಲ್ಲಿ ಗಾಳಿ ತಿನ್ನುತ್ತಾ ಕುಳಿತಿದ್ದೆ. ಇಬ್ಬರು ಮಕ್ಕಳು, ಒಬ್ಬ ಎಂಟು ವರ್ಷದವನಿರಬಹುದು, ಇನ್ನೊಬ್ಬ 10 ವರ್ಷದವನಿರಬಹುದು. ನಾನು ಕುಳಿತಲ್ಲಿಗೆ ಬಂದು "ಅಂಕಲ್ ಗಣೇಶ ಕೂರಿಸ್ತಾ ಇದೀವಿ, ಚಂದಾ ನೀಡಿ ಎನ್ನುತ್ತ ಹತ್ತಿರ ಬಂದರು. ಕೈಯಲ್ಲಿ ಒಂದು ಬುಕ್ ಬೇರೆ ಹಿಡ್ಕೊಂಡಿದ್ದರು.
ನನ್ನ ಜರ್ನಲಿಸಂ ಬುದ್ಧಿ ಸುಮ್ಮನಿರಬೇಕಲ್ಲ. ಯಾವ ಶಾಲೆ? ಗಣೇಶ ಕೂರಿಸೋದು ಎಲ್ಲಿ? ಸ್ವಾತಂತ್ರ್ಯ ದಿನ ಹೇಗೆ ಆಚರಣೆ ಮಾಡಿದ್ರಿ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಬಿಟ್ಟೆ.. ಆದರೆ ಅವರು ನೀಡಿದ ಉತ್ತರಗಳು ನನ್ನನ್ನು ದಂಗು ಬಡಿಸಿತ್ತು. ಇಂದಿನ ವ್ಯವಸ್ಥೆಯ ಎಲ್ಲ ಲೋಪಗಳು ಮಕ್ಕಳ ಮಾತಲ್ಲಿ ವ್ಯಕ್ತವಾಗುತ್ತಿತ್ತು.[ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!]
ಗಣೇಶ ಹಬ್ಬಕ್ಕೆ ಇನ್ನು ಒಂದು ತಿಂಗಳಿದೆ. ಅದಾಗಲೇ ಮಕ್ಕಳು ಚಂದಾ ಎತ್ತಲು ಆರಂಭಿಸಿದ್ದಾರೆ. ಇಷ್ಟವಿದ್ರೆ ಕೊಡಿ, ಇಲ್ಲಾ ಅಂದ್ರೆನ ಬಿಟ್ಟಾಕಿ ಎಂಬ ಮಾತನ್ನು ನೀವು ಹೇಳಬಹುದು.. ಆದರೆ ವಾಸ್ತವನೇ ಬೇರೆ...
ನಾನು ಚಿಕ್ಕ ಹುಡುಗನನ್ನು ಪ್ರಶ್ನೆ ಮಾಡಲು ಶುರುವಿಟ್ಟುಕೊಂಡೆ. ಯಾವ ಶಾಲೆ ಎಂದು ಕೇಳಿದರೆ ಆತನ ಬಳಿ ಉತ್ತರವಿಲ್ಲ. ಮತ್ತೆ ಕೈ ಹಿಡಿದು ಕೇಳಿದೆ ಆಗಲೂ ಉತ್ತರವಿಲ್ಲ. ಅಂಕಲ್ ಎಷ್ಟಾದರೂ ಕೊಡಿ ಎನ್ನುತ್ತಲೇ ಹಿಂದಕ್ಕೆ ಹೆಜ್ಜೆ ಹಾಕುತ್ತಿದ್ದ. ಅವನನ್ನು ಬಿಟ್ಟು ದೊಡ್ಡ ಹುಡುಗನಲ್ಲಿ ಕೇಳಿದೆ.... ಆಗ ಸತ್ಯಾಂಶ ಹೊರಬಂದಿತ್ತು. ಚಿಕ್ಕ ಹುಡುಗ ಶಾಲೆಗೆ ಹೋಗುತ್ತಿಲ್ಲ. ಹಾಗಾದರೆ ಏನು ಮಾಡುತ್ತಿದ್ದಾನೆ ಅನ್ನೋದು ಬೇಕಲ್ಲ.
ಚಿಕ್ಕ ಹುಡುಗನ ಬಗ್ಗೆ ದೊಡ್ಡವ ಕೊಟ್ಟ ವಿವರಣೆ ಇಷ್ಟು, ಅಂಕಲ್ ಇವನ ತಂದೆ ತಾಯಿ ಪಾತ್ರೆ ತೊಳೆಯಲು ಹೋಗುತ್ತಾರೆ, ಈತ ಶಾಲೆಗೆ ಹೋದ ದಾಖಲೆಯಿಲ್ಲ. ಇವನ ತಂದೆ ತಾಯಿ ಅದನ್ನು ಮಾಡಿದ ಪ್ರಯತ್ನವೂ ಇಲ್ಲ.
ನೀನೇನು ಮಾಡ್ತಿದ್ದೀಯಾ? ನೀನಾದರೂ ಶಾಲೆಗೆ ಹೋಗುತ್ತೀಯಾ? ನನ್ನ ಪ್ರಶ್ನೆಗಳ ಸರಣಿ ಮುಂದುವರಿಸಿದ್ದೆ. ಹೌದು ಅಂಕಲ್ ನಾನು ಹೋಗ್ತಿನಿ, 4ನೇ ಕ್ಲಾಸು(ಶಾಲೆಯ ಹೆಸರು ಬೇಡ), ಗೌವರ್ನ್ ಮೆಂಟ್ ಶಾಲೆ... ಶಾಲೆಗೆ ಹೋಗುತ್ತಿಯಾ ಅಂದ ಮೇಲೆ ಇವತ್ತು ಧ್ವಜಾರೋಹಣ ಮಾಡಿರಬೇಕಲ್ಲಾ? ಎಂದೆ.
ಹುಡುಗನಿಂದ ಯಾವ ಉತ್ತರ ಬರಲಿಲ್ಲ. ಮತ್ತದೇ ಹಳೆ ರಾಗ 'ಅಂಕಲ್ ಎಷ್ಟಾಗುತ್ತೆ ಅಷ್ಟು ಕೊಡಿ' ನೀನು ಧ್ವಜಾರೋಹಣ ಮಾಡಿದೆಯಾ ಉತ್ತರ ಹೇಳಿದ್ರೆ ಚಂದಾ ಕೋಡುತ್ತೇನೆ ಎಂದೆ.[ಗಂಡನ ಕಳೆದುಕೊಂಡ ಮಹಿಳೆಯ ನೋವಿನ ಪತ್ರ]
ಅದಕ್ಕೆ ಅವನು ಕೊಟ್ಟ ಉತ್ತರ ಮತ್ತೆ ನನ್ನನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಇಲ್ಲಾ ಅಂಕಲ್ ಹೋಗಿಲ್ಲ, ನಾ ಶಾಲೆ ಕಡೆ ಹೋಗ್ದೆ 15 ದಿನ ಆಯ್ತು, ಯಾವಾಗಾದ್ರೂ ಹೋಗಿ ಬಿಸಿಯೂಟ ತಿನ್ಕೊಂಡು ಬರ್ತಿನಿ. ನಮ್ಮ ಅಪ್ಪನ ಜತೆ ಕಿರಾಣಿ ಅಂಗಡಿಯೊಂದರ ಕೆಲಸಕ್ಕೆ ಹೋಗ್ತಿನಿ ಅಂದ!!!
ನನ್ನ ಜತೆ ಬನ್ನಿ ಎನ್ ಜಿಒ ಬಳಿ ಕರೆದುಕೊಂಡು ಹೋಗತ್ತೇನೆ ಎಂದೇ. ಅಷ್ಟು ಹೇಳಿದ್ದೆ ತಡ ಅಲ್ಲಿಂದ ಕಾಲು ಕೀಳುವ ಯತ್ನ ಮಾಡಿದರು. ನಾನವರ ಸಮಯ ಹಾಳು ಮಾಡಿದ್ದಕ್ಕೆ ಒಂದಿಷ್ಟು ದುಡ್ಡನ್ನು 'ಗಣೇಶನ' ಹೆಸರಲ್ಲಿ ಕೊಟ್ಟು ಕಳಿಸಿದೆ. ಮನೆಗೆ ತೆರಳಲು ಪಾರ್ಕ್ ನ ಗೇಟ್ ಬಳಿ ಬಂದಾಗ ಮೂಲೆಯಲ್ಲಿ ಹಣ ಎಣಿಸುತ್ತ ನಿಂತಿದ್ದ ನಾಲ್ಕು(ಮಾತನಾಡಿದ ಇಬ್ಬರ ಜತೆ ಮತ್ತಿಬ್ಬರು) ಮಕ್ಕಳು ನನ್ನನ್ನು ನೋಡುತ್ತಲೇ ಒಬ್ಬರಿಗಿಂತ ಒಬ್ಬರು ವೇಗವಾಗಿ ಓಡಿದರು.
ಬಹುಷಃ ಬೆಂಗಳೂರಿನಲ್ಲಿ ಇಂಥ ಅದೆಷ್ಟು ಮಕ್ಕಳಿದ್ದಾರೋ? ನಿಜವಾಗಿಯೂ ಇವರೆಲ್ಲ ಶಾಲೆಗೆ ಹೋಗುತ್ತಿದ್ದಾರೆಯೇ? ಮರಳಿ ಬಾ ಶಾಲೆಗೆ, ಸರ್ವಶಿಕ್ಷಾ ಅಭಿಯಾನದ ಕಣ್ಣಿಗೆ ಇವರು ಬೀಳುತ್ತಿಲ್ಲವೇ? ಸುಮ್ಮನೆ ದೊಡ್ಡದೊಂದು ಪಾರ್ಕ್ ಗೆ ಹೋಗಿ ಕುಳಿತುಕೊಳ್ಳಿ ಗಣೇಶನ ಹಬ್ಬಕ್ಕೆ ಚಂದಾ ಕೇಳುವವರು, ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷದ ಕ್ಯಾಪ್ ಹಾಕಿ ಹೊರಟ ಮಕ್ಕಳು ಕಾಣಸಿಗುತ್ತಾರೆ.
ಸ್ವಾತಂತ್ರ್ಯ ದಿನವೇ ನಡೆದ ಈ ಘಟನಾವಳಿಗಳು ನಮ್ಮ ದೇಶದ 69 ವರ್ಷದ ಇತಿಹಾಸವನ್ನು ಹೇಳಿದಂತೆ ಭಾಸವಾಗಿತ್ತು. ತಿಲಕರು ಜನರನ್ನು ಒಟ್ಟುಗೂಡಿಸಲು, ಒಗ್ಗಟ್ಟನ್ನು ಪ್ರದರ್ಶಿಸಲು ಆರಂಭಿಸಿದ ಗಣೇಶ 'ಬೀದಿಗೆ' ಬಂದಿದ್ದು ಚಂದಾ ಎತ್ತಲು ಒಂದು ಕಾರಣವಾಗಿದ್ದಾನೆ. ಮಕ್ಕಳಿಗೂ ಈ 'ಚಂದಾ' ರೋಗ ಅಂಟಿಕೊಂಡಿದೆ. ನವ ಭಾರತದ ಕಲ್ಪನೆ ಮಕ್ಕಳ ಓಟದಂತೆ ಕತ್ತಲೆಯಲ್ಲಿ ಮರೆಯಾಯಿತೇ? ಉತ್ತರ ಗೊತ್ತಿಲ್ಲ...